`ರಾಜಹಂಸ’ ಶೂಟಿಂಗ್ ವೇಳೆ ತಪ್ಪಿದ ದೋಣಿ ದುರಂತ

Public TV
2 Min Read

ಬೆಂಗಳೂರು: ಸ್ಯಾಂಡಲ್‍ವುಡ್ ನಲ್ಲಿ ಶುಕ್ರವಾರ ಬಿಡುಗಡೆಯಾಗುತ್ತಿರುವ `ರಾಜಹಂಸ’ ಸಿನಿಮಾದ ಚಿತ್ರೀಕರಣ ವೇಳೆ ಭಾರೀ ದೋಣಿ ದುರಂತ ಸಂಭವಿಸಿದ್ದು ನಟ, ನಟಿ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ.

ಚಿತ್ರತಂಡ ಕಳೆದ ವರ್ಷ ನವೆಂಬರ್ ನಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಬಳಿಯ ತುಂಗಾ ನದಿ ಬಳಿ ಚಿತ್ರೀಕರಣಕ್ಕೆ ತೆರಳಿತ್ತು. ಶೂಟಿಂಗ್ ನಲ್ಲಿ ದೋಣಿಯಲ್ಲಿ ಸಿನಿಮಾದ ನಾಯಕ ಗೌರಿ ಶಿಕರ್ ಮತ್ತು ನಾಯಕಿ ರಂಜಿನಿ ಇಬ್ಬರೇ ದೋಣಿಯಲ್ಲಿ ವಿಹರಿಸುವ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು.

ನದಿಯ ದಡದಲ್ಲಿಯೇ ಚಿತ್ರೀಕರಣ ಭರದಿಂದ ಸಾಗುತ್ತಿತ್ತು. ಡ್ರೋಣ್ ಕ್ಯಾಮೆರಾದಿಂದ ದೃಶ್ಯಗಳನ್ನು ಶೂಟ್ ಮಾಡುತ್ತಿದ್ದರಿಂದ ತಂತ್ರಜ್ಞರು ಮತ್ತು ಸಹ ನಟರು ಸಹಜವಾಗಿಯೇ ದೂರದಲ್ಲಿ ನಿಂತಿದ್ದರು. ಈ ವೇಳೆ ದೋಣಿ ತನ್ನಷ್ಟಕ್ಕೆ ತಾನೇ ಚಲಿಸಲು ಆರಂಭಿಸಿದೆ. ಗೌರಿಶಿಕರವರಿಗೂ ಹುಟ್ಟು ಹಾಕುವುದು ಗೊತ್ತಿಲ್ಲ ಮತ್ತು ನಟಿ ರಂಜಿನಿವರಿಗೂ ಈಜು ಬರುತ್ತಿಲ್ಲವಾದ್ದರಿಂದ ಚಿತ್ರತಂಡ ಒಂದು ಕ್ಷಣ ಗಾಬರಿಗೊಂಡಿತ್ತು.

ದೋಣಿ ಗಾಳಿಯೊ0ದಿಗೆ ಒಂದು ದಡದಿಂದ ಮತ್ತೊಂದು ದಡಕ್ಕೆ ಚಲಿಸಲಾರಂಭಿಸಿದೆ. ಈ ವೇಳೆ ಗೌರಿ ಶಿಕರ್ ಮತ್ತು ರಂಜಿನಿ ಸಿಲುಕಿದ್ದ ದೋಣಿ ಚಿಕ್ಕದಾದ ಬಂಡೆಗೆ ತಾಗಿ ನಿಂತುಕೊಂಡಿದೆ. ಕೂಡಲೇ ಚಿತ್ರತಂಡದ ಸಹಾಯಕರು, ಸಹನಟರು ನದಿಗೆ ಇಳಿದು ಇಬ್ಬರನ್ನು ರಕ್ಷಿಸಿದ್ದಾರೆ.

ಧಾರಾವಾಹಿ ಮೂಲಕ ಕನ್ನಡಿಗರ ಮನೆ ಮಾತಾಗಿರುವ ಪುಟ್ಟ ಗೌರಿ (ರಂಜಿನಿ ರಾಘವನ್) ಮೊದಲ ಬಾರಿಗೆ ಬೆಳ್ಳಿ ಪರದೆಯಲ್ಲಿ ಮಿಂಚಲಿದ್ದಾರೆ. ಇನ್ನೂ ಸಿನಿಮಾದಲ್ಲಿ ರಂಜಿನಿ (ಹಂಸಾಕ್ಷಿ)ಗೆ ಜೊತೆಯಾಗಿ ಗೌರಿಶಿಕರ್ ನಾಯಕರಾಗಿ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ಶ್ರೀಧರ್, ಬಿ.ಸಿ.ಪಾಟೀಲ್, ಯಮುನಾ, ತಬಲಾ ನಾಣಿ, ವಿಜಯ್ ಚಂಡೂರ್, ಬುಲೆಟ್ ಪ್ರಕಾಶ್ ಸೇರಿದಂತೆ 70ಕ್ಕೂ ಹೆಚ್ಚು ಕಲಾವಿದರು ನಟಿಸಿದ್ದಾರೆ. ನಾಯಕನ ತಂದೆಯಾಗಿ ನಟ ಶ್ರೀಧರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.

ಸಿನಿಮಾದಲ್ಲಿ ಒಟ್ಟು 6 ಹಾಡುಗಳಿವೆ. ಈಗಾಗಲೇ ಹಾಡುಗಳು ಎಲ್ಲರ ಮನದಲ್ಲಿ ಗುನುಗುಟ್ಟುತ್ತಿವೆ. ಬಾರಮ್ಮ ಬಾರಮ್ಮ ಭಾರತಿ, ಮುಲಾ ಮುಲಾ ಸೇರಿದಂತೆ ಎಲ್ಲ ಹಾಡುಗಳು ಸಿನಿರಸಿಕರ ಮನ ಸೆಳೆಯುತ್ತಿದ್ದು, ಯುಟ್ಯೂಬ್ ನಲ್ಲಿ ಟ್ರೆಂಡ್ ಸೃಷ್ಟಿ ಮಾಡಿವೆ. ರಘು ದೀಕ್ಷಿತ್ ಹಾಡಿರುವ ಹಾಡನ್ನು ಉತ್ತರ ಭಾರತದ ಒಟ್ಟು 8 ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಇನ್ನೂ ಬಾರಮ್ಮ ಬಾರಮ್ಮ ಹಾಡು ಚಂದನ್ ಶೆಟ್ಟಿ ಧ್ವನಿಯಲ್ಲಿ ಮೂಡಿಬಂದಿದೆ. ಸಿನಿಮಾ ಸೆಪ್ಟೆಂಬರ್ 8ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಿಗೆ ಲಗ್ಗೆಯಿಡಲಿದೆ.

 

 

Share This Article
Leave a Comment

Leave a Reply

Your email address will not be published. Required fields are marked *