ಹೊಸ ಚಪ್ಪಲಿ ಕೊಡಿಸಲಿಲ್ಲ ಅಂತ ಗೆಳೆಯನನ್ನೇ ಕೊಲೆ ಮಾಡ್ದ!

Public TV
1 Min Read

ನವದೆಹಲಿ: ಕ್ಷುಲ್ಲಕ ಕಾರಣಕ್ಕೆ ಅನೇಕ ಕೊಲೆಗಳು ನಡೆದಿರುವ ಬಗ್ಗೆ ಕೇಳಿದ್ದೀವಿ. ಆದ್ರೆ ಇಲ್ಲೊಬ್ಬ ಹೊಸ ಚಪ್ಪಲಿ ಕೊಡಿಸಲಿಲ್ಲ ಅಂತ ತನ್ನ ಗೆಳೆಯನನ್ನ ಕೊಲೆ ಮಾಡಿದ್ದಾನೆ.

47 ವರ್ಷದ ರಾಮ್‍ದತ್ ರಜಪುತ್ ಅಲಿಯಾಸ್ ದತ್ತಾ ಮಾಚಿವಾಲೆ ತನ್ನ ಸ್ನೇಹಿತ ರಾಮ್‍ಸ್ನೇಹ ರಾವತ್(32) ರನ್ನು ಕೊಲೆ ಮಾಡಿದ್ದಾನೆ. ರಾವತ್ ಕಳೆದ 2 ತಿಂಗಳಿನಿಂದ ಹೊಸ ಚಪ್ಪಲಿ ತರುವುದಾಗಿ ಹೇಳುತ್ತಿದ್ದರು. ಆದ್ರೆ ತಂದುಕೊಡಲಿಲ್ಲ ಎಂಬ ಕಾರಣಕ್ಕೆ ಕೊಲೆ ಮಾಡಿದ್ದಾನೆ.

ಸೆಪ್ಟೆಂಬರ್ 24ರಂದು ಈ ಘಟನೆ ನಡೆದಿದ್ದು, ಕೃತ್ಯವೆಸಗಿದ ನಂತರ ಪುಣೆಯಿಂದ ರಜಪುತ್ ಪರಾರಿಯಾಗಿದ್ದ. ಭಾನುವಾರದಂದು ಪೊಲೀಸರು ರಜಪುತ್‍ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾವತ್ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದರು. ರಜಪುತ್ ಮೀನುಗಾರನಾಗಿದ್ದ. ಇಬ್ಬರೂ ಒಂದೇ ಸಮುದಾಯದವರಾಗಿದ್ದರಿಂದ ಸ್ನೇಹಿತರಾಗಿದ್ದರು. ರಜಪುತ್‍ಗೆ ರಾವತ್ ಒಳ್ಳೆಯ ಮೀನು ತಂದುಕೊಡುತ್ತಿದ್ದ. ಆದ್ರೆ ಅದಕ್ಕೆ ಹಣ ತೆಗೆದುಕೊಳ್ಳುತ್ತಿರಲಿಲ್ಲ ಅಂತ ಚಿಂಚವಾಡ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ವಿಠಲ್ ಹೇಳಿದ್ದಾರೆ.

ಸೆಪ್ಟೆಂಬರ್ 24ರಂದು ರಜಪುತ್‍ಗೆ ಚಪ್ಪಲಿ ಗಿಫ್ಟ್ ಮಾಡುವುದಾಗಿ ರಾವತ್ ಕಳೆದ 2 ತಿಂಗಳಿನಿಂದ ಹೇಳುತ್ತಾ ಬಂದಿದ್ದರು. ಆದ್ರೆ ತಾನು ಹೇಳಿದಂತೆ ರಾವತ್ ಆ ದಿನ ಚಪ್ಪಲಿ ತಂದಿರಲಿಲ್ಲ. ಇದರಿಂದ ಇಬ್ಬರ ನಡುವೆ ಜಗಳವಾಗಿತ್ತು. ನಂತರ ಅದೇ ರಾತ್ರಿ ರಜಪೂತ್ ರಾವತ್‍ರನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿ ಪುಣೆಯಿಂದ ಪರಾರಿಯಾಗಿದ್ದ ಎಂದು ವಿಠಲ್ ತಿಳಿಸಿದ್ದಾರೆ.

ರಜಪುತ್ ಎಲ್ಲಿಗೆ ಪರಾರಿಯಾಗಿದ್ದಾನೆ ಎಂಬ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಕೆಲವು ವಿವರಣೆ ಹಾಗೂ ತಾಂತ್ರಿಕ ಮಾಹಿತಿ ಆಧರಿಸಿ ನಮ್ಮ ತಂಡ ಆತನನ್ನು ಹಿಡಿಯಲು ಮುಂಬೈಗೆ ದೌಡಾಯಿಸಿತು. ಆದ್ರೆ ಆತ ಅಲ್ಲಿಂದ ಉತ್ತರಪ್ರದೇಶಕ್ಕೆ ಪರಾರಿಯಾಗಿದ್ದ. ಅಲ್ಲಿ ನಾವು ಆತನನ್ನು ಹಿಡಿದು ಪುಣೆಗೆ ತಂದಿದ್ದೇವೆ. ತಾನು ಮಾತು ಕೊಟ್ಟಂತೆ ರಾವತ್ ಚಪ್ಪಲಿ ತಂದುಕೊಡದ ಕಾರಣ ಕೊಲೆ ಮಾಡಿರುವುದಾಗಿ ರಜಪುತ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಮಾತು ಕೊಟ್ಟಂತೆ ನಡೆದುಕೊಳ್ಳದ್ದಕ್ಕೆ ಪಾಠ ಕಲಿಸಲು ಹೀಗೆ ಮಾಡಿದ್ದಾಗಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರದಂದು ರಜಪುತ್‍ನನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು, ಒಂದು ವಾರದವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

Share This Article
Leave a Comment

Leave a Reply

Your email address will not be published. Required fields are marked *