ಮುಂಬೈ ಕುಟುಂಬದ ಸಾವಿಗೆ ಕಲ್ಲಂಗಡಿ ಕಾರಣವಲ್ಲ – ಮೃತರ ದೇಹದಲ್ಲಿ ಮಾರ್ಫಿನ್ ಅಂಶ ಪತ್ತೆ

2 Min Read

-ಕಲ್ಲಂಗಡಿಗೆ ಕೃತಕ ಬಣ್ಣ, ಸಿಹಿ ಜಾಸ್ತಿ ಮಾಡಲು ಕೆಮಿಕಲ್ ಬಳಸಿರಲಿಲ್ಲ

ಮುಂಬೈ: ಇತ್ತೀಚಿಗೆ ಕಲ್ಲಂಗಡಿ ತಿಂದು ಕುಟುಂಬದ ನಾಲ್ವರು ಸಾವನ್ನಪ್ಪಿದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ನಾಲ್ವರ ಸಾವಿಗೆ ಕಲ್ಲಂಗಡಿ ಕಾರಣವಲ್ಲ, ಬದಲಾಗಿ ಮೃತರ ದೇಹದಲ್ಲಿ ಮಾರ್ಫಿನ್ ಅಂಶ ಪತ್ತೆಯಾಗಿದೆ ಎಂದು ವರದಿ ಬಹಿರಂಗಪಡಿಸಿದೆ.

ಕಳೆದ ವಾರ ಮುಂಬೈನಲ್ಲಿ (Mumbai) ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದರು. ಊಟ ಮಾಡಿದ ಬಳಿಕ ಕಲ್ಲಂಗಡಿ ತಿಂದಿದ್ದೇ ಅವರ ಸಾವಿಗೆ ಕಾರಣ ಎನ್ನಲಾಗಿತ್ತು. ಆದರೆ ವಿಧಿವಿಜ್ಞಾನ ಪರೀಕ್ಷೆ ವೇಳೆ ಕಲ್ಲಂಗಡಿಗೆ ಕೃತಕ ಬಣ್ಣ ಹಾಗೂ ಸಿಹಿ ಜಾಸ್ತಿ ಮಾಡಲು ಯಾವುದೇ ಕೆಮಿಕಲ್ ಬಳಕೆ ಮಾಡಿರಲಿಲ್ಲ. ಜೊತೆಗೆ ಮೃತರ ಮೆದುಳು, ಹೃದಯ ಹಾಗೂ ಕರುಳು ಸೇರಿದಂತೆ ಕೆಲ ಅಂಗಾಂಗಗಳು ಹಸಿರು ಬಣ್ಣಕ್ಕೆ ಬದಲಾಗಿರೋದು ಪತ್ತೆಯಾಗಿದೆ. ಇದನ್ನೂ ಓದಿ: ಬಿರಿಯಾನಿ, ಕಲ್ಲಂಗಡಿ ತಿಂದ ಒಂದೇ ಕುಟುಂಬದ ನಾಲ್ವರು ಸಾವು

ಸದ್ಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವ ಪೊಲೀಸರು ಹಿಂದೆ ನೀಡಿದ ಚಿಕಿತ್ಸೆ, ಆಕಸ್ಮಿಕವಾಗಿ ಆಗಿದೆಯಾ? ಅಥವಾ ಅನುಮಾನಾಸ್ಪದವಾಗಿ ಏನಾದರೂ ನಡೆದಿದ್ಯಾ ಎಂದು ಪರಿಶೀಲಿಸುತ್ತಿದ್ದಾರೆ.

ರಾಜ್ಯ ಆಹಾರ ಮತ್ತು ಔಷಧ ಮಂಡಳಿ ಪ್ರಕಾರ, ಕಲ್ಲಂಗಡಿ ತಿಂದಿದ್ದೇ ಸಾವಿಗೆ ಕಾರಣವೆಂದು ಈವರೆಗೂ ಸಾಬೀತಾಗಿಲ್ಲ. ಸಾಬೀತಾರದ ಬಳಿಕವೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಇನ್ನೂ ಈ ಸಂಬಂಧ ವರದಿ ಬರಬೇಕಿದೆ ಎಂದು ಹೇಳಿದೆ.

ಆಗಿದ್ದೇನು?
ಮುಂಬೈನ ಪೈಧೋನಿ ಪ್ರದೇಶದಲ್ಲಿ ಏ.25 ರಾತ್ರಿ ಸುಮಾರು 10:30ಕ್ಕೆ ಸಂಬಂಧಿಗಳು ಸೇರಿದಂತೆ ಒಟ್ಟು ಒಂಬತ್ತು ಕುಟುಂಬದ ಸದಸ್ಯರು ಒಟ್ಟಿಗೆ ಊಟ ಮಾಡಿದ್ದರು. ನಂತರ ಸಂಬಂಧಿಕರು ತಮ್ಮ ಮನೆಗಳಿಗೆ ಮರಳಿದ್ದರು. ನಡುರಾತ್ರಿ 1:00 ರಿಂದ 1:30ರ ನಡುವೆ, ನಾಲ್ವರು ಕುಟುಂಬದ ಸದಸ್ಯರು ಕಲ್ಲಂಗಡಿ ಹಣ್ಣು ಸೇವಿಸಿದ್ದರು ಎನ್ನಲಾಗಿದೆ.

ಏ.26ರಂದು ಮುಂಜಾನೆ ಸುಮಾರು 5:30 ರಿಂದ 6:00ರ ಸಮಯದಲ್ಲಿ ನಾಲ್ವರಿಗೆ ವಾಂತಿ ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿದೆ. ಅವರಿಗೆ ಆರಂಭದಲ್ಲಿ ಕುಟುಂಬದ ವೈದ್ಯರು ಚಿಕಿತ್ಸೆ ನೀಡಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಅಬ್ದುಲ್ಲಾ ದೋಕಾಡಿಯಾ (40), ನಸ್ರೀನ್ ದೋಕಾಡಿಯಾ (35) ಮತ್ತು ಅವರ ಹೆಣ್ಣುಮಕ್ಕಳಾದ ಆಯಿಷಾ (16) ಮತ್ತು ಜೈನಾಬ್ (13) ಸಾವನ್ನಪ್ಪಿದ್ದರು.ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಮತ್ತೆ ಟಿಎಂಸಿ – ಬಿಜೆಪಿ ನಡುವೆ ಘರ್ಷಣೆ

Share This Article