ಚುನಾವಣೆಯಲ್ಲಿ ಗೆಲ್ಲಲು ವಾಮಾಚಾರದ ಮೊರೆ ಹೋಗಿದ್ದೆ: ಐವಾನ್ ಡಿಸೋಜಾ

Public TV
1 Min Read

ಬೆಳಗಾವಿ: ಚುನಾವಣೆಯಲ್ಲಿ ಗೆಲವು ಪಡೆಯಲು ನಾನು ವಾಮಾಚಾರ ಮಾಡಿಸಿದ್ದೆ ಎಂದು ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಹೇಳಿದ್ದಾರೆ.

ರಾಜ್ಯ ಸರ್ಕಾರ ಜಾರಿಗೆ ತರಲು ಬಯಸಿರುವ ಮೌಡ್ಯ ನಿಷೇಧ ಮಸೂದೆಯ ಚರ್ಚೆ ವೇಳೆ ವಿಧಾನಪರಿಷತ್ ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡ ಅವರು, ಸ್ವತಃ ಚುನಾವಣೆಯಲ್ಲಿ ಗೆಲುವು ಪಡೆಯಲು ಕೇರಳದಲ್ಲಿ ಸ್ವಾಮೀಜಿಯೊಬ್ಬರಿಂದ ವಾಮಾಚಾರ ಮೊರೆ ಹೋಗಿದ್ದೆ ಎಂದು ತಿಳಿಸಿದರು.

ಚುನಾವಣೆ ನಡೆದ ಬಳಿಕ ಅಂದು ನನ್ನ ಬಳಿ ಇದ್ದ ಸಹಾಯಕರು ವಾಮಾಚಾರ ಮಾಡಿಸಿದರೆ ಗೆಲುವು ಸಿಗುತ್ತದೆ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ವಾಮಾಚಾರ ಮಾಡಿಸಿ ಎಂದು ಒತ್ತಡ ಹೇರಿದ್ದರು. ಅವರ ಒತ್ತಡಕ್ಕೆ ಮಣಿದು ಸ್ವಾಮೀಜಿ ಬಳಿ ತೆರಳಿದೆ. ಕೆಲವು ಕಲ್ಲು ತೆಗೆದು ಅದು-ಇದು ಹೇಳಿ, ವಾಮಾಚಾರ ಮಾಡಲು ತಿಳಿಸಿದರು. ಅದರಂತೆ 1.50 ಲಕ್ಷ ರೂ. ಹಣ ಖರ್ಚು ಮಾಡಿದೆ. ಆದರೆ ನಾನು ಆ ಚುನಾವಣೆಯಲ್ಲಿ ಸೋಲು ಕಂಡೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

ಈ ವೇಳೆ ಮಧ್ಯ ಪ್ರವೇಶಿಸಿದ ಉಗ್ರಪ್ಪ, ವಾಮಾಚಾರಕ್ಕೆ ಖರ್ಚು ಮಾಡಿದ ಹಣವನ್ನು ಚುನಾವಣೆಯ ಖರ್ಚು, ವೆಚ್ಚಗಳಲ್ಲಿ ಘೋಷಣೆ ಮಾಡಿದ್ದೀಯಾ? ಒಂದು ವೇಳೆ ಘೋಷಣೆ ಮಾಡದೇ ಇದ್ದರೆ ಅದು ಅಪರಾಧವಾಗುತ್ತದೆ ಎಂದು ಸಲಹೆ ನೀಡಿದರು.

ಇದಕ್ಕೆ ಐವಾನ್ ಡಿಸೋಜಾ ಎಲ್ಲ ಖರ್ಚು ವೆಚ್ಚಗಳನ್ನು ಆಯೋಗಕ್ಕೆ ನೀಡಿದ್ದೇನೆ. ನಮ್ಮಂತವರೇ ಮೋಸ ಹೋಗಿರುವಾಗ ಬಡವರು ಮೋಸ ಹೋಗದೇ ಇರುತ್ತಾರಾ? ಹೀಗಾಗಿ ಈ ಸರ್ಕಾರದ ಮೌಢ್ಯ ನಿಷೇಧ ಮಸೂದೆಗೆ ನಾನು ಸಂಪೂರ್ಣ ಬೆಂಬಲ ನೀಡುತ್ತೇನೆ. ಅಲ್ಲದೇ ಇಂತಹ ಮೌಢ್ಯಕ್ಕೆ ಬೆಂಬಲ ವ್ಯಕ್ತಪಡಿಸುವ ಜಾಹೀರಾತುಗಳನ್ನು ನಿಷೇಧ ಮಾಡಬೇಕು, ಇಂತಹ ವಿಚಾರಗಳಿಂದ ಯುವ ಜನತೆ ದೂರ ಉಳಿಯಬೇಕು ಎಂದರು.

https://www.youtube.com/watch?v=FJ77Lb1kgyo

Share This Article
Leave a Comment

Leave a Reply

Your email address will not be published. Required fields are marked *