ಮಗಳ ಜೊತೆ ಜಗಳವಾಡಿದ್ದಕ್ಕೆ ಮನೆಗೆ ಬಂದಿದ್ದ ಅಳಿಯನಿಗೇ ಬೆಂಕಿಯಿಟ್ಟ ಅತ್ತೆ!

Public TV
1 Min Read

ಮೈಸೂರು: ಮಗಳ ಜೊತೆ ಜಗಳವಾಡಿದ್ದಕ್ಕೆ ರೊಚ್ಚಿಗೆದ್ದ ಅತ್ತೆ ತನ್ನ ಮನೆಗೆ ಬಂದಿದ್ದ ಅಳಿಯನನ್ನು ಸಜೀವವಾಗಿ ದಹಿಸಿದ ಅಮಾನವೀಯ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ.

ನಾಗರಾಜ ಶೆಟ್ಟಿ(43) ಹತ್ಯೆಯಾದ ಅಳಿಯ. ಈ ಘಟನೆ ಮೈಸೂರು ಜಿಲ್ಲೆಯ ನಂಜನಗೂಡಿನ ಮಾಕನಪುರದಲ್ಲಿ ನಡೆದಿರುವ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ.

ಮೂಲತಃ ಗುಂಡ್ಲುಪೇಟೆಯ ಕೂತನೂರು ಗ್ರಾಮದ ನಿವಾಸಿಯಾಗಿರೋ ನಾಗರಾಜ್ ಶೆಟ್ಟಿ, 5 ವರ್ಷಗಳ ಹಿಂದೆ ಮಾಕಾಪುರ ಮಣಿ ಎಂಬುವರನ್ನು ಮದುವೆಯಾಗಿದ್ದರು. ಇತ್ತೀಚೆಗಷ್ಟೇ ನಾಗರಾಜ್ ಜೊತೆ ಪತ್ನಿ ಜಗಳವಾಡಿ ತಾಯಿ ಮನೆಗೆ ಬಂದಿದ್ದರು. ಹೀಗಾಗಿ ಪತ್ನಿಯನ್ನು ತನ್ನೊಂದಿಗೆ ವಾಪಾಸ್ ಕಳುಹಿಸಿಕೊಡುವಂತೆ ನಾಗರಾಜ್ ಮನೆಗೆ ಬಂದು ಅತ್ತೆ ಜೊತೆ ಜಗಳವಾಡಿದ್ದರು. ಅತ್ತೆ, ಅಳಿಯನ ಗಲಾಟೆ ತಾರಕಕ್ಕೇರಿದ್ದರಿಂದ ಅಳಿಯನನ್ನು ಪತ್ನಿ ಮಣಿ ಕುಟುಂಬ ಜೋಳದ ಹುಲ್ಲಿನ ಮೆದೆಗೆ ದೂಡಿ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ.

ಅತ್ತೆ ಮನೆಗೆ ಹೋದ ನಾಗರಾಜ್ ಶೆಟ್ಟಿ ವಾಪಸ್ ಬರದೇ ಇದ್ದುದರಿಂದ ಅನುಮಾನಗೊಂಡು ಸೋದರರು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಣಿ ಕುಟುಂಬಸ್ಥರ ಮೇಲೆ ಆರೋಪ ಮಾಡಿ ದೂರು ದಾಖಲಿಸಿದ್ದರಿಂದ ಪೊಲೀಸರು ತನಿಖೆ ನಡೆಸಿದಾಗ ಜೋಳದ ಮೆದೆಯಲ್ಲಿ ವ್ಯಕ್ತಿ ಸುಟ್ಟಿರುವ ಕುರುಹುಗಳು ಪತ್ತೆಯಾಗಿವೆ.

ಪೊಲೀಸರು ಅತ್ತೆ ಕಾಳಮ್ಮ, ಮಾವ ಮಹಾದೇವ ಶೆಟ್ಟಿ, ಪತ್ನಿ ಮಣಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *