ಮುಂಬೈ: ವಿಮಾ ಏಜೆಂಟ್ ಮಹಿಳೆಯೊಬ್ಬರು ತನ್ನ ಹೊಸ ಗೆಳತಿಯ ಮನೆಯಲ್ಲಿಯೇ ಕತ್ತು ಸೀಳಿದ ಸ್ಥಿತಿಯಲ್ಲಿ ಕೊಲೆಯಾಗಿರೋ ಆಘಾತಕಾರಿ ಘಟನೆ ನಡೆದಿದೆ.
ಮೃತ ದುರ್ದೈವಿ ಮಹಿಳೆಯನ್ನು ಕೀರ್ತಿನಿಧಿ ವಿದ್ಯಾಧರ್ ಶರ್ಮಾ(67) ಎಂದು ಗುರುತಿಸಲಾಗಿದೆ. ಈ ಘಟನೆ ಸೋಮವಾರ ರಾತ್ರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆಯ ಗೆಳತಿಯನ್ನು ಅರ್ನಲಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಏನಿದು ಘಟನೆ?: ವಿರಾರ್ ನ ರಜಾಂಜಿ ಎವರ್ ಶೈನ್ ಗ್ಲೋಬಲ್ ಸಿಟಿ ಅವೆನ್ಯೂ ಸೊಸೈಟಿಯಲ್ಲರೋ ಫ್ಲ್ಯಾಟ್ ನಲ್ಲಿ ಮಹಿಳೆಯ ಶವಪತ್ತೆಯಾಗಿದೆ. ಕತ್ತು ಸೀಳಿದ ರೀತಿಯಲ್ಲಿ ಶವ ಪತ್ತೆಯಾಗಿದ್ದು, ಮೃತದೇಹದ ಮೇಲೆ ಗಾಯಗಳಿದ್ದವು ಅಂತ ಪೊಲೀಸರು ತಿಳಿಸಿದ್ದಾರೆ.
ಇದೇ ಫ್ಲ್ಯಾಟ್ ನಲ್ಲಿ ಗೆಳತಿ ರಿಯಲ್ ಎಸ್ಟೇಟ್ ಏಜೆಂಟ್ 49 ವರ್ಷದ ಪುಷ್ಪಾ ವಾಸುಮ್ದಾನಿ ತನ್ನ ಇಬ್ಬರು ಮಕ್ಕಳೊಂದಿಗೆ ಕಳೆದ 2 ವರ್ಷದಿಂದ ವಾಸಿಸುತ್ತಿದ್ದರು. ವಾಸುಮ್ದಾನಿ ಮತ್ತು ಮೃತ ಶರ್ಮಾ ಅವರನ್ನು 15 ದಿನಗಳ ಹಿಂದೆಯಷ್ಟೇ ಬ್ಯೂಟಿ ಪಾರ್ಲರೊಂದರಲ್ಲಿ ಭೇಟಿಯಾಗಿದ್ದರು. ಆ ಬಳಿಕ ಅವರಿಬ್ಬರು ಗೆಳತಿಯರಾದ್ರು. ಅಂತೆಯೇ ಕಳೆದ ಭಾನುವಾರ ಶರ್ಮಾ ಅವರು ವಾಸುಮ್ದಾನಿ ಮನೆಗೆ ತೆರಳಿದ್ದವರು ವಾಪಸ್ ಬಂದಿರಲಿಲ್ಲ. ಅವರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು. ಈ ಹಿನ್ನೆಲೆಯಲ್ಲಿ ಶರ್ಮಾರಿಗಾಗಿ ಅವರ ಕುಟುಂಬ ಹುಡುಕಾಟ ನಡೆಸಿತ್ತು. ಅಂತೆಯೇ ಅವರು ವಾಸುಮ್ದಾನಿ ಮನೆಗೆ ತೆರಳಿದ್ದರು. ಆದ್ರೆ ಆ ಸಂದರ್ಭ ಮನೆಗೆ ಬೀಗ ಜಡಿದಿತ್ತು. ಹೀಗಾಗಿ ಅಲ್ಲಿಂದ ವಾಪಾಸ್ಸಾದ ಶರ್ಮಾ ಕುಟುಂಬ ಅರ್ನಲಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು ಅಂತ ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ಶರ್ಮಾ ಇನ್ಶುರೆನ್ಸ್ ಪಾಲಿಸಿ ಮಾಡುವ ಸಲುವಾಗಿ ವಾಸುಮ್ದಾನಿ ಮನೆಗೆ ತೆರಳಿರಬಹುದು. ಈ ವೇಳೆ ದರೋಡೆ ನಡೆಸಿ ವಾಸುಮ್ದಾನಿಯೇ ಕೊಲೆ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಯಾಕಂದ್ರೆ ಶರ್ಮಾ ಮೈಯಲಿದ್ದ ಚಿನ್ನಾಭರಣ ನಾಪತ್ತೆಯಾಗಿದೆ ಅಂತ ಅವರು ತಿಳಿಸಿದ್ದಾರೆ.
ಆದ್ರೆ ಘಟನೆ ನಡೆದ ವೇಳೆ ನಾನು ಕೆಲಸದ ನಿಮಿತ್ತ ಹೊರಗಡೆ ಬಂದಿದ್ದೆ. ಹೀಗಾಗಿ ಸೋಮವಾರ ರಾತ್ರಿ ಮನೆಗೆ ವಾಪಾಸ್ಸಾದ ಸಂದರ್ಭದಲ್ಲಿ ತನ್ನ ಫ್ಲ್ಯಾಟ್ ನಲ್ಲಿ ಶರ್ಮಾ ಮೃತದೇಹ ಕಂಡಿದ್ದೇನೆ ಅಂತ ಗೆಳತಿ ವಾಸುಮ್ದಾನಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಮೊದಲು ವಾಸುಮ್ದಾನಿಯನ್ನು ವಶಕ್ಕೆ ಪಡಿದ್ದೇವೆ. ಅಲ್ಲದೇ ಈಕೆ ಬಂಧನವಾಗುವ ಸಂಭವವಿದೆ ಅಂತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸದ್ಯ ಘಟನೆಗೆ ಸಂಬಂಧಿಸಿದಂತೆ ಗೆಳತಿಯನ್ನು ವಶಕ್ಕೆ ಪಡೆದಿದ್ದು, ಅಪರಿಚಿತರಿಂದ ಕೊಲೆ ನಡೆದಿರುವುದಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಅಂತ ವಿರಾರ್ ವಿಭಾಗದ ಎಸ್ಡಿಪಿಒ ಜಯಂತ್ ಬಜ್ಬಲೆ ಮಾಧ್ಯಮಕ್ಕೆ ತಿಳಿಸಿದ್ದಾರೆ.