‘ರಾಜಹಂಸ’ದ ಹೀರೋ ರಾಜಸ್ಥಾನ ಪೊಲೀಸ್ ವಶಕ್ಕೆ – ಅಲ್ಲಿಂದ ವಾಪಸ್ ಬಂದ ಕತೆ ಓದಿ!

Public TV
3 Min Read

ಬೆಂಗಳೂರು: ಕನ್ನಡದ `ರಾಜಹಂಸ’ ಸಿನಿಮಾದ ನಾಯಕ ನಟ ಗೌರಿ ಶಿಕರ್ ಅವರನ್ನು ಜೈಪುರದಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡು ನಂತರ ಬಿಡುಗಡೆಗೊಳಿಸಿದ್ರಂತೆ. ಹೌದು, ರಾಜಹಂಸದ ಚಿತ್ರತಂಡ ಚಿತ್ರೀಕರಣಕ್ಕಾಗಿ ರಾಜಸ್ಥಾನದ ಜೈಪುರ ನಗರಕ್ಕೆ ತೆರಳಿತ್ತು. ಈ ವೇಳೆ ಜೈಪುರನ ಐತಿಹಾಸಿಕ ಕೋಟೆಯ ಒಳಭಾಗದಲ್ಲಿ ಚಿತ್ರೀಕರಣ ಮುಗಿಸಿಕೊಂಡು ಬರುವಾಗ ಪೊಲೀಸರು ನಾಯಕ ಗೌರಿಶಿಕರ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದರು. ನಂತರ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ವಾಪಸ್ ಕಳುಹಿಸಿದ್ದಾರೆ.

ಏನಾಗಿತ್ತು?: ಜೈಪುರ ಕೋಟೆಯಲ್ಲಿ ಶೂಟಿಂಗ್ ಮುಗಿದ ಬಳಿಕ ಚಿತ್ರತಂಡ ಹೊರ ನಡೆದಿತ್ತು. ಕೊನೆಯಲ್ಲಿ ಉಳಿದ ನಾಯಕ ನಟ ಗೌರಿ ಶಿಕರ್‍ ಹೊರ ಹೋಗುವಷ್ಟರಲ್ಲಿ ಇಡೀ ಚಿತ್ರತಂಡ ಹೊರಟಿತ್ತು. ಇನ್ನೇನು ಹೊರಡುವಷ್ಟರಲ್ಲಿ ಬಂದ ಪೊಲೀಸರು ಕೋಟೆಯ ಪ್ರವೇಶದ ಟಿಕೆಟ್ ಕೇಳಿದ್ದಾರೆ. ಈ ವೇಳೆ ಗೌರಿ ಶಿಖರ್ ತಾವು ಸಿನಿಮಾ ಶೂಟಿಂಗ್ ಗಾಗಿ ಬಂದು ಚಿತ್ರತಂಡದ ಸದಸ್ಯರು ಮುಂದೆ ಹೋಗಿದ್ದು, ಹಾಗಾಗಿ ತಮ್ಮ ಬಳಿ ಟಿಕೆಟ್ ಇಲ್ಲವೆಂದು ತಿಳಿಸಿದ್ದಾರೆ.

ಗೌರಿಶಿಕರ್ ತಾವು ಬಂದ ಉದ್ದೇಶವನ್ನು ಪೊಲೀಸರಿಗೆ ತಿಳಿಸಿದ್ರೂ, ಬೇರೆ ಭಾಷೆಯಾಗಿದ್ದರಿಂದ ಅರ್ಥವಾಗಿಲ್ಲ. ಹಾಗಾಗಿ ನನ್ನನ್ನು ನಾಲ್ಕು ಗಂಟೆಗಳ ಕಾಲ ಠಾಣೆಯಲ್ಲಿ ಕೂರಿಸಲಾಯಿತು. ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಬಂದಾಗ ಮೊಬೈಲ್ ನಲ್ಲಿ ಸಿನಿಮಾದ ಟೀಸರ್ ತೋರಿಸಿದಾಗ ನನ್ನನ್ನು ಬಿಟ್ಟು ಬಿಟ್ಟರು ಎಂದು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ನಟ ಗೌರಿಶಿಕರ್ ಹೇಳಿದ್ದಾರೆ.

ಇದನ್ನೂ ಓದಿ: ನಿಮ್ಗೆ ಸೆಲ್ಫೀ ಕ್ರೇಝ್ ಇದ್ರೆ ಸೆಪ್ಟೆಂಬರ್ 8ಕ್ಕೆ ‘ರಾಜಹಂಸ’ ನೋಡಿ

ಪೀ..ಪೀ..ಸಾಂಗ್ ಕೇಳಿ: ಈಗಾಗಲೇ ಟ್ರೇಲರ್ ಮತ್ತು ಹಾಡುಗಳಿಂದ ಗಮನ ಸೆಳೆದಿರುವ `ರಾಜಹಂಸ’ ಯುಟ್ಯೂಬ್ ನಲ್ಲಿ ಸಖತ್ ಹವಾ ಕ್ರಿಯೇಟ್ ಮಾಡಿದೆ. ಹಳ್ಳಿ ಬೇರುಗಳು ಮತ್ತು ನಗರದ ಚಿಗುರುಗಳು ಜೊತೆಗೂಡಿ ಹ್ಯಾಪಿ ಅನ್ನೋ ಪೀಪಿ ಊದ್ತಾ ಕುಣಿದು ಕುಪ್ಪಳಿಸೋ ಪಕ್ಕಾ ಫ್ಯಾಮಿಲಿ ಹಾಡು ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ತನ್ನ ಸಂಗೀತದ ಅಲೆಗಳನ್ನು ಹರಿಸಿದೆ. ಜಾತ್ರೆಯ ಸನ್ನಿವೇಶವನ್ನು ಒಳಗೊಂಡಿರುವ ಪೀ..ಪೀ.. ಹಾಡಿನಲ್ಲಿ ಸಿನಿಮಾದ ಇಡೀ ಚಿತ್ರತಂಡ ಕಾಣಿಸಿಕೊಂಡಿರುವುದು ವಿಶೇಷವಾಗಿದೆ.

ನಗರದ ಹುಡುಗ ಮತ್ತು ಹಳ್ಳಿ ಹುಡುಗಿಯ ಕುಟುಂಬಸ್ಥರು ದೇವರ ಸನ್ನಿಧಿಯಲ್ಲಿ ಒಂದಾಗಿ ಪೂಜೆ ಸಲ್ಲಿಸುವ ವಿಶೇಷ ಹಾಡು ಇದಾಗಿದೆ. ಹಾಡಿನ ಲಿರಿಕ್ಸ್ ಮಾತ್ರ ಅರ್ಥಪೂರ್ಣವಾಗಿದ್ದು, ಗ್ರಾಮೀಣ ಮತ್ತು ನಗರದ ಜೀವನ ಶೈಲಿಯನ್ನು ಹೇಳುತ್ತದೆ. ಹಾಡಿನ ಸಂಗೀತವೂ ಚೆನ್ನಾಗಿದ್ದು ಕೇಳುಗರನ್ನು ಸಹ ನಾಲ್ಕು ಸ್ಟೆಪ್ ಹಾಕುವಂತೆ ಮಾಡುತ್ತದೆ.

ಧಾರಾವಾಹಿ ಮೂಲಕ ಕನ್ನಡಿಗರ ಮನೆ ಮಾತಾಗಿರುವ ಪುಟ್ಟ ಗೌರಿ (ರಂಜಿನಿ ರಾಘವನ್) ಮೊದಲ ಬಾರಿಗೆ ಬೆಳ್ಳಿ ಪರದೆಯಲ್ಲಿ ಮಿಂಚಲಿದ್ದಾರೆ. ಇನ್ನೂ ಸಿನಿಮಾದಲ್ಲಿ ರಂಜಿನಿ (ಹಂಸಾಕ್ಷಿ)ಗೆ ಜೊತೆಯಾಗಿ ಗೌರಿಶಿಕರ್ ನಾಯಕರಾಗಿ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ಶ್ರೀಧರ್, ಬಿ.ಸಿ.ಪಾಟೀಲ್, ಯಮುನಾ, ತಬಲಾ ನಾಣಿ, ವಿಜಯ್ ಚಂಡೂರ್, ಬುಲೆಟ್ ಪ್ರಕಾಶ್ ಸೇರಿದಂತೆ 70ಕ್ಕೂ ಹೆಚ್ಚು ಕಲಾವಿದರು ನಟಿಸಿದ್ದಾರೆ. ನಾಯಕನ ತಂದೆಯಾಗಿ ನಟ ಶ್ರೀಧರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.

ಇದನ್ನೂ ಓದಿ:  ಸೀನು, ಲವ್ ಎರಡನ್ನೂ ಕಂಟ್ರೋಲ್ ಮಾಡೋದು ಹೇಗೆ?

ಸಿನಿಮಾದಲ್ಲಿ ಒಟ್ಟು 6 ಹಾಡುಗಳಿವೆ. ಈಗಾಗಲೇ ಹಾಡುಗಳು ಎಲ್ಲರ ಮನದಲ್ಲಿ ಗುನುಗುಟ್ಟುತ್ತಿವೆ. ಬಾರಮ್ಮ ಬಾರಮ್ಮ ಭಾರತಿ, ಮುಲಾ ಮುಲಾ ಸೇರಿದಂತೆ ಎಲ್ಲ ಹಾಡುಗಳು ಸಿನಿರಸಿಕರ ಮನ ಸೆಳೆಯುತ್ತಿದ್ದು, ಯುಟ್ಯೂಬ್ ನಲ್ಲಿ ಟ್ರೆಂಡ್ ಸೃಷ್ಟಿ ಮಾಡಿವೆ. ರಘು ದೀಕ್ಷಿತ್ ಹಾಡಿರುವ ಹಾಡನ್ನು ಉತ್ತರ ಭಾರತದ ಒಟ್ಟು 8 ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಇನ್ನೂ ಬಾರಮ್ಮ ಬಾರಮ್ಮ ಹಾಡು ಚಂದನ್ ಶೆಟ್ಟಿ ಧ್ವನಿಯಲ್ಲಿ ಮೂಡಿಬಂದಿದೆ. ಸಿನಿಮಾ ಸೆಪ್ಟೆಂಬರ್ 8ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಿಗೆ ಲಗ್ಗೆಯಿಡಲಿದೆ.

 

 

Share This Article
Leave a Comment

Leave a Reply

Your email address will not be published. Required fields are marked *