ಹಾವು ಕಚ್ಚಿ ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದಾನೆ ಬಾಲಕ

Public TV
2 Min Read

ಕೋಲಾರ: ಮಧ್ಯ ರಾತ್ರಿ ಮನೆಗೆ ಬಂದಾತ ಸುಮ್ಮನೆ ಹೋಗಿದ್ರೆ ಆತನು ಬದುಕುತ್ತಿದ್ದ. ಆ ಮನೆಯಲ್ಲಿದ್ದವರು ನಿಶ್ಚಿಂತೆಯಿಂದ ಮನೆಯಲ್ಲಿರುತ್ತಿದ್ದರು. ಆದರೆ ಆ ‘ಅತಿಥಿ’ ಮುಟ್ಟಿದ ಪರಿಣಾಮ ಬಾಲಕ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾನೆ.

ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದ್ದು ಜುಲೈ 5 ರಂದು ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಜಿಂಕವಾರಪಲ್ಲಿ ಗ್ರಾಮದ ರಹೀಂ ಖಾನ್ ಮನೆಯಲ್ಲಿ ನಡೆದ ಘಟನೆ. ಅಂದು ರಾತ್ರಿ ಎಲ್ಲರಂತೆ ಊಟ ಮಾಡಿ ಮನೆಯ ಸದಸ್ಯರು ಮಲಗಿದ್ದರು. ಆದರೆ ಮನೆಗೆ ಕಪ್ಪೆ ನುಂಗಲು ಬಂದ ನಾಗರ ಹಾವು ಅಲ್ಲೇ ಪಕ್ಕದಲ್ಲೆ ಮಲಗಿದ್ದ ಸಮೀರ್‍ನ ಎಡ ಕಾಲಿಗೆ ಕಚ್ಚಿ ಗಾಯಗೊಳಿಸಿತ್ತು.

ಅಷ್ಟೊತ್ತಿಗಾಗಲೇ ನೋವಿನಿಂದ ಸಮೀರ್‍ನ ಚೀರಾಟ ಕಂಡ ಪೋಷಕರು ಹಾವನ್ನ ಕೊಂದು ಬಾಲಕನನ್ನು ಆಸ್ಪತ್ರೆ ದಾಖಲು ಮಾಡಿದ್ದರು. ಮೊದಲಿಗೆ ನಾಟಿ ಔಷಧ ಕೊಡಿಸಿದರಾದರೂ ಮಗನ ಜೀವಕ್ಕೆ ಅಪಾಯ ಇರುವುದನ್ನರಿತ ಪೋಷಕರು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲೆಯ ಆರ್‍ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ 2 ಶಸ್ತ್ರ ಚಿಕಿತ್ಸೆ ಮಾಡಿರುವುದರಿಂದ ಕೊಂಚ ಚೇತರಿಕೆ ಕಂಡಿರುವ ಸಮೀರ್ ಗೆ ಮತ್ತೊಂದು ಶಸ್ತ್ರ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.

ಇಗಾಗಲೇ 1 ಲಕ್ಷಕ್ಕೂ ಹೆಚ್ಚು ಸಾಲ ಮಾಡಿ ಚಿಕಿತ್ಸೆ ನೀಡಲಾಗಿದೆ. ಎರಡು ಶಸ್ತ್ರಚಿಕಿತ್ಸೆ ಮಾಡಿದ್ದು, ಮತ್ತೊಂದು ಶಸ್ತ್ರ ಚಿಕಿತ್ಸೆ ಮಾಡಬೇಕಾಗಿದೆ. ಇದಕ್ಕೆ 50 ಸಾವಿರ ರೂಪಾಯಿ ಆರ್ಥಿಕ ನೆರವು ಬೇಕಾಗಿದೆ. ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ರಹೀಂ ಖಾನ್‍ಗೆ ಕುಟುಂಬ ಪೋಷಣೆಯೆ ಕಷ್ಟವಾಗಿದೆ. ಮುರುಕಲು ಮನೆಯಲ್ಲಿ ಮಲಗಿದ್ದರಿಂದಲೇ ಈ ಅನಾಹುತ ನಡೆದಿದೆ. ಅದರಲ್ಲಿ ಸಮೀರ್‍ಗೆ ಮಾತ್ರ ಕಳೆದ ಒಂದು ವರ್ಷದಿಂದ ಆಗಾಗ ಅನಾರೋಗ್ಯಕ್ಕೆ ಸಾಕಷ್ಟು ಹಣ ಖರ್ಚು ಮಾಡಲಾಗಿದೆ.

ಈ ಹಿಂದೆ ಮೂರ್ಛೆ ರೋಗ, ನಾಯಿ ಕಚ್ಚಿ ಕಂಗಾಲಾಗಿದ್ದ ಕುಟುಂಬಸ್ಥರಿಗೆ ಸದ್ಯ ಹಾವು ಕಚ್ಚಿ ಮಗ ಆಸ್ಪತ್ರೆ ಪಾಲಾಗಿರುವುದು ದಿಕ್ಕೆ ತೋಚದಂತಾಗಿದೆ. ಆದ್ರೆ ಈ ಬಾರಿಯ ಶಸ್ತ್ರ ಚಿಕಿತ್ಸೆ ವೆಚ್ಚ ಭರಿಸಿದ್ರೆ ಸಾಕು ತನ್ನ ಮಗ ಗುಣಮುಖನಾಗುತ್ತಾನೆ. ಇದರಿಂದ ಮಗನ ಜೀವ ಉಳಿಯುತ್ತೆ ಎನ್ನುತ್ತಾರೆ ಪೋಷಕರು.

ಒಟ್ಟಿನಲ್ಲಿ ಜೀವಕ್ಕೆ ಯಾವುದೇ ತೊಂದರೆಯಿಲ್ಲದಂತೆ ಗುಣ ಮುಖನಾದರೆ ಸಾಕು ಜೀವದಾನ ಮಾಡಿದಂತೆ ಎಂದು ಬೆಳಕಿನ ಆಸರೆ ಬೇಡುತ್ತಿದೆ ಬಡ ಕುಟುಂಬ.

Share This Article
Leave a Comment

Leave a Reply

Your email address will not be published. Required fields are marked *