ಸಿಎಂ ಸಿದ್ದರಾಮಯ್ಯ ಬೇನಾಮಿ ಆಸ್ತಿ: ಐಟಿಯಿಂದ ತನಿಖೆ ಆರಂಭ

Public TV
1 Min Read

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊಂದಿದ್ದಾರೆ ಎನ್ನಲಾದ ಬೇನಾಮಿ ಆಸ್ತಿಯ ತನಿಖೆಗೆ ಆದಾಯ ತೆರಿಗೆ ಇಲಾಖೆ ಮುಂದಾಗಿದೆ. ಆರ್‍ಟಿಐ ಕಾರ್ಯಕರ್ತ ರಾಮಮೂರ್ತಿ ಎಂಬವರು ದೂರು ನೀಡಿದ ಆಧಾರದ ಮೇಲೆ ಐಟಿ ಈಗ ಸಿಎಂ ಆಸ್ತಿಯ ತನಿಖೆ ಇಳಿದಿದೆ.

ಮುಖ್ಯಮಂತ್ರಿ ಆದ ಮೇಲೆ ಸಿದ್ದರಾಮಯ್ಯ ಕುಟುಂಬಸ್ಥರು ಹಾಗೂ ಸ್ನೇಹಿತರ ಹೆಸರಿನಲ್ಲಿ ಬೇನಾಮಿ ಆಸ್ತಿ ಮಾಡಿಕೊಂಡಿದ್ದಾರೆ. ಈ ಬೇನಾಮಿ ಆಸ್ತಿಗಳ ಮೌಲ್ಯ ನೂರಾರು ಕೋಟಿ ರೂ. ದಾಟುತ್ತದೆ. ಹೀಗಾಗಿ ಬೇನಾಮಿ ಕಾನೂನಿನ ಅಡಿಯಲ್ಲಿ ಸಿಎಂ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆರೋಪಿಸಿ ರಾಮಮೂರ್ತಿ 1638 ಪುಟಗಳ ದಾಖಲೆ ಸಮೇತ ಈ ಹಿಂದೆ ದೂರು ನೀಡಿದ್ದರು.

ದೂರಿನ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿರುವುದಾಗಿ ದೂರುದಾರರಿಗೆ ಐಟಿ ನೋಟಿಸ್ ಕಳುಹಿಸಿದೆ. ಈ ನೋಟಿಸ್ ನಲ್ಲಿ ತನಿಖೆ ಆರಂಭಗೊಂಡಿದ್ದು, ಸಿಎಂ ಬೇನಾಮಿ ಆಸ್ತಿಗೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ದಾಖಲೆಗಳು ಇದ್ದಲ್ಲಿ ನೀಡುವಂತೆ ಆದಾಯ ತೆರಿಗೆ ಇಲಾಖೆ ಜಂಟಿ ನಿರ್ದೇಶಕರು ರಾಮಮೂರ್ತಿ ಅವರಿಗೆ ಸೂಚಿಸಿದ್ದಾರೆ.

ತಮ್ಮ ದೂರಿನಲ್ಲಿ ರಾಮಮೂರ್ತಿ ಅವರು ಸಿಎಂ ಸುಮಾರು 40 ಮಂದಿಯ ಹೆಸರಿನಲ್ಲಿ ಬೇನಾಮಿ ಆಸ್ತಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *