ಉತ್ತರ ಪ್ರದೇಶದಲ್ಲಿ ಮತ್ತೊಂದು ರೈಲು ದುರಂತ: ಹಳಿ ತಪ್ಪಿದ ಕೈಫಿಯತ್ ಎಕ್ಸ್ ಪ್ರೆಸ್, 70 ಮಂದಿಗೆ ಗಾಯ

Public TV
1 Min Read

ಲಕ್ನೋ: ಉತ್ಕಲ್ ರೈಲು ದುರಂತದ ನೆನಪು ಮಾಸುವ ಮುನ್ನವೇ ಉತ್ತರ ಪ್ರದೇಶದಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಕೈಫಿಯತ್ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿ 70 ಜನ ಗಾಯಗೊಂಡಿರುವ ಘಟನೆ ಮಂಗಳವಾರ ಅವೌರೇಯಾ ಜಿಲ್ಲೆಯಲ್ಲಿ ನಡೆದಿದೆ.

ಮಾನವ ರಹಿತ ಸಿಗ್ನಲ್ ನಲ್ಲಿ ಪಲ್ಟಿಯಾಗಿದ್ದ ಮರಳಿನ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರೈಲು ಅಜಮ್‍ಘಡದಿಂದ ದೆಹಲಿಗೆ ಸಂಚರಿಸುತ್ತಿದ್ದಾಗ ಬುಧವಾರ ನಸುಕಿನ ಜಾವ 2.50ಕ್ಕೆ ಪಟ ಮತ್ತು ಅಚಲ್ಡ ರೈಲ್ವೇ ನಿಲ್ದಾಣದ ಮಧ್ಯೆ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಉತ್ತರ ಕೇಂದ್ರ ವಲಯದ ಅಧಿಕಾರಿ ತಿಳಿಸಿದ್ದಾರೆ.

ಒಂದು ಬೋಗಿ ಸಂಪೂರ್ಣವಾಗಿ ತಿರುಗಿದ್ದರೆ, ಏಳು ಬೋಗಿಗಳು ಹಳಿ ತಪ್ಪಿದೆ. ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರೈಲ್ವೇ ಸಚಿವ ಸುರೇಶ್ ಪ್ರಭು ಟ್ವೀಟ್ ಮಾಡಿ ಘಟನೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಿಲಾಗಿದೆ ಎಂದು ಹೇಳಿದ್ದಾರೆ.

ಘಟನೆ ಬಗ್ಗೆ ವಿವರಣೆ ಪಡೆಯಲು ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಯೋಗಿ ಅದಿತ್ಯನಾಥ್ ಹಿರಿಯ ಅಧಿಕಾರಿಗಳ ಹತ್ತಿರ ಮಾತನಾಡಿದ್ದಾರೆ. ಪೊಲೀಸ್ ಹೆಚ್ಚುವರಿ ನಿರ್ದೇಶಕ ಅಧಿಕಾರಿಯಾದ ಆನಂದ್ ಕುಮಾರ್ ಪ್ರತಿಕ್ರಿಯಿಸಿ, ಮರಳಿನ ಲಾರಿ ಹಳಿ ಪ್ರವೇಶಿಸಿ ಪಲ್ಟಿಯಾಗಿದ್ದು ಹೇಗೆ ಎನ್ನುವುದರ ಬಗ್ಗೆ ತಿಳಿಯಲು ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ಶನಿವಾರ ಪಶ್ಚಿಮ ಉತ್ತರ ಪ್ರದೇಶದ ಕತೌಲಿಯ ಹತ್ತಿರ ಕಾಳಿಂಗ ಎಕ್ಸ್‍ಪ್ರೆಸ್ ಹಳಿ ತಪ್ಪಿ 23 ಜನ ಸಾವನ್ನಪ್ಪಿ, 150 ಕ್ಕಿಂತಲೂ ಹೆಚ್ಚಿನ ಮಂದಿಗೆ ಗಾಯವಾಗಿತ್ತು. ವಿಶ್ವದ 4ನೇ ಅತಿ ದೊಡ್ಡ ರೈಲ್ವೇ ಜಾಲವನ್ನು ಭಾರತ ಹೊಂದಿದ್ದು, ಪ್ರತಿ ದಿನ 2.2 ಕೋಟಿ ಜನ ರೈಲಿನಲ್ಲಿ ಸಂಚರಿಸುತ್ತಾರೆ.

 

 

 

Share This Article
Leave a Comment

Leave a Reply

Your email address will not be published. Required fields are marked *