ಸಾಧು ಪರಂಪರೆಯ ಆಧ್ಯಾತ್ಮಿಕತೆಯಲ್ಲಿ ಶಿವಕುಮಾರ ಶ್ರೀಗಳು ಮೇಲ್ಪಂಕ್ತಿಯಲ್ಲಿರುತ್ತಾರೆ – ರಾಷ್ಟ್ರಪತಿ ಮುರ್ಮು

3 Min Read

-ಮಕ್ಕಳಿಗೆ ಅನ್ನ, ಆಶ್ರಯ, ಅಕ್ಷರ ಕೊಟ್ಟು ಅನಾಥರ ಪಾಲಿನ ಅಪ್ಪ ಎನಿಸಿಕೊಂಡಿದ್ದಾರೆ
-ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಸಿದ್ದಗಂಗಾ ಮಠದ ಪಾತ್ರ ಪ್ರಮುಖ

ತುಮಕೂರು: ದೇಶದ ಸಾಧು ಪರಂಪರೆಯ ಆಧ್ಯಾತ್ಮಿಕತೆಯಲ್ಲಿ ಶಿವಕುಮಾರ ಶ್ರೀಗಳು (Shivakumar Shri) ಮೇಲ್ಪಂಕ್ತಿಯಲ್ಲಿರುತ್ತಾರೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಹೇಳಿದರು.

ಭಕ್ತರಪಾಲಿನ ನಡೆದಾಡುವ ದೇವರು, ಕಾಯಕಯೋಗಿ ಶಿವೈಕ್ಯ ಶಿವಕುಮಾರ ಶ್ರೀಗಳ 119ನೇ ಜನ್ಮದಿನೋತ್ಸವ ಇಂದು (ಏ.1) ಅರ್ಥಪೂರ್ಣವಾಗಿ ನಡೆಯಿತು. ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಶಿವಕುಮಾರ ಶ್ರೀಗಳ ಗದ್ದಿಗೆಗೆ ವಿಶೇಷ ಪೂಜೆ ಸಲ್ಲಿಸಿದರು. ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ ಮಂತ್ರಘೋಷಗಳೊಂದಿಗೆ ಗದ್ದಿಗೆಗೆ ಪೂಜಾ ಕೈಂಕರ್ಯ ನೆರವೇರಿಸಿದರು. ಇದನ್ನೂ ಓದಿ: ಶಿವೈಕ್ಯ ಶಿವಕುಮಾರ ಶ್ರೀಗಳ 119ನೇ ಜಯಂತ್ಯೋತ್ಸವ – ಸಿದ್ದಗಂಗಾ ಮಠದಲ್ಲಿ ಕಳೆಗಟ್ಟಿದ ಸಂಭ್ರಮ

ಬೆಳಿಗ್ಗೆ 10-:30ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶ್ರೀಮಠಕ್ಕೆ ಆಗಮಿಸಿದರು. ಆರಂಭದಲ್ಲಿ ಶಿವಕುಮಾರ ಶ್ರೀಗಳ ಗದ್ದಿಗೆಗೆ ಪೂಜೆ ಸಲ್ಲಿಸಿ, ನಮಸ್ಕರಿಸಿ ಆಶೀರ್ವಾದ ಪಡೆದರು. ಬಳಿಕ ಶ್ರೀಮಠದ ಮಕ್ಕಳ ಜೊತೆ ಕೊಂಚ ಸಮಯ ಕಳೆದರು. ತದನಂತರ ಉದ್ದಾನ ಶಿವಯೋಗಿಗಳ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗಿಯಾದರು.

ಈ ವೇಳೆ ರಾಷ್ಟ್ರಪತಿ ಮುರ್ಮು ಅವರು ಮಾತನಾಡಿ, ಓಂ ನಮಃ ಶಿವಾಯ ಎಂದು ಮೂರು ಬಾರಿ ಉದ್ಘೋಷಿಸಿದರು. ಸಹೋದರ ಸಹೋದರಿಯರೇ ನಿಮಗೆ ಸಪ್ರೇಮ ವಂದನೆಗಳು ಎಂದು ಕನ್ನಡದಲ್ಲಿ ತಮ್ಮ ಮಾತುಗಳನ್ನು ಆರಂಭಿಸಿದರು. ಸಿದ್ದಗಂಗಾ ಮಠಕ್ಕೆ ಬಂದು ಶಿವಕುಮಾರ ಶ್ರೀಗಳ ಗದ್ದಿಗೆ ದರ್ಶನ ಪಡೆದಿದ್ದು ನನಗೆ ಖುಷಿಯಾಗಿದೆ. ಶ್ರೀಮಠದ ಮಕ್ಕಳನ್ನು ಮಾತನಾಡಿಸಿದ್ದೂ ಸಂತೋಷವಾಗಿದೆ. ಶ್ರೀಗಳು ದೈಹಿಕವಾಗಿ ಇಲ್ಲದೇ ಇದ್ದರೂ ಅವರ ಸೇವೆ ನಮ್ಮ ನಡುವೆ ಇದೆ. ಈ ದೇಶದ ಸಾಧು ಪರಂಪರೆಯ ಆಧ್ಯಾತ್ಮಿಕತೆಯಲ್ಲಿ ಶಿವಕುಮಾರ ಶ್ರೀಗಳು ಮೇಲ್ಪಂಕ್ತಿಯಲ್ಲಿ ಇರುತ್ತಾರೆ. ಅನಾಥ ಬಡ ಮಕ್ಕಳಿಗೆ ಅನ್ನ, ಆಶ್ರಯ, ಅಕ್ಷರ ಕೊಟ್ಟು ಅನಾಥರ ಪಾಲಿನ ಅಪ್ಪ ಎನಿಸಿಕೊಂಡಿದ್ದಾರೆ. ದಯೆಯೇ ಧರ್ಮದ ಮೂಲವಯ್ಯ ಎನ್ನುವಂತೆ ಸಿದ್ದಗಂಗಾ ಮಠವು ಬಸವಣ್ಣನವರು ಹಾಕಿಕೊಟ್ಟ ದಾರಿಯಲ್ಲಿ ನಡೀತಿದೆ. ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಸಿದ್ದಗಂಗಾ ಮಠದ ಪಾತ್ರ ಪ್ರಮುಖವಾಗಿದೆ ಎಂದು ಸೇವಾ ಕಾರ್ಯವನ್ನು ಕೊಂಡಾಡಿದರು.ಇದನ್ನೂ ಓದಿ: ಕರುಣೆ, ವಿನಯದ ಪ್ರತಿರೂಪವಾಗಿ ನಮ್ಮೆಲ್ಲರ ಸ್ಮರಣೆಯಲ್ಲಿ ಸದಾ ಜೀವಂತ – ಶಿವಕುಮಾರ ಶ್ರೀಗಳಿಗೆ ಮೋದಿ ಭಾವಪೂರ್ಣ ನಮನ

ಈ ವೇಳೆ ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆ ನೆನೆದರು. ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ರಾಷ್ಟ್ರಕವಿ ಕುವೆಂಪು ಅವರ ಗೀತೆ ನೆನಪಾಗುತ್ತದೆ. ಕರ್ನಾಟಕವನ್ನು ಭಾರತ ಮಾತೆಯ ಪುತ್ರಿಯಂತೆ ಕರ್ನಾಟಕ ಮಾತೆಯನ್ನು ವರ್ಣನೆ ಮಾಡಿದ್ದಾರೆ. ಜೈ ಭಾರತ ಜನನಿಯ ತನುಜಾತೆ, ಜೈ ಕರ್ನಾಟಕ ಮಾತೆ ಎಂದು ನಾಡಗೀತೆ ಸಾಲು ಹಾಡಿದರು.

ಇದೇ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮಾತನಾಡಿ, ಸಿದ್ದಗಂಗಾ ಮಠಕ್ಕೆ ಬಂದರೆ ದೇವಲೋಕದ ಅನುಭವ ಆಗುತ್ತದೆ, ಇಲ್ಲಿಯ ಪುಣ್ಯದ ಅನ್ನ ಮಕ್ಕಳಲ್ಲಿ ಒಳ್ಳೆಯ ರಕ್ತ ಹಾಗೂ ಬುದ್ಧಿಯನ್ನು ನೀಡುತ್ತದೆ ಎಂದು ಸೇವಾ ಕೈಂಕರ್ಯನ್ನು ನೆನೆದರು. ವೇದಿಕೆ ಮೇಲೆ ಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಕೇಂದ್ರ ಸಚಿವ ವಿ.ಸೋಮಣ್ಣ, ರಾಜ್ಯಪಾಲ ಗೆಲ್ಹೋಟ್, ಗೃಹ ಸಚಿವ ಜಿ.ಪರಮೇಶ್ವರ್, ಸಚಿವರಾದ ಎಂ.ಬಿ ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್ ವೇದಿಕೆ ಮೇಲೆ ಇದ್ದರು.ಇದನ್ನೂ ಓದಿ: Census 2027 | ಈ ಸುದ್ದಿ ಓದಿ ಮನೆಯಲ್ಲೇ ಕುಳಿತೇ 15 ನಿಮಿಷದ ಒಳಗಡೆ ನಿಮ್ಮ ವಿವರವನ್ನು ಭರ್ತಿ ಮಾಡಿ!

Share This Article