ಬಸವಣ್ಣನವರನ್ನ ವೀರಶೈವರೇ ಕೊಂದ್ರಂತೆ – ತಲಕಾಡು ಗೌಡ್ರ ಹೇಳಿಕೆಗೆ ಚಿದಾನಂದಮೂರ್ತಿ ಗರಂ

Public TV
2 Min Read

ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮದ ಬೇಡಿಕೆ ನಡುವೆಯೇ ಬಸವಣ್ಣನವರ ಮರಣ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಇತಿಹಾಸಕಾರರು ಮತ್ತು ಧರ್ಮಗುರುಗಳ ನಡುವೆ ಈ ವಿಚಾರ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ.

ಇತಿಹಾಸಕಾರರು ಬಸವಣ್ಣನವರದ್ದು ಕೊಲೆಯೆನ್ನುತ್ತಿದ್ರೆ, ಧರ್ಮಗುರುಗಳು ಮತ್ತು ಚಿಂತಕರು ಲಿಂಗೈಕ್ಯರಾದ್ರು ಅಂತಾ ವಾದಿಸ್ತಿದ್ದಾರೆ. ಇನ್ನೊಂದೆಡೆ ಆತ್ಮಹತ್ಯೆ ಎಂಬ ಮಾತು ಕೇಳಿಬರ್ತಿದೆ. ಆದ್ರೆ ದೃಢೀಕರಿಸುವ ಪುರಾವೆ ಮಾತ್ರ ಯಾರ ಬಳಿಯೂ ಇಲ್ಲ.

ಬಸವಣ್ಣ ಆತ್ಮಹತ್ಯೆ ಮಾಡಿಕೊಂಡ್ರು ಎಂದು ಕಾರ್ಯಕ್ರಮವೊಂದರಲ್ಲಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದರು.

ಆದ್ರೆ ಇತಿಹಾಸಕಾರರಾದ ತಲಕಾಡು ಚಿಕ್ಕರಂಗೇಗೌಡ ಬಸವಣ್ಣನವರದ್ದು ಕೊಲೆ ಎಂದಿದ್ದಾರೆ. ಮೂಲಭೂತವಾದಿ ವೀರಶೈವರೇ ಬಸವಣ್ಣನ ಏಳ್ಗೆ ಸಹಿಸದೆ ಕೊಲೆ ಮಾಡಿದ್ದಾರೆ. ವೀರಶೈವರು ಸಾಕಷ್ಟು ಕಟುಕರಾಗಿದ್ದರು. ಕೂಡಲಸಂಗಮದ ಬಳಿ ಅವರ ಕೊಲೆಯಾಗಿರುವ ಸಾಧ್ಯತೆಯಿದೆ. ಅದರ ಹೊರತು ಬಸವಣ್ಣನದ್ದು ಆತ್ಮಹತ್ಯೆ ಅಥವಾ ಸಹಜ ಸಾವು ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ ಅಂತಿದ್ದಾರೆ. ಇನ್ನು ಚಿಕ್ಕರಂಗೇಗೌಡರ ಈ ಹೇಳಿಕೆ ಸಾಕಷ್ಟು ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.

ಯಾವುದೇ ಧಾರ್ಮಿಕ ನಾಯಕರ ಅಂತ್ಯ ದುರಂತ ಕಂಡಿದೆ. ಆತ್ಮಹತ್ಯೆ ಮಾಡಿಕೊಳ್ಳುವ ತೆಳು ಮನಸ್ಸು ಅವರದ್ದಾಗಿರಲಿಲ್ಲ. ಗಟ್ಟಿಯಾದ ವ್ಯಕ್ತಿತ್ವ ಅವರದ್ದು. ಅವರ ಕ್ರಾಂತಿಕಾರಿ ಧೋರಣೆ ಸಹಿಸದೆ ಕೆಲವರು ಕೊಲೆ ಮಾಡಿದ್ದಾರೆ ಅನನೋದನ್ನ ಹೆಚ್ಚು ಒಪ್ಪಬಹುದು ಅಂತ ಚಿಕ್ಕರಂಗೇಗೌಡ ಹೇಳಿದ್ದಾರೆ.

ಸಾಹಿತಿ ಮತ್ತು ಚಿಂತಕ ಚಿದಾನಂದಮೂರ್ತಿ ಚಿಕ್ಕರಂಗೇಗೌಡರ ವಿರುದ್ಧ ಕಿಡಿ ಕಾರಿದ್ದಾರೆ. ಇತಿಹಾಸಕಾರರು ಅಜ್ಞಾನದಿಂದ ಈ ಹೇಳಿಕೆ ನೀಡಿದ್ದಾರೆ. ಬಸವಣ್ಣನವರದ್ದು ಹತ್ಯೆಯೂ ಅಲ್ಲ, ಆತ್ಯಹತ್ಯೆಯೂ ಅಲ್ಲ. ಅವರು ಸ್ವ-ಇಚ್ಛೆಯಿಂದ ಕೂಡಲಸಂಗಮದಲ್ಲಿ ಲಿಂಗೈಕ್ಯರಾದರು ಅಂತಾ ತಮ್ಮ ವಾದವನ್ನು ಮುಂದಿಟ್ಟಿದ್ದಾರೆ. ಜೊತೆಗೆ ಈ ಸಂಬಂಧ ಸ್ಪಷ್ಟ ದಾಖಲಾತಿಗಳಿರುವುದಾಗಿಯೂ ಹೇಳ್ತಿದ್ದಾರೆ.

ಕೂಡಲ ಸಂಗಮ ಅವರಿಗೆ ಪವಿತ್ರ ಕ್ಷೇತ್ರ. ತಮ್ಮ ಕ್ಷೋಧಗೊಂಡ ಮನಸ್ಸನ್ನ ಶಾಂತಗೊಳಿಸಲು ಕೆಲ ಕಾಲ ಅಲ್ಲಿ ಇದ್ದು ಲಿಂಗೈಕ್ಯರಾಗ್ತಾರೆ. ಅವರನ್ನ ಯಾರೋ ಕೊಂದಿದದ್ದಾರೆ ಅನ್ನೋದಾಗಲಿ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನೋದು ಸಂಪೂರ್ಣ ಅಸತ್ಯ ಎಂದು ಚಿದಾನಂದಮೂರ್ತಿ ಹೇಳಿದ್ದಾರೆ.

ಇನ್ನು ಬಸವ ಪೀಠದ ಪೀಠ್ಯಾಧ್ಯಕ್ಷೆ ಮಾತೆ ಮಹಾದೇವಿ ಕೂಡ ಚಿದಾನಂದಮೂರ್ತಿ ಹೇಳಿಕೆಯನ್ನು ಪ್ರತಿಪಾದಿಸುತ್ತಿದ್ದಾರೆ. ಆತ್ಮಹತ್ಯೆ ಅಥವಾ ಕೊಲೆ ಎನ್ನುವವರು ಶುದ್ಧ ತಲೆಹರಟೆಗಳು. ಮನಸ್ಸಿಗೆ ಬಂದಂತೆ ಬಸವಣ್ಣನವರ ಬಗ್ಗೆ ಹೇಳುತ್ತಿದ್ದಾರೆ. ಬಸವಣ್ಣ ಆತ್ಯಹತ್ಯೆ ಮಾಡಿಕೊಳ್ಳುವಷ್ಟು ದರ್ಬಲರಾಗಿರಲಿಲ್ಲ. ಅವರು ಕೂಡಲಸಂಗಮದಲ್ಲಿ ಯೋಗದ ಮೂಲಕ ಲಿಂಗೈಕ್ಯರಾದರು. ಈ ಕುರಿತು ನಾನು ಸಾಕಷ್ಟು ಅಧ್ಯಯನವನ್ನೂ ನಡೆಸಿದ್ದೇನೆ ಅಂದ್ರು.

ಬಸವಣ್ಣನ ಸಾವು ಕುರಿತು ಸಾಕಷ್ಟು ಗೊಂದಲಗಳಿಗೆ. ಬಸವಣ್ಣನ ಭಕ್ತರ ಗೊಂದಲಕ್ಕೆ ಸರ್ಕಾರ ಪರಿಹಾರವನ್ನು ನೀಡಬೇಕು. ಇದಕ್ಕೆ ಇತಿಹಾಸಕಾರರು, ಪಂಡಿತರು ಹಾಗೂ ನ್ಯಾಯಾಧೀಶರನ್ನೊಳಗೂಂಡ ಸಮಿತಿಯನ್ನು ಸರ್ಕಾರ ರಚನೆ ಮಾಡಬೇಕು ಅಂತಿದೆ ವೀರಶೈವ ಮಹಾಸಭಾ.

ಬಸವಣ್ಣನವರ ಸಾವಿನ ಕುರಿತು ಸ್ಪಷ್ಟ ದಾಖಲೆಗಳಿಲ್ಲದ ಕಾರಣ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ. ಬಸವಣ್ಣನವ್ರ ಹುಟ್ಟು, ಬೆಳವಣಿಗೆ, ಮದುವೆ, ವಚನಗಳ ಬಗ್ಗೆ ಸಾಕಷ್ಟು ದಾಖಲೆಗಳು ಲಭ್ಯವಿದ್ದರೂ ಸಾವಿನ ಬಗ್ಗೆ ಸಮರ್ಪಕ ದಾಖಲೆ ಇಲ್ಲದೆ ಇರೋದು ಈ ಗೂಂದಲಗಳಿಗೆ ಕಾರಣವಾಗಿವೆ.

Share This Article
Leave a Comment

Leave a Reply

Your email address will not be published. Required fields are marked *