ನವದೆಹಲಿ: ಕೇರಳದ ಶಬರಿಮಲೆ ದೇವಸ್ಥಾನಕ್ಕೆ (Sabarimala Temple) ಎಲ್ಲಾ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನೀಡಿದ ತೀರ್ಪಿನ ಪುನರ್ ಪರಿಶೀಲನಾ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ (Supreme Court) ಆರಂಭಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ 9 ನ್ಯಾಯಾಧೀಶರ ಸಂವಿಧಾನ ಪೀಠ ಇಂದು ವಿಚಾರಣೆ ನಡೆಸಿತು. ಇಂದು ನಡೆದ ವಿಚಾರಣೆಯಲ್ಲಿ ಪೀಠವು 7 ಮುಖ್ಯ ಪ್ರಶ್ನೆಗಳನ್ನು ಎತ್ತಿದೆ.
ಸಂವಿಧಾನದ ಅನುಚ್ಛೇದ 25 ಮತ್ತು 26ರ ಅಡಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯದ ವ್ಯಾಪ್ತಿ, ಮಿತಿ, ವ್ಯಕ್ತಿ ಹಕ್ಕುಗಳು ಮತ್ತು ಧಾರ್ಮಿಕ ಸಂಪ್ರದಾಯಗಳ ನಡುವಿನ ಸಮತೋಲನ, ನೈತಿಕತೆಯ ಅರ್ಥ, ಧಾರ್ಮಿಕ ಆಚರಣೆಗಳ ಮೇಲಿನ ನ್ಯಾಯಾಂಗ ಪರಿಶೀಲನೆ, ಹಿಂದೂಗಳ ವಿಭಾಗಗಳು ಎಂಬ ಪದದ ಅರ್ಥ ಮತ್ತು ಧಾರ್ಮಿಕ ಸಂಪ್ರದಾಯಗಳ ವಿರುದ್ಧ ಪಿಐಎಲ್ ದಾಖಲಿಸುವ ಹಕ್ಕು ಇತ್ಯಾದಿಗಳನ್ನು ಒಳಗೊಂಡಿವೆ.
ಪ್ರಕರಣದಲ್ಲಿ ವಾದ ಮಂಡಿಸುವ ವಕೀಲರು ನಿಗದಿತ ಗಡುವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇನ್ನೂ ಅನೇಕ ಸೂಕ್ಷ್ಮ ಪ್ರಕರಣಗಳು ಬಾಕಿ ಉಳಿದಿವೆ. ಆದ್ದರಿಂದ ಹೆಚ್ಚುವರಿ ಸಮಯ ನೀಡಲಾಗುವುದಿಲ್ಲ. ಎಲ್ಲಾ ಪಕ್ಷಗಳು ತಮ್ಮ ವಾದಗಳು ಮತ್ತು ದಾಖಲೆಗಳನ್ನು ಸಕಾಲಿಕವಾಗಿ ಪ್ರಸ್ತುತಪಡಿಸಲು ಆದೇಶಿಸಿದೆ. ಇದನ್ನೂ ಓದಿ: ಶಬರಿಮಲೆ ದೇಗುಲಕ್ಕೆ ಮಹಿಳೆಯರಿಗೆ ಅವಕಾಶ ನೀಡಲ್ಲ: ತಿರುವಾಂಕೂರು ದೇವಸ್ವಂ ಮಂಡಳಿ ನಿರ್ಣಯ
7 ಪ್ರಶ್ನೆಗಳು ಯಾವುದು?
1. ಭಾರತದ ಸಂವಿಧಾನದ 25 ನೇ ವಿಧಿಯ ಅಡಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನ ವ್ಯಾಪ್ತಿ ಮತ್ತು ವ್ಯಾಪ್ತಿ ಏನು?
2. ಭಾರತದ ಸಂವಿಧಾನದ 25 ನೇ ವಿಧಿಯ ಅಡಿಯಲ್ಲಿ ವ್ಯಕ್ತಿಗಳ ಹಕ್ಕುಗಳು ಮತ್ತು ಭಾರತದ ಸಂವಿಧಾನದ 26 ನೇ ವಿಧಿಯ ಅಡಿಯಲ್ಲಿ ಧಾರ್ಮಿಕ ಪಂಗಡದ ಹಕ್ಕುಗಳ ನಡುವಿನ ಪರಸ್ಪರ ಸಂಬಂಧವೇನು?
3. ಭಾರತದ ಸಂವಿಧಾನದ 26 ನೇ ವಿಧಿಯ ಅಡಿಯಲ್ಲಿ ಧಾರ್ಮಿಕ ಪಂಗಡದ ಹಕ್ಕುಗಳು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯವನ್ನು ಹೊರತುಪಡಿಸಿ ಭಾರತದ ಸಂವಿಧಾನದ ಭಾಗ III ರ ಇತರ ನಿಬಂಧನೆಗಳಿಗೆ ಒಳಪಟ್ಟಿವೆಯೇ?
4. ಭಾರತದ ಸಂವಿಧಾನದ 25 ಮತ್ತು 26 ನೇ ವಿಧಿಯ ಅಡಿಯಲ್ಲಿ ‘ನೈತಿಕತೆ’ ಎಂಬ ಪದದ ವ್ಯಾಪ್ತಿ ಮತ್ತು ವ್ಯಾಪ್ತಿ ಏನು ಮತ್ತು ಅದು ಸಾಂವಿಧಾನಿಕ ನೈತಿಕತೆಯನ್ನು ಒಳಗೊಳ್ಳಲು ಉದ್ದೇಶಿಸಲಾಗಿದೆಯೇ?
5. ಭಾರತದ ಸಂವಿಧಾನದ 25 ನೇ ವಿಧಿಯಲ್ಲಿ ಉಲ್ಲೇಖಿಸಿರುವಂತೆ ಧಾರ್ಮಿಕ ಆಚರಣೆಗೆ ಸಂಬಂಧಿಸಿದಂತೆ ನ್ಯಾಯಾಂಗ ಪರಿಶೀಲನೆಯ ವ್ಯಾಪ್ತಿ ಮತ್ತು ವ್ಯಾಪ್ತಿ ಏನು?
6. ಭಾರತದ ಸಂವಿಧಾನದ 25 (2) (b) ವಿಧಿಯಲ್ಲಿ ಕಂಡುಬರುವ “ಹಿಂದೂಗಳ ವಿಭಾಗಗಳು” ಎಂಬ ಅಭಿವ್ಯಕ್ತಿಯ ಅರ್ಥವೇನು?
7. ಆ ದೇವಸ್ಥಾನದ ಭಕ್ತರಲ್ಲದವರು ಅಥವಾ ಆ ಧರ್ಮಕ್ಕೆ ಸೇರದವರು ಆ ಧರ್ಮದ ಆಚರಣೆಗಳನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಲು ಅವಕಾಶವಿದೆಯೇ?
ಕೇಂದ್ರದ ವಾದ ಏನು?
ವಿಚಾರಣೆಗೂ ಮುನ್ನ ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿದ್ದು ಮಹಿಳೆಯರ ಪ್ರವೇಶದ ಮೇಲಿನ ನಿರ್ಬಂಧವು ತಾರತಮ್ಯವಲ್ಲ, ಬದಲಿಗೆ ಅದು ಶಬರಿಮಲೆಯ ವಿಶಿಷ್ಟ ಧಾರ್ಮಿಕ ಸಂಪ್ರದಾಯ ಮತ್ತು ಪಂಥೀಯ ಸ್ವಾಯತ್ತತೆಯ ವ್ಯಾಪ್ತಿಗೆ ಬರುತ್ತದೆ ಧಾರ್ಮಿಕ ಆಚರಣೆಗಳಲ್ಲಿ ನ್ಯಾಯಾಂಗದ ಹಸ್ತಕ್ಷೇಪ ಸರಿಯಲ್ಲ. ಇದನ್ನೂ ಓದಿ: ಶಬರಿಮಲೆ ವಿಚಾರದಲ್ಲಿ ಪಿಣರಾಯಿ ಯೂಟರ್ನ್ – ಮಹಿಳೆಯರ ಪ್ರವೇಶ ಹಿಂದಿನ ನಿಲುವು ಬದಲಾಯಿಸಿದ ಸರ್ಕಾರ
ಯಾವ ದಿನ ಏನು?
ಏಪ್ರಿಲ್ 7-9: ಮರುಪರಿಶೀಲನೆ ಕೋರಿದ ಅರ್ಜಿದಾರರ ವಾದ ಆಲಿಕೆ.
ಏಪ್ರಿಲ್ 14-16: ಮರುಪರಿಶೀಲನೆಯನ್ನು ವಿರೋಧಿಸುವವರ (ಮೂಲ ಅರ್ಜಿದಾರರ) ವಾದ ಆಲಿಕೆ.
ಏಪ್ರಿಲ್ 21-22: ಅಂತಿಮ ಸುತ್ತಿನ ವಾದ-ಪ್ರತಿವಾದಗಳು ನಡೆಯಲಿದ್ದು, ವಿಚಾರಣೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಪೀಠದಲ್ಲಿ ಯಾರಿದ್ದಾರೆ?
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಸಾಂವಿಧಾನಿಕ ಪೀಠದಲ್ಲಿ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ, ವಿಕ್ರಮ್ ನಾಥ್, ಜೆ.ಕೆ. ಮಹೇಶ್ವರಿ, ಹಿಮಾ ಕೊಹ್ಲಿ, ಸಿ.ಟಿ. ರವಿಕುಮಾರ್, ಎಂ.ಎಂ. ಸುಂದರೇಶ್, ಬೇಲಾ ಎಂ. ತ್ರಿವೇದಿ, ಶ್ರೀ ನರಸಿಂಹ ಇದ್ದಾರೆ.
ಏನಿದು ಪ್ರಕರಣ?
2018ರಲ್ಲಿ ಸುಪ್ರೀಂ ಕೋರ್ಟ್ನ ಐವರು ನ್ಯಾಯಾಧೀಶರ ಪೀಠವು ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶ ನೀಡಬೇಕೆಂದು ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ಬಗ್ಗೆ ಈಗ ಸಮಗ್ರ ವಿಚಾರಣೆ ನಡೆಯುತ್ತಿದೆ.
ಕೇರಳ ಸರ್ಕಾರ ಈ ಮೊದಲು ದೇವಸ್ಥಾನ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ ನೀಡಬೇಕು ಎಂದು ಹೇಳಿತ್ತು. ಆದರೆ ಈಗ ಮಹಿಳೆಯರಿಗೆ ಅವಕಾಶ ನೀಡಬಾರದು ಎಂದು ಕೋರಿ ಮರುಪರಿಶೀಲನಾ ಅರ್ಜಿ ಸಲ್ಲಿಸಿದೆ.
ಟ್ರಾವಂಕೂರ್ ದೇವಸ್ವಂ ಮಂಡಳಿ (TDB) ಪರವಾಗಿ ವಾದ ಮಂಡಿಸುತ್ತಿರುವ ಅಭಿಷೇಕ್ ಮನು ಸಿಂಘ್ವಿ ಈ ಹಿಂದೆ ಮಹಿಳಾ ಪ್ರವೇಶವನ್ನು ಬೆಂಬಲಿಸಿ ವಾದಿಸಿದ್ದರು. ಈಗ ಟಿಡಿಬಿ ತನ್ನ ನಿಲುವನ್ನು ಬದಲಿಸಿದ್ದರಿಂದ ಸಂಪ್ರದಾಯದ ಪರವಾಗಿ ಸಿಂಘ್ವಿ ಅವರ ಮೂಲಕ ವಾದಿಸುತ್ತಿದೆ.


