ಕಲಬುರಗಿಯಲ್ಲಿ ಧಾರಕಾರ ಮಳೆ: ಭೀಮಾ ನದಿ ಸಂಪೂರ್ಣ ಭರ್ತಿ

Public TV
1 Min Read

ಯಾದಗಿರಿ: ಕಲಬುರಗಿಯಲ್ಲಿ ಭಾರೀ ಮಳೆಯಾದ ಹಿನ್ನಲೆಯಲ್ಲಿ ಈಗ ಭೀಮಾ ನದಿಯು ಉಕ್ಕಿ ಹರಿಯುತ್ತಿದೆ. ಯಾದಗಿರಿ ಜಿಲ್ಲೆಯ ಜೀವನಾಡಿಯಾದ ಭೀಮಾ ನದಿ ಈಗ ಸಂಪೂರ್ಣವಾಗಿ ಭರ್ತಿಯಾಗುತ್ತಿದೆ. ಕಳೆದ ವರ್ಷ ಸಂಪೂರ್ಣವಾಗಿ ಬರಗಾಲ ಆವರಿಸಿದ್ದರಿಂದ ಬತ್ತಿದ್ದ ಕೆರೆ, ಹಳ್ಳ-ಕೊಳ್ಳಗಳು ಇದೀಗ ತುಂಬಿ ಹರಿಯುತ್ತಿದ್ದು ನದಿಯ ತಗ್ಗು ಪ್ರದೇಶಗಳೆಲ್ಲ ಜಲಾವೃತಗೊಂಡಿವೆ.

ಯಾದಗಿರಿ ಭೀಮಾ ನದಿಯಲ್ಲಿರುವ ಶಿವನ ದೇವಾಲಯವು ಜಲಾವೃತಗೊಂಡಿದೆ. ಭೀಮಾ ನದಿಯಲ್ಲಿ ದಿನೇ ದಿನೇ ನೀರಿನ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದ್ದು ವರುಣ ಇನ್ನಷ್ಟು ತನ್ನ ಅಬ್ಬರ ತೋರಿದರೆ ನದಿಯ ಒಡಲು ಸಂಪೂರ್ಣ ಭರ್ತಿಯಾಗಲಿದೆ. ಕಲಬುರಗಿ ಜಿಲ್ಲೆಯ ಸನ್ನತಿ ಬ್ಯಾರೇಜ್‍ನಲ್ಲಿ ಹಿನ್ನೀರು ಹೆಚ್ಚಿನ ಪ್ರಮಾಣದಲ್ಲಿ ಶೇಖರಣೆಯಾಗಿದ್ದರಿಂದ ಹೆಚ್ಚಿನ ಪ್ರಮಾಣದ ನೀರು ಭೀಮಾ ನದಿಯ ಹೊರಗಡೆ ಹರಿಸಲಾಗುತ್ತಿದೆ.

ಹೀಗಾಗಿ ಯಾದಗಿರಿಯ ಅಡ್ಡಲಾಗಿ ನಿರ್ಮಿಸಲಾಗಿರುವ ಗುರುಸಣಗಿ ಬ್ಯಾರೇಜ್‍ನಲ್ಲಿ ಹದಿನೈದು ಮೀಟರ್ (0.56 ಟಿ.ಎಂ.ಸಿ) ನೀರು ಸಂಗ್ರಹವಾಗಿದ್ದು, ಹೆಚ್ಚಿನ ನೀರನ್ನು 142 ಗೇಟ್ ಮೂಲಕ 60-70 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಸಲಾಗುತ್ತಿದೆ. ಇದೇ ರೀತಿ ವರುಣ ಅಬ್ಬರಿಸಿ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾದರೆ ಪ್ರವಾಹ ಎದುರಾಗುವ ಸಾಧ್ಯತೆ ಇದೆ. ಇನ್ನು ನದಿ ಸಂಪೂರ್ಣವಾಗಿ ಮೈದುಂಬಿ ಹರಿಯುತಿರುವುದರಿಂದ ಮುನ್ನಚ್ಚರಿಕೆಯಾಗಿ ನದಿ ಪಕ್ಕಯಿರುವ ಗ್ರಾಮಸ್ಥರಿಗೆ ನದಿಯ ಕಡೆ ತೆರಳದಂತೆ ಕೃಷ್ಣಾ ಭಾಗ್ಯ ಜಲ ನಿಗಮ ಅಧಿಕಾರಿಗಳು ಸೂಚಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *