ಬಾಂಗ್ಲಾದಲ್ಲಿ ದಡಾರ ರೋಗಕ್ಕೆ 100ಕ್ಕೂ ಅಧಿಕ ಮಂದಿ ಬಲಿ – ಭಾರತಕ್ಕೂ ಹರಡುತ್ತಾ? ರಕ್ಷಣೆ ಹೇಗೆ?

5 Min Read

ಬೇಸಿಗೆಯಲ್ಲಿ ದೊಡ್ಡವರು ಸೇರಿದಂತೆ ಮಕ್ಕಳು ಒಂದಲ್ಲ ಒಂದು ರೀತಿಯಲ್ಲಿ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಇದರಲ್ಲಿ ದಡಾರ ಕೂಡ ಒಂದು. ಗ್ರಾಮೀಣ ಭಾಗದಲ್ಲಿ ‘ ಅಮ್ಮ’ ಎಂದು ಕರೆಯಲಾಗುವ ಇದನ್ನು ಇಂಗ್ಲಿಷ್‍ನಲ್ಲಿ ಮೀಸೆಲ್ಸ್ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಇದು ಚಿಕ್ಕಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಬಾಂಗ್ಲಾದೇಶದಲ್ಲಿ ಈ ದಡಾರಾ ರೋಗ ವ್ಯಾಪಕವಾಗಿ ಹಬ್ಬಿದ್ದು, 100ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಹಾಗಿದ್ರೆ ಏನಿದು ದಡಾರ ರೋಗ? ಈ ರೋಗ ಭಾರತಕ್ಕೂ ಹರಡುತ್ತಾ? ಲಕ್ಷಣಗಳೇನು? ದಡಾರದಿಂದ ರಕ್ಷಣೆ ಹೇಗೆ ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.

ಬಾಂಗ್ಲಾದಲ್ಲಿ 100ಕ್ಕೂ ಹೆಚ್ಚು ಮಂದಿ ಬಲಿ:
ದಡಾರ ಕಾಯಿಲೆಯಿಂದ ನೆರೆಯ ದೇಶ ಬಾಂಗ್ಲಾದೇಶದಲ್ಲಿ ಕಳೆದ ಮೂರು ವಾರಗಳಲ್ಲಿ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಅನೇಕರಲ್ಲಿ ಸೋಂಕು ದೃಢಪಟ್ಟಿದೆ ಎಂದು ವರದಿಯಾಗಿದೆ. ದಡಾರ ಕಾಯಿಲೆ ಅಪಾಯಕಾರಿ ರೀತಿಯಲ್ಲಿ ಮತ್ತೆ ಮರುಕಳುಹಿಸುತ್ತಿದ್ದು, ಮಕ್ಕಳ ಮೇಲೆ ತೀವ್ರ‌ ಪರಿಣಾಮ ಬೀರುತ್ತಿದೆ. ಈ ವರ್ಷದ ಆರಂಭದಿಂದಲೂ 255 ಮಕ್ಕಳು ದಡಾರ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವರದಿಗಳ ಪ್ರಕಾರ ಬಾಂಗ್ಲಾದಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆ ಉಂಟಾಗಿದೆ. ವೈದ್ಯಕೀಯ ಸಿಬ್ಬಂದಿ ಪರಿಸ್ಥಿತಿಯನ್ನು ನಿಭಾಯಿಸಲು ಮಕ್ಕಳಿಗೆ ನೆಲದ ಮೇಲೆ ಚಿಕಿತ್ಸೆ ನೀಡುವ ಪರಿಸ್ಥಿತಿ ಎದುರಾಗಿದೆ ಎಂದು ವರದಿಗಳು ತಿಳಿಸಿವೆ. ಬಾಂಗ್ಲಾದೇಶದ 64 ಆಡಳಿತ ಪ್ರದೇಶಗಳ ಪೈಕಿ 56 ಜಿಲ್ಲೆಗಳಲ್ಲಿ ದಡಾರ ಕಾಣಿಸಿಕೊಂಡಿದೆ. ಸದ್ಯ ಬಾಂಗ್ಲಾದಲ್ಲಿ ದಡಾರ ರೋಗಕ್ಕೆ ಲಸಿಕೆ ನೀಡುವ ಕಾರ್ಯ ನಡೆಯುತ್ತಿದೆ.

ಏನಿದು ದಡಾರ?
ರುಬಿಯೋಲಾ ಎಂದೂ ಕರೆಯಲ್ಪಡುವ ದಡಾರವು ಮೊದಲು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಸಿಲ್ಲಾ ಎಂಬ ವೈರಸ್ ನಿಂದ ಬರುವ ರೋಗ ಇದಾಗಿದ್ದು, ಒಬ್ಬರಿಂದ ಒಬ್ಬರಿಗೆ ಬಹಳ ಬೇಗ ಹರಡುತ್ತದೆ. ಶಾಲೆಗೆ ಹೋಗುವ ಮಕ್ಕಳಲ್ಲಿ ದಡಾರ ಕಾಣಿಸಿಕೊಂಡಲ್ಲಿ, ಮಗು ಗುಣಮುಖವಾಗುವವರೆಗೂ ಶಾಲೆಗೆ ಕಳುಹಿಸದೇ ಇರುವುದು ಒಳಿತು. ದಡಾರ ಇರುವ ಮಗುವನ್ನು ಶಾಲೆಗೆ ಕಳುಹಿಸಿದಲ್ಲಿ ಇತರ ಮಗುವಿಗೂ ರೋಗ ಹರಡುವ ಸಾಧ್ಯತೆ ಹೆಚ್ಚು.

ಒಂದು ಕಾಲದಲ್ಲಿ ದಡಾರವು ಬಾಲ್ಯದಲ್ಲಿ ಕಂಡುಬರುವ ಸಾಮಾನ್ಯ ಕಾಯಿಲೆಯಾಗಿತ್ತು. ಇದಕ್ಕೆ ವ್ಯಾಕ್ಸಿನ್ ಬಂದ ಬಳಿಕ ಇದರ ಹರಡುವಿಕೆ ಕಡಿಮೆಯಾಗುತ್ತಾ ಬಂದಿದೆ. ಸದ್ಯ ಮಕ್ಕಳಿಗೆ ದಡಾರದ ಚುಚ್ಚುಮದ್ದು ಕೊಡಿಸುವ ಮೂಲಕ ಈ ರೋಗ ನಿಯಂತ್ರಿಸಬಹುದು. ಸಾಮಾನ್ಯವಾಗಿ ಮಗು ಜನಿಸಿದ ಆರು ತಿಂಗಳವರೆಗೆ ದಡಾರ ಕಾಣಿಸಿಕೊಳ್ಳುವುದಿಲ್ಲ. ಇದಕ್ಕೆ ತಾಯಿಯಿಂದ ಬಳುವಳಿಯಾಗಿ ಪಡೆದ ರೋಗ ನಿರೋಧಕ ಶಕ್ತಿಯೇ ಕಾರಣ. ಕೇವಲ ಮಕ್ಕಳಲ್ಲಿ ಮಾತ್ರವಲ್ಲದೇ ರೋಗನಿರೋಧಕ ಶಕ್ತಿ ಹೊಂದಿರದ ಯಾವುದೇ ವಯಸ್ಸಿನ ವ್ಯಕ್ತಿಗಳಲ್ಲಿ ಸಂಭವಿಸಬಹುದು.

ಯಾರಿಗೆ ಬೇಗ ಹರಡುತ್ತದೆ?
-1-5 ವರ್ಷ ವಯಸ್ಸಿನ ಮಕ್ಕಳು
– ವಯಸ್ಕರು
– ಗರ್ಭಿಣಿ ಮಹಿಳೆ
– ಕಡಿಮೆ ಪ್ರತಿರಕ್ಷಣಾ ವ್ಯವಸ್ಥೆಗಳನ್ನು ಹೊಂದಿರುವ ಜನರು
– ಲ್ಯುಕೇಮಿಯಾ ಮತ್ತು ಎಚ್ಐವಿ ಸೋಂಕಿನ ಜನರಿಗೆ ಈ ಸೋಂಕು ಬೇಗ ಹರಡುವ ಸಾಧ್ಯತೆಗಳಿವೆ.

ಲಕ್ಷಣಗಳು:
ಈ ರೋಗ ಕಾಣಿಸಿಕೊಳ್ಳುವ ಮೊದಲನೇ ದಿನ ಜ್ವರ ಬರುತ್ತದೆ. ಆರಂಭದಲ್ಲಿ ಮುಖದ ಮೇಲಷ್ಟೇ ಕಾಣಿಸಿಕೊಳ್ಳುವ ನೀರಗುಳ್ಳೆಗಳು ದಿನಗಳೆದಂತೆ ಹೊಟ್ಟೆ ಹಾಗೂ ದೇಹದ ಇತರ ಭಾಗಕ್ಕೂ ವಿಸ್ತರಿಸುತ್ತವೆ. ದಡಾರವು ಸಾಮಾನ್ಯವಾಗಿ ಜ್ವರ, ಶೀತ, ಕೆಮ್ಮು ಮತ್ತು ಕಣ್ಣುಗಳು ಕೆಂಪಾಗಿ ನೀರು ಬರುವುದು. ಬೆಳಕು ನೋಡೋಕೆ ಆಗದೇ ಇರುವುದು. ಕೆಲ ದಿನಗಳ ನಂತರ ದೇಹದ ಮೇಲೆ ದದ್ದು ಕಾಣಿಸಿಕೊಳ್ಳುತ್ತದೆ. ಮುಖದ ಮೇಲೆ ಪ್ರಾರಂಭವಾಗುತ್ತದೆ ಮತ್ತು ದೇಹದ ಉಳಿದ ಭಾಗಗಳಿಗೆ ಹರಡುತ್ತದೆ.

ಹೇಗೆ ಹರಡುತ್ತದೆ?
ಕೆಮ್ಮಿದಾಗ, ಸೀನಿದಾಗ ಉಸಿರಾಟದ ಹನಿಗಳ ಮೂಲಕ ಹರಡುತ್ತದೆ. ದಡಾರ ರೋಗಿಯ ಬಾಯಲ್ಲಿ, ಮೂಗಿನಲ್ಲಿ ಮತ್ತು ಗಂಟಲ ಸ್ರವಿಕೆಯಲ್ಲಿ ವೈರಸ್‍ಗಳಿರುತ್ತವೆ. ಈ ರೋಗಿ ಸೀನಿದಾಗ, ಕೆಮ್ಮಿದಾಗ ಹೊರಗಿನ ಪರಿಸರಕ್ಕೆ ವೈರಸ್‍ಗಳು ಸೇರುತ್ತವೆ. ಉಸಿರಾಟದ ಮೂಲಕ ರೋಗಾಣುಗಳು ಆರೋಗ್ಯವಂತ ವ್ಯಕ್ತಿಯ ದೇಹವನ್ನು ಪ್ರವೇಶಿಸಿ, ರೋಗ ಲಕ್ಷಣಗಳನ್ನು ಹೊರಹೊಮ್ಮಿಸುತ್ತವೆ. ಆರೋಗ್ಯವಂತ ಮಗುವಿಗೆ ಸೋಂಕಿನ ಮೂಲಕ ದಡಾರ ಹರಡುತ್ತದೆ. ದಡಾರ ರೋಗಿ ಉಪಯೋಗಿಸಿದ ಸೋಂಕಿನಿಂದ ಕೂಡಿದ ವಸ್ತುಗಳಿಂದಲೂ ಸೋಂಕು ಹರಡಬಹುದು. ದಡಾರ ಕಾಣಿಸಿಕೊಂಡ ಪ್ರಾರಂಭದ ಐದು ದಿನಗಳವರೆಗೆ ಸೋಂಕು ತೀವ್ರವಾಗಿರುವುದರಿಂದ ಬೇರೆ ಮಕ್ಕಳಿಂದ ಮಗುವನ್ನು ಪ್ರತ್ಯೇಕವಾಗಿರಿಸುವುದು ಅಗತ್ಯ.ಇತ್ತೀಚಿನ ವರ್ಷಗಳಲ್ಲಿ ಇದು 18ರಿಂದ 40 ವರ್ಷ ವಯೋಮಾನದವರಲ್ಲೂ ಕಂಡುಬರುತ್ತಿದೆ.

ಭಾರತಕ್ಕೂ ಹರಡುತ್ತಾ?
ದಡಾರ ಸೋಂಕುಗಳನ್ನು ನಿರ್ವಹಿಸುವ ವಿಷಯದಲ್ಲಿ ಭಾರತವು ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ, ಏಕೆಂದರೆ 90 ಪ್ರತಿಶತಕ್ಕಿಂತ ಹೆಚ್ಚು ಜನರು ಈಗ ಅದರ ವಿರುದ್ಧ ಲಸಿಕೆ ಹಾಕಿಸಿಕೊಂಡಿದ್ದಾರೆ. ಇದರ ಹೊರತಾಗಿಯೂ ವಿಮಾನ ಪ್ರಯಾಣ, ವಲಸೆ ಮುಂತಾದವುಗಳು ಭಾರತದ ಗಡಿಗಳಲ್ಲಿ ಸೋಂಕು ಹರಡುವಿಕೆಗೆ ಕಾರಣವಾಗಬಹುದು. ಅಲ್ಲದೇ ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿಯೂ ಈ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿದೆ. ಆದ್ದರಿಂದ ವಿಮಾನ ಪ್ರಯಾಣ ಹಾಗೂ ವಲಸೆ ಸಮಯದಲ್ಲಿ ಅತ್ಯಂತ ಜಾಗ್ರತೆ ವಹಿಸುವುದು ಒಳಿತು.

ತಡೆಗಟ್ಟುವಿಕೆ ಹೇಗೆ?
ದಡಾರವನ್ನು ತಡೆಗಟ್ಟಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ವ್ಯಾಕ್ಸಿನೇಷನ್. ದಡಾರ, ಮಂಪ್ಸ್ ಮತ್ತು ರುಬೆಲ್ಲಾ ಲಸಿಕೆ ಸುರಕ್ಷಿತ ಮತ್ತು ಹೆಚ್ಚು ಪರಿಣಾಮಕಾರಿ ಲಸಿಕೆಯಾಗಿದ್ದು ಅದು ದಡಾರದ ವಿರುದ್ಧ ರೋಗನಿರೋಧಕ ಶಕ್ತಿಯನ್ನು ನೀಡುತ್ತದೆ. ಲಸಿಕೆಯನ್ನು ಸಾಮಾನ್ಯವಾಗಿ ಎರಡು ಡೋಸ್ ಗಳಲ್ಲಿ ನೀಡಲಾಗುತ್ತದೆ, ಮೊದಲ ಡೋಸ್ ಅನ್ನು 12-15 ತಿಂಗಳ ವಯಸ್ಸಿನಲ್ಲಿ ಮತ್ತು ಎರಡನೇ ಡೋಸ್ ಅನ್ನು 4-6 ವರ್ಷ ವಯಸ್ಸಿನಲ್ಲಿ ನೀಡಲಾಗುತ್ತದೆ. ಅನಾರೋಗ್ಯದ ಲಕ್ಷಣಗಳು ಕಾಣಿಸಿಕೊಂಡರೆ ಮನೆಯಲ್ಲಿಯೇ ಇರುವ ಮೂಲಕ ದಡಾರ ಹರಡುವುದನ್ನು ತಪ್ಪಿಸಬಹುದು. ದಡಾರವನ್ನು ತಪ್ಪಿಸಲು ಎಂಎಂಆರ್ ಲಸಿಕೆ ನೀಡುವುದೊಂದೇ ಮಾರ್ಗ. ಇದು ಅದರ ಅಪಾಯವನ್ನು 97% ರಷ್ಟು ಕಡಿಮೆ ಮಾಡುತ್ತದೆ.

ಅಗತ್ಯ ಕ್ರಮಗಳೇನು?
* ಉತ್ತಮ ನೈರ್ಮಲ್ಯವನ್ನು ಅಭ್ಯಾಸ ಮಾಡಿ:
ಆಗಾಗ ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ತೊಳೆಯಿರಿ. ಕೆಮ್ಮುವುದು, ಸೀನುವುದು ಮಾಡುವಾಗ ಜಾಗ್ರತೆವಹಿಸಿ. ಸಾರ್ವಜನಿಕ ಸ್ಥಳಗಳಲ್ಲಿ ಸೋಪ್ ಮತ್ತು ನೀರು ಲಭ್ಯವಿಲ್ಲದಿದ್ದರೆ, ಹ್ಯಾಂಡ್ ಸ್ಯಾನಿಟೈಸರ್ ಅನ್ನು ಬಳಸಿ.

* ಅನಾರೋಗ್ಯದ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸಿ:
ಸೋಂಕಿತ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ದಡಾರ ಉಸಿರಾಟದ ಹನಿಗಳ ಮೂಲಕ ಹರಡುತ್ತದೆ. ಹೀಗಾಗಿ ಅನಾರೋಗ್ಯದ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸಿ.

* ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ:
ನಿಯಮಿತ ವ್ಯಾಯಾಮ, ಸಮತೋಲಿತ ಆಹಾರ, ಸಾಕಷ್ಟು ನಿದ್ರೆ ಮತ್ತು ಒತ್ತಡವನ್ನು ನಿರ್ವಹಿಸುವ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಿ. ಬಲವಾದ ರೋಗನಿರೋಧಕ ಶಕ್ತಿಯು ನಿಮ್ಮ ದೇಹವು ಸೋಂಕುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಹೋರಾಡಲು ಸಹಾಯ ಮಾಡುತ್ತದೆ.

* ನವೀಕೃತ ವ್ಯಾಕ್ಸಿನೇಷನ್‍ಗಳನ್ನು ಖಚಿತಪಡಿಸಿಕೊಳ್ಳಿ:
ದಡಾರವನ್ನು ತಡೆಗಟ್ಟಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಲಸಿಕೆಯನ್ನು ಪಡೆಯುವುದು. ಸೋಂಕಿನ ಸಾಂಕ್ರಾಮಿಕ ಹರಡುವಿಕೆಯಿಂದ ಸುರಕ್ಷಿತವಾಗಿರಲು ನೀವು ಮತ್ತು ನಿಮ್ಮ ಕುಟುಂಬದ ಸದಸ್ಯರು ದಡಾರ ಡೋಸ್‍ಗಳೊಂದಿಗೆ ನವೀಕೃತವಾಗಿರುವುದನ್ನು ಖಚಿತಪಡಿಸಿಕೊಳ್ಳಿ.

* ಬಾಯಿ ಮತ್ತು ಮೂಗನ್ನು ಮುಚ್ಚಿ:
ಕೆಮ್ಮುವಾಗ ಅಥವಾ ಸೀನುವಾಗ, ಉಸಿರಾಟದ ಹನಿಗಳು ಹರಡುವುದನ್ನು ತಡೆಯಲು ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಿ ಬಳಿಕ ತಕ್ಷಣವೇ ನಿಮ್ಮ ಕೈಗಳನ್ನು ತೊಳೆಯಿರಿ.

Share This Article