ಮಲೆನಾಡಲ್ಲಿ ಕೆರೆಬೇಟೆ ಸೀಸನ್‌ – ಈ ಜನಪದ ಸಂಭ್ರಮ ಹೇಗಿರುತ್ತೆ ಗೊತ್ತಾ?

3 Min Read

ಸಲ ಕೆರೆಲಿ ಮಸ್ತ್‌ ಮೀನು..! ಕೆರೆಬೇಟೆ (Kerebete) ಆದ್ರೆ ಊರಿಗೆ ಊರೇ ಹಬ್ಬ! ಮೊನ್ನೆ ಚಿಪ್ಳಿಯಲ್ಲಿ ಕೆರೆಬೇಟೆ ಆಯ್ತಂತೆ, ನಮ್ಮ ಭಾವ ಹೋಗಿದ್ದ ಭಾರೀ ಜನ ಸೇರಿದ್ರಂತೆ. ನಮ್‌ ಊರಲ್ಲೂ ಆದ್ರೇ ಅದಕ್ಕಿಂತ ಜಾಸ್ತಿ ಜನ ಜಾಸ್ತಿ ಮೀನು ಸಿಗ್ತಾವೆ. ಮಲೆನಾಡಲ್ಲಿ (Malenadu) ಈ ಮಾರ್ಚ್‌ ತಿಂಗಳಿಂದ ಮೇ ಕೊನೆವರೆಗೂ ಎಲ್ಲೇ ಹೋದ್ರೂ ಈ ಥರದ ಮಾತುಗಳು ಕೇಳಿಬರುತ್ತವೆ. ಹಾಗಾದ್ರೆ ಈ ಕೆರೆ ಬೇಟೆ ಅಂದ್ರೆನು? ಈ ಆಚರಣೆ ಹೇಗಿರುತ್ತೆ ಅನ್ನೋದರ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಕೆರೆಬೇಟೆ ಎಂದರೇನು?
ಕೆರೆಯ ನೀರಿನ ಸ್ವಚ್ಛತೆ ಕಾಪಾಡಿಕೊಳ್ಳುವ ಹಾಗೂ ಕೆರೆಯಲ್ಲಿ ಸಿಗುವ ಸಿಹಿ ನೀರಿನ ಮೀನುಗಳನ್ನು ಹಂಚಿ ತಿನ್ನುವ ಉದ್ದೇಶದಿಂದ ಅನಾದಿಕಾಲದಲ್ಲಿ ಹುಟ್ಟಿಕೊಂಡ ಕೆರೆಬೇಟೆ ಹಬ್ಬ ಇಂದಿಗೂ ಅನೇಕ ಹಳ್ಳಿಗಳಲ್ಲಿ ಆಚರಣೆಯಲ್ಲಿದೆ.

ಶಿವಮೊಗ್ಗ (Shivamogga) ಜಿಲ್ಲೆಯ ಸಾಗರ, ಸೊರಬ (Soraba) ಹಾಗೂ ಉತ್ತರ ಕನ್ನಡದ (Uttara Kannada) ಸಿದ್ಧಾಪುರ ತಾಲೂಕಿನ ಸುತ್ತಮುತ್ತ ಜನಪದ ಕ್ರೀಡೆ ಕೆರೆಬೇಟೆ ಆರಂಭಗೊಂಡಿದೆ. ಮಳೆಗಾಲದಲ್ಲಿ ಗ್ರಾಮಸ್ಥರು ವಿವಿಧ ಜಾತಿಯ ಲಕ್ಷಾಂತರ ಮೀನಿನ ಮರಿಗಳನ್ನು ಬಿಡುತ್ತಾರೆ. ಬೇಸಿಗೆಯಲ್ಲಿ ತಮ್ಮ ಕೃಷಿ ಕೆಲಸ ಮುಗಿದು ಖಾಲಿ ಇರುವಾಗ ಕೆರೆ ನೀರು ಬತ್ತಿದ್ದನ್ನು ನೋಡಿ ಮೀನುಗಳನ್ನು ಹಿಡಿಯುತ್ತಾರೆ. ಈ ಕೆರೆಬೇಟೆಗೆ ಅದೇ ಗ್ರಾಮದ ಜನ ಮಾತ್ರವಲ್ಲದೇ ಅಕ್ಕಪಕ್ಕದ ಗ್ರಾಮಸ್ಥರು ಸೇರುತ್ತಾರೆ. ಸುಮಾರು 500 – 600 ಜನಗಳ ತನಕ ಕೆರೆಯಲ್ಲಿ ಸೇರುತ್ತಾರೆ.

ಕೆರೆಬೇಟೆಯನ್ನು ವರ್ಷಕ್ಕೆ ಒಂದು ದಿನ ಮಾತ್ರ ನಡೆಯುತ್ತದೆ. ಕೆಲವು ಭಾಗಗಳಲ್ಲಿ 2-3 ವರ್ಷ್ಕಕ್ಕೊಮ್ಮೆ ನಡೆಸಲಾಗುತ್ತದೆ. ಇಲ್ಲಿ ಜಾತಿ ಧರ್ಮ, ಲಿಂಗ ಭೇದವಿಲ್ಲದೆ ಜನ ಈ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಾರೆ.

ಕೆರೆಬೇಟೆಗೂ ಮುನ್ನ ದೇವರಿಗೊಂದು ಪೂಜೆ
ಈ ಸಮಯದಲ್ಲಿ ಮೀನುಗಳು ರೈತರಿಗೆ ಸಿಗುತ್ತೋ ಇಲ್ವೋ ಆದ್ರೆ ಸಂಭ್ರಮಕ್ಕೆ ಮಾತ್ರ ಯಾವುದೇ ಕೊರೆತೆ ಇಲ್ಲ. ಕೆರೆಬೇಟೆಗೂ ಮುನ್ನ ನಮ್ಮ ಮಲೆನಾಡಿನ ಪ್ರಕೃತಿಯ ಆರಾಧಕರು, ಕೆರೆ ಏರಿಯ ಮೇಲಿರುವ ಅವರ ಆರಾಧ್ಯ ದೇವರಾದ ಕೆರೆ ಚೌಡಿ, ಭೂತ ಇನ್ನಿತರ ದೇವರಿಗೆ ಪೂಜೆ ಸಲ್ಲಿಸಿ ಆರಂಭಿಸುತ್ತಾರೆ. ಕೆರೆಗೆ ಇಳಿದಾಗ ಯಾವುದೇ ಅನಾಹುತಗಳು ಸಂಭವಿಸದಂತೆ ದೇವರು ಕಾಪಾಡಲಿ ಎಂಬುದು ಈ ಪೂಜೆಯ ಮೂಲ ಉದ್ದೇಶ.

ಸೊರಬದಲ್ಲಿ ಏಷ್ಯಾದಲ್ಲೇ ಅತಿಹೆಚ್ಚು ಕೆರೆಗಳು
ಸೊರಬ ತಾಲೂಕು ಏಷ್ಯಾದಲ್ಲೇ ಅತಿಹೆಚ್ಚು ಕೆರೆಗಳನ್ನು ಹೊಂದಿದೆ. 1186 ಕೆರೆಗಳು ಇಲ್ಲಿವೆ. ಪ್ರತಿ ಗ್ರಾಮದಲ್ಲೂ ಸುಮಾರು 4-7 ಕೆರೆಗಳಿವೆ. ಕೆರೆಗಳು ಜನರ ಬದುಕು ಹಾಗೂ ಸಂಸ್ಕೃತಿಯ ಭಾಗವಾಗಿವೆ. ಕೆರೆಬೇಟೆ ಸಂಸ್ಕೃತಿಯಿಂದ ಗ್ರಾಮೀಣ ಜನರು ಕೆರೆಗಳನ್ನು ಸಂರಕ್ಷಿಸಿಕೊಳ್ಳುವುದಕ್ಕೂ ಅನುಕೂಲವಾಗುತ್ತಿದೆ. ಇನ್ನೂ ಬೇಸಿಗೆಯಲ್ಲಿ ಕೆರೆಯ ಮಣ್ಣು ಚರ್ಮಕ್ಕೆ ಒಳ್ಳೆಯದು, ಈ ಕೆಸರಲ್ಲಿ ಮಿಂದೆದ್ದರೆ ಅನೇಕ ಪ್ರಯೋಜನಗಳಿವೆ ಎಂಬ ನಂಬಿಕೆಗಳು ಸಹ ಇವೆ.

ನಿಗದಿತ ಶುಲ್ಕ
ಕೆರೆಬೇಟೆಗೆ ಕಡಿಮೆ ಪ್ರಮಾಣದ ನಿಗದಿತ ಶುಲ್ಕವನ್ನು ವಿಧಿಸಲಾಗುತ್ತದೆ. ಪ್ರತಿ ಕೂಣಿಗೆ (ಬಿದಿರು ಅಥವಾ ಕಬ್ಬಣದಿಂದ ಮಾಡಿದ ಮೀನು ಹಿಡಿಯುವ ಸಾಧನ) ನಿಗದಿಪಡಿಸಿದಷ್ಟು ಹಣಕೊಟ್ಟು ಕೆರೆಗೆ ಇಳಿಯಬೇಕು ಎಂಬ ಅಲಿಖಿತ ನಿಯಮವಿದೆ ಎನ್ನುತ್ತಾರೆ ಹಿರಿಯರು. ಈ ರೀತಿ ಸಂಗ್ರಹಿಸಲಾದ ಶುಲ್ಕದ ಹಣವನ್ನು ಗ್ರಾಮಸ್ಥರು, ಗ್ರಾಮದ ಅಭಿವೃದ್ಧಿ ಅಥವ ದೇವಸ್ಥಾನದ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳುತ್ತಾರೆ. ಇನ್ನೂ ಕೆರೆ ಬೇಡೆಗೆ ಕೂಣಿಗೆ ಮಾತ್ರ ಅವಕಾಶ ಇದ್ದು, ಬಲೆಗಳನ್ನು ನಿಷೇಧಿಸಲಾಗಿದೆ. ಅಲ್ಲದೇ ಯಾವುದೇ ತಂಟೆ ತಕರಾರಿಗೆ ಇಲ್ಲಿ ಅವಕಾಶ ಇರುವುದಿಲ್ಲ.

ನಾನಾ ಜಾತಿಯ ಮೀನುಗಳು
ಕೂಣಿ ಎಂಬ ಬಿದಿರಿನ ಪಂಜರದಲ್ಲಿ ಕುಚ್ಚುಮೀನು, ಚೇಳುಮೀನು, ಹಾವುಮೀನು, ಮುರಗೋಡುಮೀನು ಹೀಗೆ ಆರೆಂಟು ಜಾತಿಯ ಮೀನು, ಕೂರ್ಮ ಸುಲಭವಾಗಿ ಸುಗುತ್ತವೆ. ಚೇಳುಮೀನು ತಿನ್ನಲು ಬಲುರುಚಿ. ಆದರೆ ಈ ಮೀನನ್ನು ಹಿಡಿಯಲು ಪರಿಣತಿಯುಳ್ಳವರು ಬೇಕು. ಚೇಳುಮೀನು ಕಚ್ಚಿದಾಗ ಜೀವಕ್ಕೆ ಅಪಾಯವಾದ ಸಂದರ್ಭಗಳೂ ಇವೆ. ಕೆಲವೊಮ್ಮೆ ನೀರಿನಲ್ಲಿರುವ ಹಾವುಗಳು ಕಚ್ಚುವ ಸಾಧ್ಯತೆಯೂ ಇರುತ್ತದೆ.

ಕೆರೆಬೇಟೆಯಲ್ಲಿ ಸೌಹಾರ್ದತೆ
ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಕಲಕರಡಿ ಗ್ರಾಮದ ಸಿದ್ದೇಶ್ವರ ದೇವಸ್ಥಾನದ ಅಭಿವೃದ್ಧಿಗೆ ದೇಣಿಗೆ ಸಂಗ್ರಹಿಸಲು ನಡೆಯುವ ಕೆರೆಬೇಟೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಮುಸ್ಲಿಂ ಕುಟುಂಬದವರು ಕೂಡ ಪಾಲ್ಗೊಳ್ಳುತ್ತಾರೆ. ಅವರೆಲ್ಲ ದೇವಸ್ಥಾನಕ್ಕೆ ದೇಣಿಗೆ ನೀಡಿಯೇ ಕೂಣಿ ಪಡೆದುಕೊಳ್ಳುತ್ತಾರೆ. ಈ ಕಲಕರಡಿ ಕೆರೆಬೇಟೆಯಲ್ಲಿ ಸೌಹಾರ್ದತೆಯನ್ನೂ ಕಾಣಬಹುದಾಗಿದೆ.

Share This Article