ಮೈಸೂರು: ಅಧಿಕಾರ ಇದೆ ಅಂತಾ ದೇವಸ್ಥಾನಕ್ಕೆ ಸರತಿ ಸಾಲು ಬಿಟ್ಟು ನೇರವಾಗಿ ದರ್ಶನಕ್ಕೆ ಹೋಗುವುದು ಸಾಮಾನ್ಯ. ಆದರೆ ದೇವರಿಗೆ ಕಾಣಿಕೆ ಅರ್ಪಿಸುವ ವಿಚಾರದಲ್ಲೂ ಅಧಿಕಾರದ ಬಳಕೆ ಮಾಡುತ್ತಿದ್ದಾರೆ. ದೇವಿ ಚಾಮುಂಡಿ ಮೂರ್ತಿಗೆ ಉಡಿಸುವ ಸೀರೆ ವಿಚಾರದಲ್ಲಿ ವಿಧಾನಸೌಧದ ಹೆಸರನ್ನು ಬಳಕೆ ಮಾಡಿದ್ದಾರೆ.
ಇಂದು ವಿಜಯದಶಮಿ ಹಬ್ಬ. ಮಳೆ ಆತಂಕದ ನಡುವೆಯೂ ಜಂಬೂಸವಾರಿಗೆ ಸಕಲ ಸಿದ್ಧತೆ ನಡೆಯುತ್ತಿದೆ. ಅಂಬಾರಿಯಲ್ಲಿ ಇರಿಸುವ ಚಿನ್ನದ ತಾಯಿ ಚಾಮುಂಡಿಯ ಉತ್ಸವ ಮೂರ್ತಿಗೆ ಪ್ರತಿ ವರ್ಷ ಚೆಂದದ ರೇಷ್ಮೆ ಸೀರೆ ಉಡಿಸಲಾಗುತ್ತದೆ. ಕಳೆದ 15 ವರ್ಷಗಳಿಂದ ಬೆಂಗಳೂರಿನ ಬಳೇಪೇಟೆಯ ವ್ಯಕ್ತಿಯೊಬ್ಬರು ದೇವಿಗೆ ಸೀರೆಯನ್ನು ಹರಕೆ ರೂಪದಲ್ಲಿ ಅರ್ಪಿಸುತ್ತಾ ಬಂದಿದ್ದಾರೆ. ಅದೇ ರೀತಿ ಈ ವರ್ಷವೂ ಸೀರೆಯನ್ನು ಕೊಟ್ಟಿದ್ದಾರೆ. ಆದರೆ ಈ ಬಾರಿ ಬಳೆಪೇಟೆಯ ವ್ಯಕ್ತಿ ನೀಡಿರುವ ಸೀರೆಯನ್ನು ತಾಯಿ ಚಾಮುಂಡಿಗೆ ಉಡಿಸುತ್ತಿಲ್ಲ. ಇದಕ್ಕೆ ಕಾರಣ ಈ ಬಾರಿ ತಾಯಿ ಚಾಮುಂಡಿಯ ಉತ್ಸವ ಮೂರ್ತಿಗೆ ಉಡಿಸುತ್ತಿರುವ ಸೀರೆ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಕೊಟ್ಟಿರುವುದು.
ತಾಯಿ ಚಾಮುಂಡಿಗೆ ತುಂಬಾ ವರ್ಷಗಳಿಂದ ಬೆಂಗಳೂರಿನ ಬಳೇಪೇಟೆಯ ತಾಯಿ ಚಾಮುಂಡಿ ಭಕ್ತರೊಬ್ಬರು ಸೀರೆಯನ್ನು ಹರಕೆ ರೂಪದಲ್ಲಿ ನೀಡುತ್ತಾ ಬಂದಿದ್ದಾರೆ. ಈ ಬಾರಿಯೂ ಸೀರೆಯನ್ನು ಹರಕೆ ರೂಪದಲ್ಲಿ ನೀಡಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ದೇವಸ್ಥಾನದ ಅರ್ಚಕರು ಹೇಳಿದ್ದಾರೆ. ಆದರೆ ಅರ್ಚಕರ ಈ ಮಾತನ್ನು ಒಪ್ಪದ ಸಿಎಂ ಪತ್ನಿ, ನಾವು ಕೊಡುವ ಸೀರೆಯನ್ನೇ ಈ ಬಾರಿ ಉತ್ಸವ ಮೂರ್ತಿಗೆ ಉಡಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಕೊನೆಗೆ ಸಿಎಂ ಪತ್ನಿಯ ಒತ್ತಡಕ್ಕೆ ಮಣಿದ ದೇವಸ್ಥಾನದ ಅರ್ಚಕರು ಮುಂಗಡವಾಗಿ ಹೆಸರು ನೋಂದಾಯಿಸಿರುವ ವ್ಯಕ್ತಿ ಕೊಟ್ಟ ಸೀರೆ ಬಿಟ್ಟು ಸಿಎಂ ಪತ್ನಿ ನೀಡಿದ ಸೀರೆಯನ್ನು ದೇವಿಗೆ ಉಡಿಸೋಕೆ ನಿರ್ಧಾರ ಮಾಡಿದ್ದಾರೆ. ಇತ್ತ ಚಾಮುಂಡಿ ಭಕ್ತ ದೇವರ ವಿಚಾರದಲ್ಲೂ ಅಧಿಕಾರ ದುರ್ಬಳಕೆ ಮಾಡಿದರೆ ಎಷ್ಟು ಸರಿ ಹೇಳಿ? ಎಂದು ಪ್ರಶ್ನೆ ಮಾಡಿದ್ದಾರೆ.