ಬಾಮೈದನ ಹೆಂಡ್ತಿ ಜೊತೆ ಓಡಿಹೋದ ಭಾವ- ಹೆಂಡ್ತಿಗಾಗಿ ಊರೂರು ಸುತ್ತುತ್ತಿರೋ ಪತಿ

Public TV
1 Min Read

ತುಮಕೂರು: ಅವರು ಭಾವ-ಬಾಮೈದ, ಅದಕ್ಕೂ ಹೆಚ್ಚಾಗಿ ಒಳ್ಳೇ ಸ್ನೇಹಿತರಾಗಿದ್ರು. ಆದರೆ ಭಾವನಿಗೆ ಬಾಮೈದನ ಪತ್ನಿ ಮೇಲೆ ಕಣ್ಣು ಬಿದ್ದು, ಕೊನೆಗೆ ಆಕೆಯೊಂದಿಗೆ ಲವ್ವಿಡವ್ವಿ ಶುರುಮಾಡಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಜಂಪೇನಳ್ಳಿ ಗ್ರಾಮದಲ್ಲಿ ನಡೆದಿದೆ.

ಜಂಪೇನಳ್ಳಿ ನಿವಾಸಿ ಪರಶುರಾಮ ಅವರ ಹೆಂಡತಿ ಓಡಿಹೋಗಿದ್ದಾಳೆ. ತೀವ್ರವಾಗಿ ನೊಂದು ಹೆಂಡ್ತಿ ಬೇಕು ಅಂತ ಪರಶುರಾಮ್ ಊರೂರು ಸುತ್ತುತ್ತಿದ್ದಾರೆ. ಪರಶುರಾಮ್ ಪತ್ನಿ ಮಂಜುಳಾ ತನ್ನ ನಾದಿನಿಯ ಗಂಡ ಶ್ರೀನಿವಾಸ್ ಜೊತೆ ಪರಾರಿಯಾಗಿದ್ದಾಳೆ.

ಪರಶುರಾಮ್ ಹಾಗೂ ಮಂಜುಳಾ ಮದುವೆಯಾಗಿ 12 ವರ್ಷ ಕಳೆದಿದೆ. ಇವರಿಗೆ ನಾಲ್ಕು ಮಕ್ಕಳೂ ಕೂಡ ಇವೆ. ಆದರೂ ಮಂಜುಳಾ-ಶ್ರೀನಿವಾಸ್ ಲವ್ವಿಡವ್ವಿ ಶುರು ಮಾಡಿಕೊಂಡಿದ್ದರು. ಈ ಅಕ್ರಮ ಸಂಬಂಧ ಪತಿ ಪರಶುರಾಮ್‍ಗೆ ಗೊತ್ತಾಗುತ್ತಿದ್ದಂತೆ ಇಬ್ಬರೂ ಜೊತೆಯಾಗಿ ಪರಾರಿಯಾಗಿದ್ದಾರೆ.

ಪರಶುರಾಮ್ ಹಾಗೂ ಶ್ರೀನಿವಾಸ್ ಒಳ್ಳೆಯ ಸ್ನೇಹಿತರು. ಇಬ್ಬರೂ ಬಳೆ ವ್ಯಾಪಾರ ಮಾಡಿಕೊಂಡಿದ್ದರು. ಹಾಗಾಗಿ ಪರಶುರಾಮ ತನ್ನ ತಂಗಿ ಗೀತಾಳನ್ನು ಶ್ರೀನಿವಾಸ್‍ಗೆ ಕೊಟ್ಟು ಮದುವೆ ಮಾಡಿದ್ದರು. ಸಹಜವಾಗಿಯೆ ಶ್ರೀನಿವಾಸ್ ಪರಶುರಾಮನ ಮನೆಗೆ ಬಂದು ಹೋಗುತಿದ್ದ. ಪರಶುರಾಮನ ಪತ್ನಿ ಮಂಜುಳಾ ನೋಡಲು ಸುಂದರವಾಗಿದ್ಳು ಅಂತ ತನ್ನ ಹೆಂಡತಿಯನ್ನ ಬಿಟ್ಟು ಅವಳನ್ನು ಹಾರಿಸಿಕೊಂಡು ಹೋಗಿದ್ದಾನೆ ಅಂತ ಮಂಜುಳಾ ತಾಯಿ ರತ್ನಮ್ಮ ಹೇಳಿದ್ದಾರೆ.

ಮಂಜುಳಾ ತನ್ನ ಇಬ್ಬರು ಮಕ್ಕಳನ್ನು ತನ್ನೊಟ್ಟಿಗೆ ಕರೆದುಕೊಂಡು ಹೋಗಿದ್ದಾಳೆ. ಶ್ರೀನಿವಾಸನ ಪತ್ನಿ ಗೀತಾ ಕೂಡಾ ಗಂಡನ ಹುಡುಕಾಟದಲ್ಲಿ ತೊಡಗಿದ್ದಾರೆ. ಹೆಂಡತಿಯನ್ನ ಹುಡುಕಿಕೊಡಿ ಎಂದು ಪರಶುರಾಮ್ ಪೊಲೀಸರ ಮೊರೆ ಹೋಗಿದ್ದಾರೆ. ಆಕೆ ಓಡಿಹೋದ್ರೂ ಪರವಾಗಿಲ್ಲ, ವಾಪಸ್ ಬಂದು ಮಕ್ಕಳ ಆರೈಕೆ ಮಾಡಿಕೊಂಡು ಇದ್ದರೆ ಸಾಕು ಎಂದು ಪರುಶರಾಮ್ ಹೇಳುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *