ತುಮಕೂರು: ತಲೆ ತಿರುಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ನಮ್ಮ ರಾಜ್ಯಕ್ಕೆ ಮೋಸವಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಪರಿವರ್ತನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಸರ್ಕಾರದ ಖಜಾನೆಯನ್ನು ಲೂಟಿ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ಮುಖಂಡರ ಗರಿಭೀ ಹಠಾವೋ ಆಯ್ತು. ಆದರೆ ಸಿದ್ದರಾಮಯ್ಯ ಬುರುಡೆ ದಾಸ ಎಂದು ಅವರಿಂದ ರಾಜ್ಯಕ್ಕೆ ಮೋಸವಾಗುತ್ತಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ತುಮಕೂರನ್ನು ಸ್ಮಾರ್ಟ್ ಸಿಟಿಯಾಗಿ ಘೋಷಣೆ ಮಾಡಿದ್ದು, ಹೆದ್ದಾರಿಗಳು ಮೇಲ್ದರ್ಜೆಗೆ ಏರಿದೆ. ಜಿಲ್ಲೆಗೆ ಪಾಸ್ಪೋರ್ಟ್ ಕೇಂದ್ರ ಬಂದಿದ್ದು ಇದು ಕೇಂದ್ರದ ಕೊಡುಗೆ. ಜನವರಿಯಲ್ಲಿ ನನ್ನ ಮುಂದಿನ ಕಾರ್ಯಕ್ರಮ ಏನೆಂದು ಘೋಷಣೆ ಮಾಡುತ್ತೇನೆ. 20 ತಿಂಗಳ ಅಧಿಕಾರ ಮುಗಿದ 8 ದಿನದಲ್ಲೇ ಅಪ್ಪ-ಮಕ್ಕಳು ಸಾಕಷ್ಟು ಷರತ್ತು ಹಾಕಿದ್ದರು ಹಾಗಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ ಎಂದು ಹೇಳಿದರು.
ಕಳೆದ ಚುನಾವಣೆಯಲ್ಲಿ ಜ್ಯೋತಿಗಣೇಶ್ ಅವರಿಗೆ 3 ಸಾವಿರ ಮತದಿಂದ ಸೋಲಾಯ್ತು. ಆದರೆ ಈಗ ಇಡೀ ತುಮಕೂರು ಜಿಲ್ಲೆಯಲ್ಲಿ ಬಿಜೆಪಿ ಗಾಳಿ ಬಿಸುತ್ತಿದೆ. ಸಿದ್ದರಾಮಯ್ಯ ಸರ್ಕಾರ ದುಡಿಯುವ ಕೈಗಳಿಗೆ ಅವಕಾಶ ನೀಡುತ್ತಿಲ್ಲ. ಸರ್ಕಾರದಲ್ಲಿ ಹಣದ ಕೊರತೆಯಿಲ್ಲ ಪ್ರಮಾಣಿಕತೆಯ ಕೊರತೆಯಿದೆ. ಬಂದ ಹಣವೆಲ್ಲ ಸಚಿವ ಕೈ ಸೇರಬೇಕೆಂದರೆ ಜನರ ಕಲ್ಯಾಣ ಯಾವಾಗ ಎಂದು ಪ್ರೆಶ್ನಿಸಿದರು.
ಯಾತ್ರೆ ವಾಹನದ ಗ್ಲಾಸ್ ಜಖಂ: ಶುಕ್ರವಾರ ಕಲ್ಲು ತೂರಿದ್ದರಿಂದ ಗ್ಲಾಸ್ ಹೊಡೆದು ಜಖಂಗೊಂಡಿದ್ದ ಯಾತ್ರೆ ವಾಹನಕ್ಕೆ ಇಂದು ಹೊಸ ಗ್ಲಾಸ್ ಅಳವಡಿಸಿಕೊಂಡು ಯಾತ್ರೆಗೆ ಹೊರಟರು. ನೂತನ ಗ್ಲಾಸ್ ಅಳವಡಿಸಿದ ಬಸ್ ನ್ನು ನಗರದ ಹೊರವಲಯದಲ್ಲಿ ನಿಲ್ಲಿಸಲಾಗಿತ್ತು. ನಗರದ ಗ್ರಂಥಾಲಯ ಆವರಣಕ್ಕೆ ಬರಬೇಕಿದ್ದ ಯಾತ್ರೆ ವಾಹನ ನಗರದ ಗುಬ್ಬಿಗೇಟ್ ಬಳಿಯೇ ನಿಂತಿತ್ತು. ಬೆಳಗ್ಗೆ ನಡೆದ ಯಾತ್ರೆಯಲ್ಲಿ ಬೇರೆ ವಾಹನ ಉಪಯೋಗಿಸಲಾಗಿತ್ತು. ಗುಬ್ಬಿ ಕ್ಷೇತ್ರಕ್ಕೆ ಯಾತ್ರೆ ಹೊರಡುವಾಗ ದುರಸ್ಥಿಗೊಂಡ ವಾಹನ ಬಳಕೆ ಮಾಡಲಾಯಿತು.