ಬಾಟಲಿಯಿಂದ ಪತ್ನಿಯನ್ನು ಚುಚ್ಚಿ, ಕುತ್ತಿಗೆಯನ್ನು ಕಾಲಿನಿಂದ ತುಳಿದು ಕೊಂದ!

Public TV
1 Min Read

ಅನೇಕಲ್: ಶೀಲ ಶಂಕಿಸಿದ ಪತಿರಾಯ ತನ್ನ ಪತ್ನಿಯನ್ನು ಬಾಟಲಿನಿಂದ ಚುಚ್ಚಿ, ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಅತ್ತಿಬೆಲೆ ಸಮೀಪದ ಮುತ್ಸಂದ್ರ ಗ್ರಾಮದಲ್ಲಿ ಕಲಾವತಿ (24) ಕೊಲೆಯಾದ ದುರ್ದೈವಿ. ಪತಿ ನಾಗೇಶ್ ತನ್ನ ಪತ್ನಿ ಶೀಲ ಶಂಕಿಸಿ ನಿತ್ಯ ಜಗಳವಾಡುತ್ತಿದ್ದು, ಇಂದು ಬೆಳಗ್ಗೆ 11 ಗಂಟೆ ವೇಳೆಗೆ ಕುಡಿದು ಮನೆಗೆ ಬಂದು ಹೆಂಡತಿ ಜೊತೆ ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ನಾಗೇಶ್ ಮದ್ಯದ ಬಾಟಲಿಯಿಂದ ಪತ್ನಿಗೆ ಚುಚ್ಚಿ, ಕುತ್ತಿಗೆಯನ್ನು ಕಾಲಿನಿಂದ ತುಳಿದುಕೊಂಡು ಉಸಿರುಗಟ್ಟಿಸಿ ಸಾಯಿಸಿದ್ದಾನೆ.

ಈ ಕೃತ್ಯ ನಡೆಸಿದ ನಂತರ ಪತಿ ನಾಗೇಶ್ ಅತ್ತಿಬೆಲೆ ಪೊಲೀಸ್ ಠಾಣೆಗೆ ಬಂದು ತನ್ನ ಪತ್ನಿಯನ್ನು ಕೊಲೆ ಮಾಡಿರುವುದಾಗಿ ತಿಳಿಸಿ ಪೊಲೀಸರಿಗೆ ಶರಣಾಗಿದ್ದಾನೆ. ಕಲಾವತಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಕ್ಕಳಿದ್ದಾರೆ. ತಾಯಿ ಕೊಲೆಯಾಗಿದ್ದು, ತಂದೆ ಜೈಲು ಪಾಲಾಗಿರುವುದರಿಂದ ಅಪ್ಪ ಅಮ್ಮ ಇಲ್ಲದೆ ತಬ್ಬಲಿಯಾಗಿವೆ.

Share This Article
Leave a Comment

Leave a Reply

Your email address will not be published. Required fields are marked *