ಮಂಗಳೂರು: ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ

Public TV
1 Min Read

ಮಂಗಳೂರು: ಮೇಲಾಧಿಕಾರಿಗಳ ಮಾನಸಿಕ ಕಿರುಕುಳಕ್ಕೆ ಬೇಸತ್ತ ಯುವತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ನಡೆದಿದೆ.

ಸ್ಫೂರ್ತಿ ಆತ್ಮಹತ್ಯೆಗೆ ಶರಣಾದ ಯುವತಿ. ಫಳ್ನೀರ್‍ನಲ್ಲಿರುವ ಯುನಿಟಿ ಆಸ್ಪತ್ರೆಯ ಇನ್ಶುರೆನ್ಸ್ ವಿಭಾಗದಲ್ಲಿ ಸ್ಫೂರ್ತಿ ಕೆಲಸ ಮಾಡಿಕೊಂಡಿದ್ದರು. ಕೆಲಸದ ವೇಳೆಯಲ್ಲಿ ಮೇಲಾಧಿಕಾರಿಗಳು ಸ್ಫೂರ್ತಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಮನೆಯಲ್ಲಿ ತಾಯಿ ಮತ್ತು ತಂಗಿ ಬಳಿ ಸ್ಫೂರ್ತಿ ಹೇಳಿಕೊಂಡಿದ್ದರು ಎನ್ನಲಾಗಿದೆ.

ಬಡತನ ಇರುವುದರಿಂದ ಹೊಂದಾಣಿಕೆ ಮಾಡಿಕೊಂಡು ಹೋಗು ಎಂದು ತಾಯಿ ತಿಳಿಹೇಳಿದ್ರಂತೆ. ಸ್ಫೂರ್ತಿ ತಾಯಿ ಕೂಲಿ ಕೆಲಸ ಬಿಟ್ಟು ಆಸ್ಪತ್ರೆಯ ಸಿಬ್ಬಂದಿ ಜೊತೆ ಮಾತನಾಡಲು ತೆರಳಿದ್ದ ವೇಳೆ ಇತ್ತ ಮನೆಯಲ್ಲಿ ಸ್ಫೂರ್ತಿ ನೇಣಿಗೆ ಶರಣಾಗಿದ್ದಾರೆ.

2 ತಿಂಗಳ ಹಿಂದಷ್ಟೆ ಕೆಲಸಕ್ಕೆ ನೇಮಿಸಿಕೊಂಡಿದ್ದ ಆಸ್ಪತ್ರೆಯವರು ಒಂದು ವರ್ಷದ ಅವಧಿಗೆ ಬಾಂಡ್ ಬರೆಸಿಕೊಂಡಿದ್ರು. ಇದಲ್ಲದೆ ಕೆಲಸದ ವೇಳೆ ಹಿರಿಯ ಸಿಬ್ಬಂದಿ, ನಿನಗೆ ಕೆಲಸ ಬರುವುದಿಲ್ಲವೆಂದು ಹೀಯಾಳಿಸುತ್ತಿದ್ದರಿಂದ ಮನನೊಂದು ಸ್ಫೂರ್ತಿ ಆತ್ಮಹತ್ಯೆಗೆ ಶರಾಣಾಗಿದ್ದಾರೆ ಎನ್ನಲಾಗಿದೆ.

ಯುನಿಟಿ ಆಸ್ಪತ್ರೆಯ ಇಬ್ಬರು ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಉಳ್ಳಾಲ ಠಾಣೆಗೆ ಕುಟುಂಬಸ್ಥರು ದೂರು ನೀಡಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *