ಕ್ಯಾಂಟರ್, ಸ್ವಿಫ್ಟ್ ಡಿಕ್ಕಿ- ದೇವರ ದರ್ಶನ ಮುಗಿಸಿ ವಾಪಸ್ಸಾಗ್ತಿದ್ದ ಐವರು ಜೀವದ ಗೆಳೆಯರ ದುರ್ಮರಣ

Public TV
1 Min Read

ರಾಮನಗರ: ಅವರೆಲ್ಲಾ ಜೀವದ ಗೆಳೆಯರು. ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಅನ್ಯೋನ್ಯವಾಗಿದ್ರು. ಆದ್ರೆ ಈಗ ಅವರೆಲ್ಲಾ ಬಾರದ ಲೋಕಕ್ಕೆ ತೆರಳಿದ್ದಾರೆ. ಕ್ಯಾಂಟರ್ ಹಾಗೂ ಕಾರ್ ನಡುವಿನ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಐವರು ಗೆಳೆಯರೂ ಸಹ ಸಾವನ್ನಪ್ಪಿದ್ದಾರೆ.

ನಜ್ಜುಗುಜ್ಜಾಗಿ ಹೋಗಿರುವ ಕಾರು. ಜಖಂ ಆಗಿ ಉರುಳಿಬಿದ್ದಿರುವ ಕ್ಯಾಂಟರ್. ಕಾರಿನಲ್ಲಿ ಸಿಕ್ಕು ಸಾವನ್ನಪ್ಪಿರುವ ಯುವಕರ ಮೃತ ದೇಹಗಳನ್ನು ಹೊರತೆಗೆಯಲು ಹರಸಾಹಸ ಪಡುತ್ತಿರುವ ಪೊಲೀಸರು. ಇಂತಹದೊಂದು ದೃಶ್ಯ ಕಂಡುಬಂದಿದ್ದು ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ 209ರಲ್ಲಿ.

ಹೆದ್ದಾರಿಯ ಕನಕಪುರ ತಾಲೂಕಿನ ತೊಪ್ಪಗಾನಹಳ್ಳಿ ಗ್ರಾಮದ ಸಮೀಪ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಐವರು ಯುವಕರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಬೆಂಗಳೂರಿನಿಂದ ಬರ್ತಿದ್ದ ಕ್ಯಾಂಟರ್ ಹಾಗೂ ಕನಕಪುರ ಮಾರ್ಗದಿಂದ ಹೊರಟಿದ್ದ ಸ್ವಿಫ್ಟ್ ಕಾರಿನ ನಡುವೆ ಅಪಘಾತ ನಡೆದಿದೆ. ಬೆಂಗಳೂರಿನ ವಿದ್ಯಾರಣ್ಯಪುರದ ರಾಜು, ಗುಂಜೂರಿನ ಚಂದ್ರು, ಎಚ್‍ಎಸ್‍ಆರ್ ಲೇಔಟ್‍ನ ಅನಿಲ್ ಕುಮಾರ್, ಸಂತೋಷ್ ಹಾಗೂ ಮತ್ತೋರ್ವ ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿಗಳು. ಈ ಹೆದ್ದಾರಿಯಲ್ಲಿನ ತಿರುವುಗಳೇ ಈ ಘಟನೆಗಳೇ ಮುಖ್ಯ ಕಾರಣವಾಗಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ.

ಮೃತರೆಲ್ಲಾ ಬೆಂಗಳೂರಿನ ನಿವಾಸಿಗಳಾಗಿದ್ದು ಐವರೂ ಸಹ ಆತ್ಮೀಯರಾಗಿದ್ರು. ಬೆಂಗಳೂರಿನ ವಿವಿಧ ಏರಿಯಾಗಳಲ್ಲಿ ಫೈನಾನ್ಸ್ ಕಲೆಕ್ಷನ್ ಮಾಡುವ ಕೆಲಸ ಮಾಡ್ತಾ ಇದ್ರು. ಸಂತೋಷ್ ಡ್ಯಾನ್ಸರ್ ಆಗಿ ಡ್ಯಾನ್ಸಿಂಗ್ ಸ್ಕೂಲ್ ನಡೆಸ್ತಾ ಇದ್ದರು. ಮಂಗಳವಾರ ಕನಕಪುರ ತಾಲೂಕಿನ ಕಬ್ಬಾಳು ದೇವಾಲಯಕ್ಕೆ ಐವರೂ ಹೋಗಿದ್ದರು. ದೇವಸ್ಥಾನದಲ್ಲಿ ಪೂಜಾ ಕಾರ್ಯ ಮುಗಿಸಿದ ಬಳಿಕ ಮೋಜು ಮಸ್ತಿ ಮುಗಿಸಿಕೊಂಡು ವಾಪ್ಪಾಸ್ಸು ಬೆಂಗಳೂರಿಗೆ ತೆರಳ್ತಾ ಇದ್ರೂ. ಈ ವೇಳೆ ಅತೀವೇಗದಲ್ಲಿದ್ದ ಕಾರು ಹಾಗೂ ಕ್ಯಾಂಟರ್ ಎರಡೂ ಸಹ ಮುಖಾಮುಖಿ ಡಿಕ್ಕಿಯಾಗಿವೆ. ಘಟನೆಯಲ್ಲಿ ಕ್ಯಾಂಟರ್ ಚಾಲಕನ ಕಾಲು ಮುರಿದಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯಲ್ಲಿ ಐವರ ಮೃತ ದೇಹಗಳೂ ಕೂಡಾ ಕಾರಿನಲ್ಲಿ ಕಚ್ಚಿಕೊಂಡಿದ್ವು. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹರಸಾಹಸ ಮಾಡಿ ಮೃತದೇಹಗಳನ್ನು ಹೊರತೆಗೆದಿದ್ದಾರೆ.

ಈ ಬಗ್ಗೆ ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *