ರಾಮನಗರ: ಕೊಲೆ ಪ್ರಕರಣದ ಆರೋಪಿ ಬಂಧನಕ್ಕೆ ತೆರಳಿದ್ದ ವೇಳೆ ಪೊಲೀಸರ ಮೇಲೆ ದಾಳಿ ನಡೆಸಿದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ಬೋರೇಗೌಡನ ದೊಡ್ಡಿಯಲ್ಲಿ ನಡೆದಿದೆ.
ಚಂದ್ರು ಅಲಿಯಾಸ್ ಚಂದ್ರುಕುಮಾರ್ ಪೊಲೀಸರ ಗುಂಡೇಟು ತಿಂದಿರುವ ಕೊಲೆ ಆರೋಪಿ. ತಡರಾತ್ರಿ ಆರೋಪಿ ಬಂಧನಕ್ಕೆ ಕನಕಪುರ ಸರ್ಕಲ್ ಇನ್ಸ್ ಪೆಕ್ಟರ್ ನೇತೃತ್ವದ ತಂಡ ಬೋರೇಗೌಡನ ದೊಡ್ಡಿಗೆ ತೆರಳಿತ್ತು. ಈ ವೇಳೆ ಪೊಲೀಸರಿಂದ ಪರಾರಿಯಾಗಲು ಆರೋಪಿ ಚಂದ್ರು ಪ್ರಯತ್ನಿಸಿದ್ದಲ್ಲದೇ ಚಾಕುವಿನಿಂದ ಕನಕಪುರ ಟೌನ್ ಪಿಎಸ್ಐ ಅನಂತರಾಮು ಅವರ ಎಡಗೈಗೆ ಇರಿದು ಪರಾರಿಯಾಗಲೆತ್ನಿಸಿದ್ದಾನೆ.
ಈ ವೇಳೆ ಪೊಲೀಸರು ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದು, ಬಳಿಕ ಪರಾರಿಯಾಗುತ್ತಿದ್ದ ಆರೋಪಿ ಬಲಗಾಲಿಗೆ ಗುಂಡು ಹಾರಿಸಿದ್ದಾರೆ. ಕಳೆದ ಸೆಪ್ಟೆಂಬರ್ 20 ರಂದು ಹುಣಸೂರಿನಲ್ಲಿ ಒಂಟಿ ಮನೆ ವೃದ್ಧೆಯನ್ನು ಕೊಂದು ಆರೋಪಿ ಮಾಂಗಲ್ಯ ಸರವನ್ನು ದೋಚಿ ಪರಾರಿಯಾಗಿದ್ದನು. ಈ ಪ್ರಕರಣ ಸಂಬಂಧ ಬಂಧಿಸಲು ಹೋಗಿದ್ದಾಗ ಘಟನೆ ಜರುಗಿದೆ.
ಈ ಘಟನೆಯಲ್ಲಿ ಗುಂಡೇಟಿನಿಂದ ಗಾಯಗೊಂಡಿರುವ ಆರೋಪಿ ಚಂದ್ರು ಹಾಗು ಚಾಕು ಹಿರಿತಕ್ಕೆ ಒಳಗಾಗಿರುವ ಪಿಎಸ್ಐ ಅನಂತರಾಮುರನ್ನ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.