ಇದು ಎಳನೀರಲ್ಲ ಅಮೃತ ಎಂದು ಕರಾವಳಿಯ ಎಳನೀರಿನ ಸವಿಗೆ ಮನಸೋತ ಮೋದಿ!

Public TV
1 Min Read

ಧರ್ಮಸ್ಥಳ: ಪ್ರಧಾನಿ ನರೇಂದ್ರ ಮೋದಿ ಸಂಪೂರ್ಣ ಉಪವಾಸವಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ಬೆಳಗ್ಗೆ ಎದ್ದವರು ಒಂದು ಹನಿ ನೀರೂ ಕುಡಿಯದೆ ಕರ್ನಾಟಕಕ್ಕೆ ಆಗಮಿಸಿದ್ದರು. 11 ಗಂಟೆ ಸುಮಾರಿಗೆ ಧರ್ಮಸ್ಥಳ ಕ್ಷೇತ್ರಕ್ಕೆ ಬಂದಿಳಿದರು. ಬಿರು ಬೇಸಿಗೆಯಂತಿದ್ದ ವಾತಾವರಣ- ನೆತ್ತಿ ಸುಡುತ್ತಿದ್ದ ಸೂರ್ಯ ಎಲ್ಲರನ್ನೂ ಹೈರಾಣಾಗಿಸಿತ್ತು.

ಆದ್ರೆ ಪ್ರಧಾನಿ ಮೋದಿ ಮಾತ್ರ ಗುಟುಕು ನೀರನ್ನೂ ಕುಡಿದಿರಲಿಲ್ಲ. ನರೇಂದ್ರ ಮೋದಿ ದೇವರ ದರ್ಶನ ಆಗುವವರೆಗೆ ಕೇವಲ ತೀರ್ಥವನ್ನು ಮಾತ್ರ ಸೇವನೆ ಮಾಡಿದ್ದರು. ಧ್ಯಾನ-ಪೂಜೆ ಮುಗಿಸಿ ಮಂಜುನಾಥನ ಕ್ಷೇತ್ರದಲ್ಲಿ ಡಾ. ವೀರೇಂದ್ರ ಹೆಗ್ಗಡೆಯವರು ಊರಿನ ಎಳನೀರನ್ನು ಕೊಟ್ಟರು. ಜೊತೆಗೆ ಒಣ ಹಣ್ಣುಗಳನ್ನು ಕೊಟ್ಟು ಸತ್ಕರಿಸಿದರು.

ನಾನಿವತ್ತು ಸಂಪೂರ್ಣ ಉಪವಾಸ ಎಂದು ಹೇಳಿದ ನರೇಂದ್ರ ಮೋದಿ ಯಾವುದೂ ಬೇಡ ಎಂದರು. ಇದಕ್ಕುತ್ತರಿಸಿದ ಡಾ. ಹೆಗ್ಗಡೆ ಇದು ಎಳನೀರು ದೇವರ ಪ್ರಸಾದದಂತೆ ಸ್ವೀಕಾರ ಮಾಡಿ ಎಂದರು. ಒಪ್ಪಿದ ಪ್ರಧಾನಿ ನರೇಂದ್ರ ಮೋದಿ ಊರಿನ ಎಳನೀರನ್ನು ಸ್ವೀಕರಿಸಿದರು. ಎಳನೀರು ಕುಡಿದ ಮೋದಿ ಶಿವನ ಕ್ಷೇತ್ರದಲ್ಲಿ ಅಮೃತ ಕುಡಿದಂತಾಯ್ತು. ನಾನು ಧನ್ಯನಾದೆ ಎಂದು ಹೇಳಿದರು. ಡ್ರೈ ಫ್ರೂಟ್ಸ್‍ಗಳನ್ನು ವಿನಯದಿಂದಲೇ ತಿರಸ್ಕರಿಸಿದರು.

ಸ್ಟ್ರಾ ಉಪಯೋಗಿಸದೆ ಪ್ರಧಾನಿ ಮೋದಿ ಎಳನೀರು ಕುಡಿದದ್ದು ದೇವಸ್ಥಾನದ ಒಳಗಿದ್ದ ಎಲ್ಲರಿಗೂ ಇಷ್ಟವಾಗಿದೆ. ಸಾಮಾನ್ಯ ಜನರಂತೆ ಸ್ಟ್ರಾ ಇಲ್ಲದೆ ಮೋದಿ ಎಳನೀರು ಕುಡಿದದ್ದನ್ನು ದೇವಳದ ಅರ್ಚಕರು, ಸಿಬ್ಬಂದಿ ಹಾಡಿ ಹೊಗಳುತ್ತಿದ್ದಾರೆ. ನಮ್ಮ ಪ್ರಧಾನಿ ಎಷ್ಟೊಂದು ಸಿಂಪಲ್ ಜನ ಮಾರ್ರೆ.., ಅಷ್ಟು ದೊಡ್ಡ ವ್ಯಕ್ತಿ ಇಷ್ಟೊಂದು ಸಿಂಪಲ್ಲಾ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *