ಅತ್ತಿಗೆಯ ಜೊತೆ ಮದುವೆ- ಮನನೊಂದು ಆತ್ಮಹತ್ಯೆಗೆ ಶರಣಾದ 9ನೇ ಕ್ಲಾಸ್ ಬಾಲಕ

Public TV
1 Min Read

ಪಾಟ್ನಾ: ಅಣ್ಣನ ಸಾವಿನ ಬಳಿಕ ಹಿರಿಯರ ಬಲವಂತದಿಂದ ಅತ್ತಿಗೆಯನ್ನು ಮದುವೆಯಾಗಿದ್ದ 15 ವರ್ಷದ ಬಾಲಕ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಗಯಾ ಜಿಲ್ಲೆಯ ವಿನೋಭಾನಗರದಲ್ಲಿ ನಡೆದಿದೆ.

9ನೇ ತರಗತಿ ಓದುತ್ತಿದ್ದ ಮಹದೇವ್ ಕುಮಾರ್ ದಾಸ್ ಆತ್ಮಹತ್ಯೆಗೆ ಶರಣಾದ ಬಾಲಕ. ಮಹದೇವನಿಗೆ ತನಗಿಂತ 10 ವರ್ಷ ದೊಡ್ಡವರಾದ ಅತ್ತಿಗೆ ರೂಬಿ ದೇವಿಯೊಂದಿಗೆ ಮದುವೆ ಮಾಡಲಾಗಿತ್ತು. ಮಹದೇವ್ ಸಾವನ್ನಪ್ಪಿದ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಆದರೆ ನೆರೆಹೊರೆಯವರು ಹೇಳುವಂತೆ ಬಾಲಕನಿಗೆ ಬಲವಂತಾಗಿ ಮದುವೆ ಮಾಡಲಾಗಿತ್ತು. ಹಾಗಾಗಿ ಆತ ಪೋಷಕರ ವಿರುದ್ಧ ಹರಿಹಾಯ್ದಿದ್ದ. ಈ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹದೇವ್ ಅಣ್ಣ ಸಂತೋಷ್ ಕುಮಾರ್ ದಾಸ್, 2013ರಲ್ಲಿ ಎಲೆಕ್ಟ್ರಿಕ್ ಶಾಪ್ ನಲ್ಲಿ ಕೆಲಸ ಮಾಡುವಾಗ ವಿದ್ಯುತ್ ಅವಘಡದಲ್ಲಿ ಸಾವನ್ನಪ್ಪಿದ್ದರು. ಮಹದೇವ್ ತನ್ನ ಅತ್ತಿಗೆಯನ್ನು ತಾಯಿಯ ರೂಪದಲ್ಲಿ ಕಾಣುತ್ತಿದ್ದನು. ಆದರೂ ಮಹದೇವ್ ಪೋಷಕರು ಬಲವಂತವಾಗಿ ಮದುವೆ ಮಾಡಿಸಿದ್ದರು.

ಹಣಕ್ಕಾಗಿ ಬಲವಂತದ ಮದುವೆ: ಸಂತೋಷ್ ಕುಮಾರ್ ಸಾವನ್ನಪ್ಪಿದ ಬಳಿಕ 80 ಸಾವಿರ ರೂ. ಪರಿಹಾರ ಹಣ ಬಂದಿತ್ತು. ಈ ಹಣ ಸಂಪೂರ್ಣವಾಗಿ ತಮಗೆ ಸೇರಬೇಕೆಂದು ರೂಬಿ ದೇವಿ ಪೋಷಕರು ಗಲಾಟೆ ತೆಗೆದಿದ್ದರು. ಬಂದ ಪರಿಹಾರ ಯಾರಿಗೆ ಲಭಿಸಬೇಕು ಎಂಬುದರ ಬಗ್ಗೆ ಎರಡು ಕುಟುಂಬಗಳ ನಡುವೆ ಸಾಕಷ್ಟು ಗಲಾಟೆಯೂ ನಡೆದಿತ್ತು. ಕೊನೆಗೆ ರೂಬಿದೇವಿಯ ಮಾವ ಚಂದ್ರೇಶ್ವರ್ ದಾಸ್ ತನ್ನ ಕಿರಿಯ ಮಗನೊಂದಿಗೆ ಸೊಸೆಯ ಮದುವೆ ಮಾಡುತ್ತೇನೆ ಎಂದು ಹೇಳಿ ರೂಬಿದೇವಿ ಪೋಷಕರಿಗೆ ಕೇವಲ 27 ಸಾವಿರ ರೂ. ಹಣ ನೀಡಿದ್ದನು. ಹೀಗಾಗಿ ಮಹದೇವ ಪೋಷಕರು ಹಣದ ದುರಾಸೆಗಾಗಿ ಮಗನಿಗಿಂತ ದೊಡ್ಡವರಾದ ಮತ್ತು ತಾಯಿ ಸಮಾನಳಾದ ಅತ್ತಿಗೆಯನ್ನು ಆತನೊಂದಿಗೆ ವಿವಾಹ ಮಾಡಿಸಿದ್ದರು.

ರೂಬಿದೇವಿಗೆ 5 ವರ್ಷದ ಮತ್ತು 7 ವರ್ಷದ ಇಬ್ಬರು ಮಕ್ಕಳಿದ್ದಾರೆ. ಬಾಲಕನಿಗೆ ಬಲವಂತವಾಗಿ ಮದುವೆ ಮಾಡಿದ್ದರಿಂದ ಆತ್ಮಹತ್ಯೆಗೆ ಶರಣಾಗಿದ್ದಾನೆ. ಹಾಗಾಗಿ ಪ್ರಕರಣ ಸಂಬಂಧ ಮಹದೇವ್ ಪೋಷಕರ ವಿರುದ್ಧ ದೂರನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *