ಹೆಂಡ್ತಿ ಹೃದಯಾಘಾತದಿಂದ ಸತ್ತಿದ್ದಾಳೆಂದು ನಾಟಕವಾಡಿದ್ರು- ಚಿಕ್ಕಪ್ಪ ಪೊಲೀಸ್ ಕಂಪ್ಲೇಂಟ್ ನೀಡಿದ್ಮೇಲೆ ಹೊರಬಂತು ಸತ್ಯ

Public TV
1 Min Read

ಚಿಕ್ಕಮಗಳೂರು: ದೇಹದಲ್ಲಿ ಜೀವ ಇರ್ಲಿಲ್ಲ. ಕುತ್ತಿಗೆಯಲ್ಲಿ ಹಗ್ಗದ ಜೊತೆ ಉಗುರಿನ ಗುರುತಿತ್ತು. ಮಾರ್ಕಿನ ಮೇಲೆಲ್ಲಾ ಅರಿಶಿನ ಮೆತ್ತಿತ್ತು. ಹೆತ್ತವರು ಬರುವ ಮುನ್ನವೇ ಮೃತದೇಹ ರೂಮಿನಿಂದ ಆಚೆ ಬಂದಿತ್ತು. ಹೆತ್ತವರಿಗೆ ಚೆನ್ನಾಗಿದ್ಲು, ಎದೆ ನೋವು ಅಂತಿದ್ಲಷ್ಟೆ, ಹೃದಯಾಘಾತದಿಂದ ತೀರ್ಕೊಂಡಿದ್ದಾಳೆಂದು ಕಥೆ ಕಟ್ಟಿದ್ರು. ಮಗಳನ್ನ ಕಳೆದುಕೊಂಡ ನೋವಲ್ಲಿ ಇದ್ಯಾವುದನ್ನೂ ಗಮನಿಸಲೇ ಇಲ್ಲ. ಆದ್ರೆ ಪೋಸ್ಟ್ ಮಾರ್ಟಮ್ ರಿಪೋರ್ಟ್ ಇದೊಂದು ಕೊಲೆ ಅನ್ನೋ ಸತ್ಯವನ್ನ ಸಾರಿ ಹೇಳ್ತಿತ್ತು.

ಈಕೆ ಹೆಸರು ಯಶೋಧ. ವಯಸ್ಸು 30ರ ಆಸುಪಾಸು. ಚಿಕ್ಕಮಗಳೂರಿನ ಗಿಡ್ಡೇನಹಳ್ಳಿ ನಿವಾಸಿ. ಈಕೆಯನ್ನ ಐದು ವರ್ಷಗಳ ಹಿಂದೆ ಮಂಜೇಗೌಡ ಅನ್ನೋ ವ್ಯಕ್ತಿ ಮದುವೆಯಾಗಿದ್ದ. ಇವರಿಗೆ ಒಂದು ಹೆಣ್ಣು ಮಗುವೂ ಆಗಿದೆ. ಹೆಣ್ಣು ಮಗು ಆಯ್ತೆಂದು ಆರಂಭವಾದ ಜಗಳ ಕೊಲೆಯಲ್ಲಿ ಕೊನೆಗೊಂಡಿದೆ.

ಮೂರು ತಿಂಗಳ ಹಿಂದೆ ಯಶೋಧ ಗಂಡ ಮಂಜೇಗೌಡ, ಅತ್ತೆ ಮಾವನಿಗೆ ಫೋನ್ ಮಾಡಿ ನಿಮ್ಮ ಮಗಳು ಹೃದಯಾಘಾತದಿಂದ ತೀರಿಕೊಂಡಿದ್ದಾಳೆ ಎಂದಿದ್ದ. ಹೆತ್ತವರು ಬರುವಷ್ಟರಲ್ಲಿ ಮೃತದೇಹಕ್ಕೆ ಸ್ನಾನ ಮಾಡಿಸಿ ಮೈತುಂಬ ಅರಿಶಿನ ಮೆತ್ತಿಟ್ಟಿದ್ರಂತೆ. ಅನಕ್ಷರಸ್ಥ ತಂದೆ-ತಾಯಿಯೂ ಹೃದಯಾಘಾತದಿಂದ ತೀರಿಕೊಂಡಿದ್ದಾಳೆಂದು ಭಾವಿಸಿದ್ರು. ಆದ್ರೆ ಹುಡುಗಿಯ ಚಿಕ್ಕಪ್ಪ ಬಂದು ಪೊಲೀಸ್ ಕಂಪ್ಲೇಂಟ್ ನೀಡಿದ ಮೇಲೆ ಇದೀಗ ಸತ್ಯ ಹೊರಬಿದ್ದಿದೆ. ಮರಣೋತ್ತರ ವರದಿಯಲ್ಲಿ ಈಕೆ ಆಕಸ್ಮಿಕವಾಗಿ ಸತ್ತಿಲ್ಲ, ಇದೊಂದು ಕೊಲೆ ಎಂದು ಗೊತ್ತಾಗಿದೆ.

ಯಶೋಧಗೆ ಹೆಣ್ಣು ಮಗುವಾದ ಮೇಲೆ ಸಾಕಷ್ಟು ಬಾರಿ ಗಲಾಟೆ ಮಾಡಿ ಮನೆಗೆ ವಾಪಸ್ಸು ಕಳಿಸಿದ್ದರು ಎನ್ನಲಾಗಿದೆ. ಹಲವು ರಾಜಿ-ಪಂಚಾಯಿತಿಗಳು ನಡೆದಿದೆ. ಆದ್ರೆ ದಿನಕಳೆದಂತೆ ಗಂಡು ಮಗುವಾಗಲಿಲ್ಲ ಎಂದು ಅತ್ತೆ, ಮಾವ, ಗಂಡ ಕೋಪ ಮಾಡಿಕೊಂಡಿದ್ದರು. ಒಂದಿನ ಎಲ್ಲರೂ ಸೇರಿ ಕೊಲೆ ಮಾಡಿದ್ರು. ಆಮೇಲೆ ಹೃದಯಾಘಾತದ ನಾಟಕವಾಡಿದ್ದಾರೆ. ಈಗ ಗಂಡ-ಅತ್ತೆ-ಮಾವ ಮೂವರು ಅಂದರ್ ಆಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *