ಸಮಾಜದ ಮುಖ್ಯವಾಹಿನಿಗೆ ನಕ್ಸಲರನ್ನು ನಾನ್ಯಾಕೆ ಕರೆತರುತ್ತಿದ್ದೇನೆ: ಗೌರಿ ಲಂಕೇಶ್ ಮಾತುಗಳನ್ನು ಕೇಳಿ

Public TV
3 Min Read

ಬೆಂಗಳೂರು: ಸಿರಿಮನೆ ನಾಗರಾಜ್ ಮತ್ತು ನೂರ್ ಜುಲ್ಫಿಕರ್ ಅವರನ್ನು ನಕ್ಸಲ್ ಚಟುವಟಿಕೆಯಿಂದ ಸಮಾಜದ ಮುಖ್ಯವಾಹಿನಿಗೆ ತರುವ ಸಂದರ್ಭದಲ್ಲಿ ಗೌರಿ ಲಂಕೇಶ್ ಅಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದರು.

ನಕ್ಸಲರಿಗೆ ಮುಖ್ಯವಾಹಿನಿಗೆ ಬರಲು ಇಚ್ಚಿಸುವ ಪುನರ್ವಸತಿ ಅಥವಾ ಶರಣಾಗತಿ ಎಂಬ ಪ್ಯಾಕೇಜ್ ಇದೆ. ಅದರಲ್ಲಿ ಯಾವುದನ್ನೂ ಬೇಕಾದ್ರೂ ತಗೋಬೋದು. ಆದ್ರೆ ನಕ್ಸಲರು ಈ ಪ್ಯಾಕೇಜ್ನ ಶರಣಾಗತಿ ಅಡಿಯಲ್ಲಿ ನಾವು ಮುಖ್ಯವಾಹಿನಿ ವಾಪಾಸ್ ಬರ್ತಾ ಇದ್ದೀವಿ ಅಂತ ಹೇಳುತ್ತಿದ್ದಾರೆ.

ಹೀಗಾಗಿ ಡಿಸೆಂಬರ್ 2ಕ್ಕೆ ದೊರೆಸ್ವಾಮಿ ಹಾಗೂ ನನ್ನ ಸಮ್ಮುಖದಲ್ಲಿ ಭೂಗತ ಬದುಕನ್ನು ತೊರೆದು ಪ್ರಜಾತಾಂತ್ರಿಕವಾಗಿ ಹೋರಾಡೋದಕ್ಕೆ ಮುಖ್ಯವಾಹಿನಿ ಬರ್ತಾ ಇದ್ದಾರೆ. ಹೀಗೆ ಬಂದವರು ಸಾಮಾಜದಲ್ಲಿ ಆರಾಮವಾಗಿ ಓಡಾಡುತ್ತಾರೆ ಅಂತ ತಿಳ್ಕೋಬೇಡಿ. ನ್ಯಾಯಾಲಯದಲ್ಲಿ ಅದಕ್ಕಾಗಿಯೇ ಕೆಲವೊಂದು ಪ್ರಕ್ರಿಯೆಗಳಿವೆ. ಹೀಗಾಗಿ ಹೊರಬಂದ ಬಳಿಕ ಅವರನ್ನು ಮೊದಲು ಚಿಕ್ಕಮಗಳೂರು ಪೊಲೀಸರಿಗೆ ಹಸ್ತಾಂತರ ಮಾಡುತ್ತೇವೆ. ಇಬ್ಬರ ವಿರುದ್ಧವೂ ವಾರೆಂಟ್ ಇದೆ. ಹೀಗಾಗಿ ಆ ಬಳಿಕ ಪೊಲೀಸರು ಈ ಇಬ್ಬರನ್ನು ಕೋರ್ಟ್ ಗೆ ಹಾಜರುಪಡಿಸುತ್ತಾರೆ. ನಂತ್ರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತಾರೆ. ಆ ಮೇಲೆ ಬೇರೆ ಪ್ರಕ್ರಿಯೆಗಳು ನಡೆಯುತ್ತದೆ ಅಂತ ಹೇಳಿದ್ದರು.

ಸಿರಿಮನೆ ನಾಗರಾಜ್ ಅವರ ಕೇಸ್ ಗಳೆಲ್ಲವೂ ಜಾಮೀನು ಸಿಗುವಂತಹ ಕೇಸ್ ಗಳೇ ಆಗಿವೆ. ನೂರ್ ಜುಲ್ಫಿಕರ್ ಅವರ ಮೇಲಿನ ಕೇಸ್ ಗಳು ಕೇಂದ್ರೀಯ ಕಾಯ್ದೆಯಡಿಯಲ್ಲಿ ಬರುತ್ತವೆ. ಹೀಗಾಗಿ ಇವರ ಮೇಲಿರುವ ಎರಡೂ ಕೇಸ್ ಗಳಲ್ಲಿ ಜಾಮೀನು ಸಿಗಬಹುದು ಅಂತ ಅಂದುಕೊಂಡಿದ್ದೇವೆ ಎಂದು ತಿಳಿಸಿದ್ದರು.

ಇಬ್ಬರ ಮೇಲೆ ಎಷ್ಟು ಕೇಸ್ ಗಳಿವೆ?: ಸಾಮಾನ್ಯವಾಗಿ ನಕ್ಸಲರ ಚಟುವಟುಟಿಕೆಯಲ್ಲಿ ಪೊಲೀಸರು ಶಂಕಿತರ ಮೇಲೆಯೂ ಕೇಸ್ ಹಾಕ್ತಾರೆ. ಇವರು 2006ರಲ್ಲೇ ನಕ್ಸಲ್ ಪಕ್ಷ ಬಿಟ್ಟು ಹೊರಗೆ ಬಂದಿದ್ದಾರೆ. ಆದ್ರೂ 2008ರಲ್ಲಿ ಇವರ ಮೇಲೆ ಕೇಸ್ ಹಾಕಿದ್ದಾರೆ. ಹೀಗಾಗಿ ಪಕ್ಷ ತೊರೆದ ಬಳಿಕವೂ ಕೇಸ್ ಹಾಕಿದ್ದಾರೆ ಅಂದ್ರೆ ಆ ಕೇಸ್ ನಲ್ಲಿ ಅವರು ಭಾಗಿಯಾಗಿಲ್ಲ ಎಂಬುವುದಾಗಿ ತಿಳಿದುಬರುತ್ತದೆ. ಇನ್ನು ಇವರ ಮೇಲಿದ್ದ ಎರಡು ಕೇಸ್ ಗಳಲ್ಲೂ ಸಾಕ್ಷಿಯಿಲ್ಲ. ಹೀಗಾಗಿ ಹೇಗೂ ಕೋರ್ಟ್ ಗೆ ಹಾಜರು ಪಡಿಸುವುದರಿಂದ ಕಾನೂನು ಬದ್ಧವಾಗಿಯೇ ಪ್ರಕ್ರಿಯೆಗಳು ನಡೆಯಲೇಬೇಕಾಗಿದೆ. ಆದುದರಿಂದ ಅವರ ಮೇಲಿದ್ದ ಕೇಸ್ ಗಳ ಬಗ್ಗೆ ನ್ಯಾಯಾಲಯವೇ ತೀರ್ಮಾನಿಸುತ್ತೆ ಅಂತ ಹೇಳಿದ್ದರು.

ಸಾಕೇತ್ ರಾಜ್ ಎನ್ ಕೌಂಟರ್ ಆದ ಬಳಿಕ ನೂರ್ ಜುಲ್ಫಿಕರ್ ಗೆ ರಾಜ್ಯದ ನಾಯಕತ್ವ ವಹಿಸಿಕೊಳ್ಳಲು ಹೇಳಿದ್ರು. ಆದ್ರೆ ಅದಾಗಲೇ ನಕ್ಸಲ್ ಪಕ್ಷದಲ್ಲಿ ಶಸ್ತ್ರಾಸ್ತ್ರ ಮಾರ್ಗ ಬೇಕೋ ಬೇಡ್ವೋ ಎನ್ನುವುದರ ಬಗ್ಗೆ ದೊಡ್ಡ ಭಿನ್ನಾಭಿಪ್ರಾಯ ಮೂಡಿತ್ತು. ಶಸ್ತ್ರಾಸ್ತ್ರ ಹೋರಾಟಕ್ಕೆ ಈ ಕಾಲ ಪಕ್ವ ಆಗಿಲ್ಲ. ಅದರ ಬದಲೂ ಜನರನ್ನು ಒಗ್ಗೂಡಿಸಿ ಮಾಡಬೇಕಾಗಿರೋ ಹೋರಾಟದ ಸಮಯ ಈಗಿರೋದು ಅಂತ ಜುಲ್ಫೀಕರ್ ತಂಡ ವಾದ ಮಾಡಿಕೊಂಡು ಬಂದಿತ್ತು. ಹೀಗಾಗಿ ಅವರು ನಾಯಕತ್ವ ವಹಿಸಿಕೊಳ್ಳಲು ಹಿಂಜರಿದಿದ್ದರು. ಆ ಬಳಿಕ ರಾಜಮೌಳಿ ಎಂಬವರನ್ನು ನೇಮಿಸಿದ್ದರು. ಅವರು ಆಂಧ್ರಪ್ರದೇಶದಲ್ಲಿ ಎನ್ ಕೌಂಟರ್ ಗೆ ಬಲಿಯಾದ್ರು ಅಂತ ತಿಳಿಸಿದ್ದರು.

ಆರೋಗ್ಯ ಸರಿಯಿಲ್ಲದಿದ್ದರುದರಿಂದ ಅವರು ನಕ್ಸಲ್ ಚಟುವಟಿಕೆಯಿಂದ ಹೊರಬರುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಗೌರಿ, ನಾನು ಅವರಿಬ್ಬರನ್ನೂ ಭೇಟಿಯಾಗಿದ್ದೀನಿ. ನೂರ್ ಜುಲ್ಫಿಕರ್ ಅವರಿಗೆ 45 ವಯಸ್ಸು ಆಗಿರಬೇಕು. ಅವರು ಆರೋಗ್ಯವಾಗಿಯೇ ಇದ್ದಾರೆ. ಇನ್ನು ಸಿರಿಮನೆ ನಾಗರಾಜ್ ಅವರಿಗೆ 62 ವರ್ಷ. ಅವರ ಆರೋಗ್ಯದಲ್ಲಿಯೂ ಯಾವುದೇ ಸಮಸ್ಯೆಯಿಲ್ಲ, ಅವರೂ ಆರೋಗ್ಯವಾಗಿದ್ದಾರೆ ಅಂದಿದ್ದರು.

ನಕ್ಸಲ್ ಪಕ್ಷ ಹಿಡಿದಿರೋ ಹಾದಿ ಶಸ್ತ್ರಾಸ್ತ್ರ ಹೋರಾಟ ಅನಗತ್ಯ. ಅದರಿಂದ ರಕ್ತಪಾತವಾಗುತ್ತೆ ಹೊರತು ಯಾವುದೇ ಕ್ರಾಂತಿಯಾಗಲ್ಲ ಅನ್ನೋ ಭಿನ್ನಾಭಿಪ್ರಾಯದಿಂದಲೇ ಅವರು ಹೊರಬರುತ್ತಿದ್ದಾರೆ. ಸಿ ಟಿ ರವಿ ಹೇಳಿದ್ರು, ವಯೋವೃದ್ಧರು, ಅನಾರೋಗ್ಯ ಪೀಡಿತರಾಗಿರುವುದರಿಂದ ಕಾಡಿನಲ್ಲಿ ಓಡಾಡಲು ಅಸಾಧ್ಯವಾಗುತ್ತಿದೆ. ಹೀಗಾಗಿ ಅವರು ಈ ಯೋಜನೆ ಅಡಿ ಅವರಿಗೆ ಪರ್ಯಾಯ ಕಲ್ಪಿಸುತ್ತಿದ್ದಾರೆ ಅಂತ ಹೇಳಿದ್ರು. ಅದು ಸಾಧ್ಯನೇ ಇಲ್ಲ. ಬೇಕಿದ್ರೆ 2 ನೇ ತಾರೀಕಿನ ಬಳಿಕ ಸಿಟಿ ರವಿ ಬಂದು ನೋಡಬಹುದು. ಇವರಿಬ್ಬರ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಿಲ್ಲದೇ ಗಟ್ಟಿಮುಟ್ಟಾಗಿಯೇ ಇದ್ದಾರೆ. ಒಟ್ಟಿನಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದ ಹೊರಬರುತ್ತಿದ್ದಾರೆ ಅಂತ ಪಬ್ಲಿಕ್ ಟಿವಿಗೆ ಸಂಪೂರ್ಣ ಮಾಹಿತಿ ನೀಡಿದ್ದರು.

https://www.youtube.com/watch?v=Uu5JI4_VBDg&feature=youtu.be

https://www.youtube.com/watch?v=HGuoHd1K_0o&feature=youtu.be

 

Share This Article
Leave a Comment

Leave a Reply

Your email address will not be published. Required fields are marked *