ವೇತನ ಹೆಚ್ಚಳಕ್ಕೆ ಆಗ್ರಹಿಸಿ ನಡೆಸುತ್ತಿದ್ದ ನೌಕರರ ಪ್ರತಿಭಟನೆ ವೇಳೆ ಹಿಂಸಾಚಾರ – ಪೊಲೀಸರ ವಾಹನಗಳಿಗೆ ಬೆಂಕಿ

2 Min Read

– ರಸ್ತೆ ತಡೆದು ಪ್ರತಿಭಟನೆ – ಪೊಲೀಸರಿಂದ ಲಘು ಲಾಠಿ ಪ್ರಹಾರ

ಲಕ್ನೋ: ವೇತನ ಹೆಚ್ಚಳಕ್ಕೆ ಆಗ್ರಹಿಸಿ ವಿವಿಧ ಖಾಸಗಿ ಕಂಪನಿ ನೌಕರರು (Noida Workers) ನಡೆಸುತ್ತಿದ್ದ ಪ್ರತಿಭಟನೆ ಸೋಮವಾರ (ಇಂದು) ಮೂರನೇ ದಿನಕ್ಕೆ ಕಾಲಿಟ್ಟಿದೆ. ಕಳೆದ 2 ದಿನಗಳಿಂದ ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ಇಂದು ಹಿಂಸಾತ್ಮಕ ರೂಪಕ್ಕೆ ತಿರುಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದ ನೌಕರರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ, ಇದರಿಂದ ಪ್ರತಿಭಟನೆ (Noida Protest) ಹಿಂಸಾತ್ಮಕ ರೂಪಕ್ಕೆ ತಿರುಗಿದೆ.

ರೊಚ್ಚಿಗೆದ್ದ ಪ್ರತಿಭಟನಾಕಾರರು
ಪೊಲೀಸರು ಪ್ರತಿಭಟನಾಕಾರರನ್ನ ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದ್ರು, ಇದರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರು ಪೊಲೀಸ್‌ ವಾಹನಗಳಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿದರು. ಹಲವು ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲೂ (Social Media) ಸದ್ದು ಮಾಡುತ್ತಿವೆ. ಇದನ್ನೂ ಓದಿ: ನಾಳೆ ಪ್ರಧಾನಿಗಳಿಂದ ಉದ್ಘಾಟನೆ ಆಗಬೇಕಿರುವ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಸರಣಿ ಅಪಘಾತ – ತಪ್ಪಿದ ದುರಂತ

ವರದಿಗಳ ಪ್ರಕಾರ, ಸೆಕ್ಟರ್ 84 ರಲ್ಲಿ ಕನಿಷ್ಠ ಎರಡು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಮಧ್ಯೆ ನೋಯ್ಡಾ 2ನೇ ಬ್ಲಾಕ್‌ನ ವಿವಿಧ ಪ್ರದೇಶಗಳಲ್ಲಿ ನೌಕರರು ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಹಣದುಬ್ಬರ ಸಮಯದಲ್ಲಿ ಪ್ರಸ್ತುತ ವೇತನ ಸಾಕಾಗಲ್ಲ, ಇದು ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ವೇತನ ಹೆಚ್ಚಳ ಮಾಡುವಂತೆ ಮತ್ತು ಕೆಲಸ ಪರಿಸ್ಥಿತಿಗಳನ್ನು ಸುಧಾರಿಸುವಂತೆ ಒತ್ತಾಯಿಸಿ ಧಿಕ್ಕಾರ ಕೂಗಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಭುಗಿಲೆದ್ದ ಆಕ್ರೋಶ – ಹಳೆಯ ವೈಷಮ್ಯ ಮತ್ತೆ ಹೊತ್ತಿ ಉರಿತಿದ್ಯಾ?

ಹೆಚ್ಚುವರಿ ಪೊಲೀಸ್‌ ನಿಯೋಜನೆ
ಒಂದು ದಿನದ ಹಿಂದಷ್ಟೇ ಇಲ್ಲಿನ ಜಿಲ್ಲಾಡಳಿತ, ಪೊಲೀಸ್‌ ಮತ್ತು ಪ್ರಾಧಿಕಾರದ ಅಧಿಕಾರಿಗಳು ಪ್ರತಿಭಟನಾ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದರು. ಶೀಘ್ರದಲ್ಲೇ ಬೇಡಿಕೆಗಳನ್ನು ಪರಿಗಣಿಸಿ ಪರಿಹಾರ ಕಲ್ಪಿಸಿಕೊಡುವ ಭರವಸೆಯನ್ನೂ ನೀಡಿದ್ದರು. ಆದ್ರೆ ಇಂದು ಪ್ರತಿಭಟನೆ ತೀವ್ರಗೊಂಡಿತು. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಸರ್ಕಾರ ಹೆಚ್ಚುವರಿ ಪೊಲೀಸರನ್ನ ಪ್ರತಿಭಟನಾ ಸ್ಥಳಗಳಿಗೆ ನಿಯೋಜನೆ ಮಾಡಿ, ಪರಿಸ್ಥಿತಿಯನ್ನು ತಿಳಿಗೊಳಿಸಿದೆ. ಜೊತೆಗೆ ಸರ್ಕಾರ ಯಾವುದೇ ಹಿಂಸಾಚಾರ ಸಹಿಸುವುದಿಲ್ಲ, ಈ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಕಾಯ್ದುಕೊಳ್ಳುವಂತೆ ಆಡಳಿತ ಕರೆ ನೀಡಿದೆ. ಆದ್ರೆ ಪ್ರದೇಶದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಮತ್ತೆ ಪ್ರತಿಭಟನೆ ಭುಗಿಲೇಳುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಯೋಗಿ ಸರ್ಕಾರದ ಕ್ರಮದ ಹೊರತಾಗಿಯೂ ಪ್ರತಿಭಟನೆ
ಈ ಹಿಂದೆ ಸಿಎಂ ಯೋಗಿ ಆದಿತ್ಯನಾಥ್‌ ಸರ್ಕಾರವು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಪರವಾಗಿ ಹಲವು ನಿರ್ಧಾರಗಳನ್ನ ತೆಗೆದುಕೊಂಡಿತ್ತು. ಗೌತಮಬುದ್ಧ ನಗರದಲ್ಲಿ ಕಾರ್ಮಿಕರ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಕಾರ್ಮಿಕರಿಗೆ ಡಬಲ್ ಓವರ್‌ಟೈಮ್ ಪಾವತಿ, ಸಕಾಲಿಕ ವೇತನ ಪಾವತಿ ಮತ್ತು ಬೋನಸ್‌ಗಳನ್ನ ನೇರವಾಗಿ ಬ್ಯಾಂಕ್‌ ಖಾತೆ ಮೂಲಕ ಪಾವತಿಸುವುದನ್ನು ಕಡ್ಡಾಯಗೊಳಿತ್ತು. ಇದರ ಹೊರತಾಗಿಯೂ ನೋಯ್ಡಾ ನೋಯ್ಡಾದಲ್ಲಿ ಕೆಲ ಕಂಪನಿಗಳು ವೇತನ ವಿಳಂಬ ಮತ್ತು ಅಕ್ರಮ ಮಾಡಿದ್ದರಿಂದ ಕಾರ್ಮಿಕರು ಪ್ರತಿಭಟನೆಗೆ ಮುಂದಾದರು. ಇದನ್ನೂ ಓದಿ: Corporate Jihad | ಹಿಂದೂ ಮಹಿಳಾ ಉದ್ಯೋಗಿಗಳಿಗೆ ಬಲವಂತವಾಗಿ ಗೋಮಾಂಸ ಸೇವಿಸುವಂತೆ, ನಮಾಜ್‌ ಮಾಡುವಂತೆ ಒತ್ತಾಯ

Share This Article