ಬೆಂಗಳೂರು: ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ (Mohammed Haris Nalapad) ಮನೆ ಸೇರಿದಂತೆ 17 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ED) ಇಂದು (ಏ.20) ದಾಳಿ ನಡೆಸಿದ್ದಾರೆ. ಇದೀಗ ಇಡಿ ದಾಳಿಯ ಹಿಂದೆ 10 ಲಕ್ಷ ರೂ. ವಹಿವಾಟೊಂದರ ಶಂಕೆ ವ್ಯಕ್ತವಾಗಿದೆ.
ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ. ಹ್ಯಾಕರ್ ಶ್ರೀಕಿ ಜೊತೆಯಲ್ಲಿ ಆರ್ಥಿಕ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಇಡಿ ದಾಳಿ ಮಾಡಿದೆ. ಶ್ರೀಕಿ ಜೊತೆ ನಲಪಾಡ್ ಆರ್ಥಿಕ ವ್ಯವಹಾರ ಇಟ್ಟುಕೊಂಡಿದ್ದರು. 2020 ರಲ್ಲಿ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಮೇಲೆ ಎಫ್ಐಆರ್ ದಾಖಲಾಗಿತ್ತು. ಈ ಪ್ರಕರಣದ ತನಿಖೆಗೆ ಸರ್ಕಾರ ಎಸ್ಐಟಿ ರಚನೆ ಮಾಡಿತ್ತು. ಇದನ್ನೂ ಓದಿ: ಕಾಂಗ್ರೆಸ್ ಶಾಸಕ ಹ್ಯಾರಿಸ್ ಮನೆ ಮೇಲೆ ಇಡಿ ದಾಳಿ
28 ಲಕ್ಷ ರೂ. ಬಿಟ್ ಕಾಯಿನ್ನಲ್ಲಿ ಹೂಡಿಕೆ ಮಾಡಿದ್ರೆ 45 ಲಕ್ಷ ರೂ. ಲಾಭ ಬರೋದಾಗಿ ಯಶೋಧಾ ದೇವಿ ಎಂಬವರಿಗೆ ಶ್ರೀಕಿ ಸೇರಿದಂತೆ ಹಲವರು ನಂಬಿಸಿದ್ದರು. ಆ ಮಾತು ನಂಬಿ ಮಹಿಳೆ ಅಜೀತ್ ಎಂಬವನ ಖಾತೆಗೆ 28 ಲಕ್ಷ ರೂ. ಹಣ ಹಾಕಿದ್ದರು. ಬಳಿಕ ಲಾಭವಾಗಲಿ ಅಸಲಾಗಲಿ ನೀಡದೇ ವಂಚಿಸಿದ್ದಾರೆ ಎಂದು ಆರೋಪಿಸಿ ಅಶೋಕನಗರ ಠಾಣೆಯಲ್ಲಿ ಶ್ರೀಕಿ, ರಾಬಿನ್ ಖಂಡೇಲ್ವಾಲ ಮತ್ತು ಅಜೀತ್ ಖಂಡೇಲ್ವಾಲ ವಿರುದ್ಧ ಮಹಿಳೆ ದೂರು ನೀಡಿದ್ದರು.
ಈ ಪ್ರಕರಣದ ತನಿಖೆ ವೇಳೆ ನಲಪಾಡ್ ಹೆಸರು ಪತ್ತೆಯಾಗಿತ್ತು. ಹೆಚ್ಚಿನ ತನಿಖೆ ನಡೆಸಿದಾಗ ವ್ಯವಸ್ಥಿತವಾಗಿ ಬಿಟ್ ಕಾಯಿನ್ ಹ್ಯಾಕಿಂಗ್ ಮಾಡುವ ಜಾಲ ಪತ್ತೆಯಾಗಿತ್ತು. ಇದೇ ಕಾರಣಕ್ಕೆ ತನಿಖೆಯನ್ನು ಎಸ್ಐಟಿಗೆ ವಹಿಸಲಾಗಿತ್ತು. ಇನ್ನೂ ಶ್ರೀಕೃಷ್ಣ ನಲಪಾಡ್ ಸಹೋದರ ಓಮರ್ ನಲಪಾಡ್ ಅವರ ಕ್ಲಾಸ್ಮೇಟ್ ಆಗಿದ್ದ. ಇದೇ ಕಾರಣಕ್ಕೆ ನಲಪಾಡ್ ಅವರಿಗೂ ಶ್ರೀಕಿ ಹತ್ತಿರವಾಗಿದ್ದ.
ಬಿಟ್ ಕಾಯಿನ್ ಹ್ಯಾಕ್ ಮಾಡಿ ಬಾಂಬೆ ಮೂಲದ ವ್ಯಕ್ತಿಗೆ ಶ್ರೀಕಿ ಕಳುಹಿಸಿದ್ದ. ಬಾಂಬೆ ಮೂಲದ ವ್ಯಕ್ತಿಯಿಂದ 10 ಲಕ್ಷ ರೂ. ನಲಪಾಡ್ ಅಕೌಂಟ್ಗೆ ವರ್ಗಾವಣೆಯಾಗಿತ್ತು. ಹಣ ವರ್ಗಾವಣೆ ಕುರಿತು ತನಿಖೆ ವೇಳೆ ಹಣ ವಾಪಸ್ ನೀಡೋದಾಗಿ ನಲಪಾಡ್ ಹೇಳಿದ್ದರು. ಇದುವರೆಗೂ ಅವರು ಹಣ ವಾಪಸ್ ನೀಡಿಲ್ಲ. ಇಷ್ಟಾದರೂ ಇನ್ನೂ ಚಾರ್ಜ್ಶೀಟ್ನ್ನು ಎಸ್ಐಟಿ ಸಲ್ಲಿಸಿಲ್ಲ. ಅಲ್ಲದೇ ನಲಪಾಡ್ ಖಾತೆಗೆ ಹಣ ವರ್ಗಾವಣೆ ಆಗಿದ್ರೂ ಸಹ ಆರೋಪಿಯನ್ನಾಗಿ ಎಸ್ಐಟಿ ಮಾಡಿಲ್ಲ. ಇದೇ ವಿಚಾರವಾಗಿ ಇಡಿ ಕೇಸ್ ದಾಖಲಿಸಿಕೊಂಡಿತ್ತು. ತನಿಖೆಯ ಭಾಗವಾಗಿ ಈಗ ದಾಳಿಯಾಗಿದೆ. ಇದನ್ನೂ ಓದಿ: ಮಂಗಳೂರು ಕಮಿಷನರ್ ವಿರುದ್ಧ ಡಿಜಿಪಿಗೆ ದೂರು ನೀಡಿದ ಎಸ್ಪಿ ಕಾಶಿ

