ಗೌರಿ ಲಂಕೇಶ್ ಹತ್ಯೆ: ಪ್ರಮೋದ್ ಮುತಾಲಿಕ್ ಹೇಳಿದ್ದೇನು?

Public TV
1 Min Read

ಬೆಳಗಾವಿ: ಗೌರಿ ಲಂಕೇಶ್ ಅವರನ್ನು ಕೊಂದರೆ ಅವರ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲ. ಯಾರೇ ಆಗಲಿ ಶಾರೀರಿಕ ಸಂಘರ್ಷಕ್ಕೆ ಇಳಿಯಬಾರದು ಎಂದು ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮುತಾಲಿಕ್, ಪತ್ರಕರ್ತೆ- ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ನಾನು ಖಂಡಿಸುತ್ತೇನೆ. ತಕ್ಷಣ ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಅಂತ ಹೇಳಿದ್ರು.

ಈ ರೀತಿ ಕೊಲೆ ಮಾಡುವ ವಿಕೃತಿ ಸರಿಯಲ್ಲ. ವಿಚಾರವಾದಿಗಳದ್ದಿರಬಹುದು, ಇನ್ಯಾವುದೇ ಹಿಂದೂ ಕಾರ್ಯಕರ್ತರದ್ದಿರಬಹುದು, ಹತ್ಯೆ ಮಾಡುವುದು ಸರಿಯಲ್ಲ. ವೈಚಾರಿಕ ಸಂಘರ್ಷ ಆಗಲಿ ಆದ್ರೆ ಶಾರೀರಿಕ ಸಂಘರ್ಷ ಸರಿಯಲ್ಲ. ಇದನ್ನ ಒಪ್ಪುವುದಿಲ್ಲ. ಸರ್ಕಾರ ಇಂತಹ ಪ್ರಕರಣಗಳನ್ನ ಗಂಭೀರವಾಗಿ ತೆಗೆದುಕೊಂಡು ಕೂಡಲೇ ತನಿಖೆಯಾಗಿ ಶಿಕ್ಷೆಯಾಗುವಂತಹ ಪ್ರಕ್ರಿಯೆ ದೀರ್ಘ ಕಾಲ ಎಳೆದುಕೊಂಡು ಹೋಗುತ್ತಿರುವುದರಿಂದ ಕೊಲೆಗಡುಗರಿಕೆ ಭಯ ಇಲ್ಲದ ವಾತಾವರಣ ನಿರ್ಮಾಣವಾಗಿದೆ. ಇದು ಅಪಾಯಕಾರಿ ಅಂತ ಹೇಳಿದ್ರು.

ವ್ಯಕ್ತಿಯ ವಿಚಾರವನ್ನ ಪ್ರಕಟ ಮಾಡುವಂತಹ ಸ್ವಾತಂತ್ರ್ಯ ನಮಗೆ ಡಾ. ಅಂಬೇಡ್ಕರ್ ಸಂವಿಧಾನ ಕೊಟ್ಟಿದೆ. ಕೊಲೆಯ ಮೂಲಕ ಅಂತಹ ವಿಚಾರವನ್ನ ಹತ್ತಿಕ್ಕುವ ಪ್ರಯತ್ನ ಸರಿಯಲ್ಲ. ಅದು ಸಾಧ್ಯವೂ ಇಲ್ಲ. ವೈಚಾರಿಕತೆ ಜೀವಂತವಾಗಿರುತ್ತದೆ. ವ್ಯಕ್ತಿಯ ದೇಹ ಹೋಗಬಹುದು ಆದ್ರೆ ವಿಚಾರ ಉಳಿಯುತ್ತದೆ. ಕೊಲೆಗಡುಕರು ಅರ್ಥ ಮಾಡಿಕೊಳ್ಳಬೇಕು. ಕೊಲೆಯಿಂದ ಅವರ ವಿಚಾರವನ್ನ ನಿಲ್ಲಿಸಲು ಸಾಧ್ಯವಿಲ್ಲ ಅಂದ್ರು.

ಕರ್ನಾಟಕ ಪೊಲೀಸರು ಸಮರ್ಥವಾಗಿದ್ದಾರೆ. ಕೊಲೆಗಾರರನ್ನು ಬಂಧಿಸುವುದರಲ್ಲಿ ನಿಶ್ಚಿತವಾಗಿ ಯಶಸ್ಸು ಗಳಿಸುತ್ತಾರೆ ಅಂತ ಮುತಾಲಿಕ್ ಹೇಳಿದ್ರು.

https://www.youtube.com/watch?v=4ltP25aJrF4&feature=youtu.be

Share This Article
Leave a Comment

Leave a Reply

Your email address will not be published. Required fields are marked *