ಟಿಪ್ಪು ಜಯಂತಿ ವಿರೋಧಿಸಿ KSRTC ಬಸ್‍ಗೆ ಕಲ್ಲು- ಶಾಸಕ ಅಪ್ಪಚ್ಚುರಂಜನ್ ಸೇರಿ ಹಲವರ ಬಂಧನ

Public TV
1 Min Read

ಮಡಿಕೇರಿ: ಟಿಪ್ಪು ಜಯಂತಿ ಆಚರಣೆಗೆ ಈಗಾಗಲೇ ಕೊಡಗಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಕಿಡಿಗೇಡಿಗಳು ಕೆಎಸ್‍ ಆರ್ ಟಿಸಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಮಡಿಕೇರಿ ತಾಲೂಕಿನ ಗಾಳಿಬೀಡು ಸಮೀಪದ ಕಾಲೂರು ಕಟ್ಟೆಕಲ್ಲು ಬಳಿ ಈ ಘಟನೆ ನಡೆದಿದೆ. ಕೆಎ-09-ಎಫ್ -5205 ನಂಬರಿನ ಕೆಎಸ್‍ಆರ್ ಟಿಸಿ ಬಸ್‍ಗೆ ಇಬ್ಬರು ದುಷ್ಕರ್ಮಿಗಳು ಕಲ್ಲು ತೂರಿದ್ದು, ಬಸ್ಸಿನ ಮುಂಭಾಗದ 1 ಗ್ಲಾಸ್ ಮತ್ತು ಸೈಡ್‍ನಲ್ಲಿ 2 ಗ್ಲಾಸ್ ಪುಡಿಪುಡಿಯಾಗಿದೆ.

ಕೋಟೆ ಸಭಾಂಗಣದಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲು ಮುಂದಾದ ಶಾಸಕ ಅಪ್ಪಚ್ಚುರಂಜನ್, ಎಂಎಲ್‍ಸಿ ಸುನೀಲ್ ಸುಬ್ರಹ್ಮಣಿ ಸೇರಿ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ರಸ್ತೆಯಲ್ಲಿ ಜೈ ಶ್ರೀರಾಮ್ ನೃತ್ಯ ಮಾಡಿ ವಿರೋಧ ವ್ಯಕ್ತಪಡಿಸಿದ ಹಿಂದೂ ಸಂಘಟನೆ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಎರಡು ಬಸ್, 3 ಬೊಲೆರೋ ವಾಹನಗಳಲ್ಲಿ ಹಿಂದೂ ಕಾರ್ಯಕರ್ತರ ಬಂಧನವಾಗಿದ್ದು, ಅರೆಸ್ಟ್ ಮಾಡಲು ಪೊಲೀಸರಿಗೆ ವಾಹನಗಳ ಕೊರತೆ ಎದುರಾಗಿದೆ. ಎರಡು ಬಸ್, 3 ಬೊಲೆರೋ ಗಾಡಿ ಬಿಟ್ಟು ಬೇರೆ ಗಾಡಿ ವ್ಯವಸ್ಥೆ ಇಲ್ಲವಾಗಿದೆ. ಹೀಗಾಗಿ ಕಾರ್ಯಕರ್ತರನ್ನ ಬಂಧನ ಮಾಡಲು ಸಾಧ್ಯವಾಗಿಲ್ಲ. ನೂರುಕ್ಕು ಹೆಚ್ಚು ಕಾರ್ಯಕರ್ತರು ರಸ್ತೆ ಮಧ್ಯೆ ಪ್ರತಿಭಟನೆ ಮುಂದುವರಿಸಿದ್ದು, ಹಿಂದೂಪರ ಸಂಘಟನೆಗಳ ಪ್ರತಿಭಟನೆ ತಡಿಯಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಟಿಪ್ಪು ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಕೊಡಗು ಬಂದ್‍ಗೆ ಟಿಪ್ಪು ಜಯಂತಿ ಆಚರಣಾ ವಿರೋಧಿ ಸಮಿತಿ ಕರೆ ನೀಡಿರೋ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆಯಿಂದಲೇ ಮಂಜಿನ ನಗರಿ ಮಡಿಕೇರಿಯ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಬಂದ್ ಆಗಿವೆ. ಅಲ್ಲದೆ ಖಾಸಗಿ ಬಸ್‍ನವರು ಪ್ರಯಾಣಿಕರ ಹಿತದೃಷ್ಠಿಯಿಂದ ಬಸ್ ಸಂಚಾರ ಮಾಡುವುದಿಲ್ಲವೆಂದು ತಿಳಿಸಿದ್ದಾರೆ. ಇನ್ನು ಅಟೋ ಚಾಲಕರು, ಟ್ಯಾಕ್ಸಿ ಚಾಲಕರು ಬಂದ್‍ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

ಮಡಿಕೇರಿ ತಾಲೂಕಿನ ಕಡಗದಳು ಗ್ರಾಮದಲ್ಲಿ ಕಳೆದ ರಾತ್ರಿ ಮುಖ್ಯ ರಸ್ತೆಗಳಿಗೆ ಮರಗಳನ್ನು ಕಡಿದು ಹಾಕುವ ಮೂಲಕ ರಸ್ತೆ ಸಂಚಾರಕ್ಕೆ ಅಡ್ಡಿಯುಂಟು ಮಾಡಲಾಗಿತ್ತು. ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿ ಮರಗಳನ್ನು ತೆರವುಗೊಳಿಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *