ಸದನಕ್ಕೆ ಚಕ್ಕರ್, ಉಪ್ಪು ಹುಳಿ ಖಾರಕ್ಕೆ ಅಂಬರೀಶ್ ಹಾಜರ್

Public TV
2 Min Read

ಬೆಂಗಳೂರು: ಬೆಳಗಾವಿಯಲ್ಲಿ ಆಯೋಜನೆಗೊಂಡಿರುವ ವಿಶೇಷ ಅಧಿವೇಶನಕ್ಕೆ ಚಕ್ಕರ್ ಹಾಕಿ ಉಪ್ಪು ಹುಳಿ ಖಾರ ಸಿನಿಮಾದ ಕಾರ್ಯಕ್ರಮಕ್ಕೆ ಮಾಜಿ ವಸತಿ ಸಚಿವ ಅಂಬರೀಶ್ ಹಾಜರಾಗಿದ್ದು ಟೀಕೆಗೆ ಗುರಿಯಾಗಿದೆ.

ಸೋಮವಾರದಿಂದ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ಆರಂಭವಾಗಿದೆ. ಆದರೆ ನಟ ಅಂಬರೀಶ್ `ಉಪ್ಪು ಹುಳಿ ಖಾರ’ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕುಣಿದು ಕುಪ್ಪಳಿಸಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ನಡೆದ `ಉಪ್ಪು ಹುಳಿ ಖಾರ’ ಚಿತ್ರದ ಟೀಸರ್ ಲಾಂಚ್ ಮಾಡಲು ಅಂಬರೀಶ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ  ಟೀಸರ್ ಲಾಂಚ್ ಮಾಡಿದ ಅಂಬರೀಶ್ ಉಪ್ಪು ಹುಳಿ ಖಾರ ಚಿತ್ರದ ರೋಮಿಯೋ ಹಾಡಿಗೆ ಸ್ಜೇಜ್ ಮೇಲೆ ಸ್ಟೆಪ್ ಹಾಕಿದರು. ಮಾಲಾಶ್ರೀ ಅಂಬರೀಶ್‍ಗೆ ಲವ್ ಯು ಅಂದ್ರು ಅದಕ್ಕೆ ಅಂಬರೀಶ್ ಮೀಟು ಲವ್ ಎಂದು ಹೇಳಿ ಸ್ಜೇಜ್ ಮೇಲೆ ಮನೋರಂಜನೆ ನೀಡಿದರು.

ವಿಧಾನಸಭಾ ಸಚಿವಾಲಯದಿಂದ ಸಿಕ್ಕಿದ ಮಾಹಿತಿ ಪ್ರಕಾರ ಸಚಿವ ಸ್ಥಾನ ಕಳೆದುಕೊಂಡ ಮೇಲೆ ಕೇವಲ ನಾಲ್ಕು ದಿನ ಮಾತ್ರ ಕಲಾಪಕ್ಕೆ ಅಂಬರೀಶ್ ಹಾಜರಾಗಿದ್ದಾರೆ. ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಅಂಬರೀಶ್ ಮೇ 2013ರಿಂದ 2016ರ ಜೂನ್ ವರೆಗೆ ವಸತಿ ಸಚಿವರಾಗಿ ಕಾರ್ಯನಿರ್ವಹಿಸಿ ಬಳಿಕ ರಾಜೀನಾಮೆ ನೀಡಿದ್ದರು.

ಉತ್ತರ ಕರ್ನಾಟಕದ ಸಮಸ್ಯೆ ಪರಿಹಾರಕ್ಕಾಗಿ ಬೆಳಗಾವಿಯಲ್ಲಿ ಅಧಿವೇಶನ ಕರೆಯಲಾಗಿದೆ. ಒಟ್ಟು 225 ಶಾಸಕರ ಪೈಕಿ ಮೊದಲ ದಿನ ಬೆಳಗ್ಗೆ 11 ಗಂಟೆಗೆ ಹಾಜರಾಗಿದ್ದು ಕೇವಲ 20 ಮಂದಿ ಮಾತ್ರ.

ಕೊನೇ ಪಕ್ಷದ ಇದು ವರ್ಷದ ಕೊನೇ ಅಧಿವೇಶನ. ಚುನಾವಣೆ ಹತ್ತಿರ ಇದೆ. ಜನ ನಮ್ಮ ನೋಡುತ್ತಿರುತ್ತಾರೆ. ಈ ಬಾರಿಯಾದ್ರೂ ನಾವು ಸದನದಲ್ಲಿ ಕಾಣಿಸಿಕೊಳ್ಳೋಣ ಎನ್ನುವ ಭಯವೂ ಶಾಸಕರಿಗೆ ಇಲ್ಲ. ಜವಾಬ್ದಾರಿ ಮೊದಲೇ ಇಲ್ಲದಂತೆ ವರ್ತಿಸಿದ್ದಾರೆ. ಶಾಸಕರ ಹಾಜರಾತಿ ಕಡಿಮೆ ಇದ್ದ ಕಾರಣ ಒಂದೇ ನಿಮಿಷಕ್ಕೆ ಸ್ಪೀಕರ್ ಕೋಳಿವಾಡ ಕಲಾಪವನ್ನು ಮುಂದೂಡಿದ್ದರು.

10 ದಿನಗಳ ಅಧಿವೇಶನಕ್ಕೆ ಬರೋಬ್ಬರಿ 28 ರಿಂದ 30 ಕೋಟಿ ರೂ. ಖರ್ಚು ಆದರೆ ದಿನಕ್ಕೆ ಎರಡೂವರೆಯಿಂದ ಮೂರು ಕೋಟಿ ರೂ. ವೆಚ್ಚವಾಗುತ್ತದೆ. ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿರುವ ಶಾಸಕರಿಗೆ 2,500 ರೂ. ಸಾರಿಗೆ ಭತ್ಯೆ ನೀಡಿದರೆ, ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಿರುವ ಶಾಸಕರಿಗೆ 5 ಸಾವಿರ ರೂ.ಸಾರಿಗೆ ಭತ್ಯೆ ನೀಡಲಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *