ಗುಜರಾತ್ ನಲ್ಲಿ ಇಂದಿನಿಂದ ಮೋದಿ ರ‍್ಯಾಲಿ – ಟಿಕೆಟ್ ಹಂಚಿಕೆಯಲ್ಲಿ ಸುಸ್ತಾದ ಕೈ

Public TV
2 Min Read

ಗಾಂಧಿನಗರ: 2019ರ ಚುನಾವಣೆಗೆ ನಿರ್ಣಾಯಕ ಎನ್ನಲಾಗಿರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಇಂದಿನಿಂದ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಪ್ರಚಾರ ಕೈಗೊಳ್ಳಲಿದ್ದಾರೆ.

22 ವರ್ಷಗಳಿಂದ ಅಧಿಕಾರದ ಗದ್ದುಗೆ ಹಿಡಿದಿರುವ ತವರು ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯ ಹೊರತಾಗಿಯೂ ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರುವುದು ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೋಡಿಗೆ ಬೆಟ್ಟದಂತ ಸವಾಲಾಗಿದೆ.

ಇಂದು ಒಂದೇ ದಿನ ಮೋದಿ, ಐದು ಜಿಲ್ಲೆಗಳಲ್ಲಿ ಬೃಹತ್ ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಭೂಕಂಪಕ್ಕೆ ನಲುಗಿದ್ದ ಭುಜ್, ರಾಜ್‍ಕೋಟ್‍ನ ಜಸ್ ದನ್, ಅಮ್ರೆಲಿಯ ಧಾರಿ, ಗುಜರಾತ್‍ನ ಕಮ್ರೇಜ್‍ನಲ್ಲಿ ಮತಯಾಚಿಸಲಿದ್ದಾರೆ. ನಾಳೆ ಸೋಮನಾಥ್ ಬಳಿಯ ಮೋರ್ಬಿ, ಪ್ರಾಚಿ, ದಕ್ಷಿಣ ಗುಜರಾತ್‍ನ ನವ್ರಾಸಿ ಮತ್ತು ಭಾವ್‍ನಗರದ ಪಾಲಿಠಾನದಲ್ಲಿ ಪ್ರಚಾರ ಮಾಡಲಿದ್ದಾರೆ.

ಬಿಜೆಪಿ ವಿರುದ್ಧ ತೊಡೆತಟ್ಟಿರುವ ಪಾತಿದಾರ್, ದಲಿತ ಮತ್ತು ಸಣ್ಣ ವ್ಯಾಪಾರಿಗಳಿಗೆ ಮೋದಿ ಎರಡು ದಿನಗಳ ತಮ್ಮ ಭಾಷಣದಲ್ಲಿ ಏನು ಸಮಾಧಾನ ಹೇಳುತ್ತಾರೆ ಅನ್ನೋದು ತುಂಬಾನೇ ಕುತೂಹಲ ಮೂಡಿಸಿದೆ. ಮೋದಿ ನಾಡಲ್ಲಿ ಭರ್ಜರಿ ಚುನಾವಣಾ ಪ್ರಚಾರ ಕೈಗೊಂಡಿರುವ ರಾಹುಲ್ ಗಾಂಧಿ, ಗುಜರಾತ್ ಅಭಿವೃದ್ಧಿ ಎಲ್ಲಾಗಿದೆ ಎಂಬ ಪ್ರಶ್ನೆಗಳನ್ನು ಕೇಳುತ್ತಾ ಟಾರ್ಗೆಟ್ ಮಾಡ್ತಿದ್ದಾರೆ.

ಮುಖ್ಯಮಂತ್ರಿಗಳು ಮತ್ತು ಕೇಂದ್ರ ಸರ್ಕಾರವನ್ನೇ ಗುಜರಾತಿನಲ್ಲಿ ತೊಡಗಿಸಿಕೊಂಡಿರುವ ಬಿಜೆಪಿ ಕೊನೆಯ ಕ್ಷಣದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರಿಗೂ ಮೊರೆ ಹೋಗಿದೆ. ಆಕ್ರೋಶಿತಗೊಂಡಿರುವ ಸಮುದಾಯವನ್ನ ಆರ್ ಎಸ್ ಎಸ್ ಕಾರ್ಯಕರ್ತರು ಸಮಾಧಾನ ಮಾಡೋ ಸರ್ಕಸ್ ಮಾಡ್ತಿದ್ದಾರೆ. ಜಿಎಸ್‍ಟಿ, ದಲಿತರ ಮೇಲಿನ ಹಲ್ಲೆ, ಪಟೇಲ್ ಮೀಸಲಾತಿ ಬಗ್ಗೆಯೆಲ್ಲಾ ಬಿಜೆಪಿ ನಿಲುವೇನು ಎಂಬ ಬಗ್ಗೆ ಮನವರಿಕೆ ಮಾಡೋ ಹರಸಾಹಸ ಪಡ್ತಿದ್ದಾರೆ. ಕಾಂಗ್ರೆಸ್‍ಗೆ ಬೆಂಬಲ ಘೋಷಿಸಿರುವ ಹಾರ್ದಿಕ್ ಪಟೇಲ್, ಮುಖ್ಯಮಂತ್ರಿ ವಿಜಯ್ ರೂಪಾನಿ ವಿರುದ್ಧ ಸೇರಿದಂತೆ ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್‍ನಲ್ಲಿ 10 ಮೆಗಾ ರ‍್ಯಾಲಿಗಳನ್ನು ನಡೆಸಲಿದ್ದಾರೆ.

ಇತ್ತ ಟಿಕೆಟ್ ಹಂಚಿಕೆ ವಿಚಾರದಲ್ಲಿ ಗುಜರಾತ್ ಕಾಂಗ್ರೆಸ್‍ನಲ್ಲಿ ಬಿರುಗಾಳಿ ಎದ್ದಿದೆ. ಒಂದು ಕಡೆ ಉಪಾಧ್ಯಕ್ಷ ರಾಹುಲ್ ಗಾಂಧಿ ಬಿರುಗಾಳಿಯಂತೆ ಪ್ರಚಾರ ಮಾಡ್ತಿದ್ರೂ ಯಾರಿಗೆ ಟಿಕೆಟ್ ಕೊಡ್ಬೇಕು ಅನ್ನೋದೇ ಕೈಗೆ ತಲೆನೋವಾಗಿದೆ. ನಿನ್ನೆಯಷ್ಟೇ ತಡ ರಾತ್ರಿ 70 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ವಿಚಿತ್ರ ಅಂದ್ರೆ ನಾಮಪತ್ರ ಸಲ್ಲಿಕೆಗೆ ಇಂದೇ ಕೊನೆಯ ದಿನ. 14 ಅಭ್ಯರ್ಥಿಗಳಿಗೆ ದೂರವಾಣಿ ಮೂಲಕವೇ ನಾಮಪತ್ರ ಸಲ್ಲಿಸುವಂತೆ ಸೂಚಿಸಲಾಗಿದೆ.

ಮೊದಲ ಹಂತದಲ್ಲಿ ಡಿಸೆಂಬರ್ 9ರಂದು ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್‍ನ 89 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಉಳಿದ ಸ್ಥಾನಗಳಿಗೆ ಡಿಸೆಂಬರ್ 14 ಉಳಿದ 93 ಸ್ಥಾನಗಳಲ್ಲಿ ಮತದಾನ ನಡೆಯಲಿದೆ. ಟಿಕೆಟ್ ಸಿಗದೇ ಬಂಡಾಯ ಅಭ್ಯರ್ಥಿಗಳು ಕಣಕ್ಕಿಳಿಯುವುದನ್ನು ತಪ್ಪಿಸಲು ಕಾಂಗ್ರೆಸ್ ಕೊನೆಯ ಕ್ಷಣದಲ್ಲಿ ಟಿಕೆಟ್ ಘೋಷಣೆ ಮಾಡೋ ತಂತ್ರಕ್ಕೆ ಮೊರೆ ಹೋಗಿದೆ.

Share This Article
Leave a Comment

Leave a Reply

Your email address will not be published. Required fields are marked *