ಗುಜರಾತ್‍ನಲ್ಲಿ ಪ್ರವಾಹ- 25 ಸಾವಿರ ಮಂದಿ ಸ್ಥಳಾಂತರ

Public TV
1 Min Read

ಅಹಮದಾಬಾದ್: ಗುಜರಾತ್ ಹಾಗೂ ರಾಜಸ್ಥಾನದಲ್ಲಿ ವರುಣನ ಅಬ್ಬರ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಗುಜರಾತ್‍ನ ಅನೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಪ್ರವಾಹದ ಸ್ಥಿತಿ ಉಂಟಾಗಿದ್ದು, ಸೋಮವಾರ ರಾತ್ರಿ 25 ಸಾವಿರಕ್ಕೂ ಹೆಚ್ಚಿನ ಜನರನ್ನು ಇಲ್ಲಿಂದ ಸ್ಥಳಾಂತರಿಸಲಾಗಿದೆ. ಉತ್ತರ ಗುಜರಾತ್‍ನಲ್ಲಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, 1 ಸಾವಿರ ಜನರನ್ನ ರಕ್ಷಿಸಲಾಗಿದೆ. ಕಳೆದ ಎರಡು ದಿನಗಳಲ್ಲಿ ಸುಮಾರು 15 ಸಾವಿರ ಜನರನ್ನ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ಗುಜರಾತ್‍ನಲ್ಲಿ ಮುಂಗಾರು ಆರಂಭವಾದಾಗಿನಿಂದ ಸುಮಾರು 70 ಜನ ಮಳೆಯಿಂದಾಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ರಾಜ್ಯದ 20ಕ್ಕೂ ಹೆಚ್ಚು ಹೆದ್ದಾರಿಗಳು ಜಲಾವೃತವಾಗಿವೆ. ರೈಲ್ವೆ ಟ್ರ್ಯಾಕ್‍ಗಳಲ್ಲಿ ಕೂಡ ನೀರು ನಿಂತ ಕಾರಣ ರಾಜಧಾನಿ ಎಕ್ಸ್‍ಪ್ರೆಸ್ ಮೆಹ್ಸಾನಾದಿಂದ ಅಹಮದಾಬಾದ್‍ಗೆ ವಾಪಸ್ಸಾಗಬೇಕಾಯಿತು.

ರಾಜಸ್ಥಾನ ಗಡಿಗೆ ಹೊಂದಿಕೊಂಡಿರುವ ಬನಸ್‍ ಕಾಂತಾ, ಮಳೆಯಿಂದ ಗುಜರಾತ್‍ನಲ್ಲೇ ಅತ್ಯಂತ ಹೆಚ್ಚು ಹಾನಿಗೊಳಗಾದ ಜಿಲ್ಲೆಯಾಗಿದೆ. ಇಲ್ಲಿಂದ 10,300 ಜನರನ್ನ ರಕ್ಷಣಾ ಪಡೆ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸುತ್ತಿದೆ. ತಾತ್ಕಾಲಿಕ ಶಿಬಿರಗಳಲ್ಲಿ ಸಂತ್ರಸ್ತರಿಗೆ ಊಟದ ಪ್ಯಾಕೆಟ್‍ಗಳನ್ನ ನೀಡಲಾಗ್ತಿದೆ.

ಮರಳುಗಾಡಾದ ರಾಜಸ್ಥಾನದ ಮೂರು ಜಿಲ್ಲೆಗಳಲ್ಲೂ ಕೂಡ ಶೀತ ಹವಾಮಾನದಿಂದ ದುಷ್ಪರಿಣಾಮ ಉಂಟಾಗಿದೆ. ಉದಯ್‍ಪುರ್‍ನಲ್ಲಿ ತಾಯಿ ಮಗಳು ಸಾವನ್ನಪ್ಪಿದ್ದಾರೆ. ವಾಯುಪಡೆ ಹಾಗೂ ಸೇನಾ ಪಡೆಗಳು ಪ್ರವಾಹ ಪರಿಹಾರ ಕಾರ್ಯಕ್ಕಾಗಿ ಗುಜರಾತ್ ಹಾಗೂ ರಾಜಸ್ಥಾನಕ್ಕೆ ಧಾವಿಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *