ಬೆಂಗಳೂರು ಗೋಶಾಲೆಯಲ್ಲಿ ಮೂಕಪ್ರಾಣಿಗಳ ಮಾರಣಹೋಮ

Public TV
1 Min Read

– ಗುಬ್ಬಿಯಲ್ಲಿ ರಾಸು ಬಿಡಿಸಿಕೊಳ್ಳೋಕೆ ಹೋದ್ರೆ ಟ್ರಸ್ಟಿಯಿಂದ  ಪೊಲೀಸರಿಗೆ ಧಮ್ಕಿ

ತುಮಕೂರು: ರಾಜ್ಯದಲ್ಲಿ ಖಾಸಗಿ ವ್ಯಕ್ತಿಗಳು ನಡೆಸುತ್ತಿರುವ ಗೋ ಶಾಲೆಗಳಲ್ಲಿ ಜಾನುವಾರುಗಳ ಮೇಲೆ ನಿರಂತರ ದೌರ್ಜನ್ಯ ನಡೀತಿದೆ. ಮೇವು, ನೀರು, ಶುಚಿತ್ವ ಇಲ್ಲದೆ ನೂರಾರು ಮೂಕಪ್ರಾಣಿಗಳು ಬಲಿಯಾಗುತ್ತಿವೆ.

ತುಮಕೂರು ಮತ್ತು ಬೆಂಗಳೂರಲ್ಲಿ ನಡೆದ ಈ ಘಟನೆ ನೋಡಿದ್ರೆ ಎಂಥವರಿಗೂ ಮರುಕ ಹುಟ್ಟದೇ ಇರದು. ಬೆಂಗಳೂರಿನ ಮಹಾದೇವಪುರದಲ್ಲಿರೋ ‘ಬೆಂಗಳೂರು ಗೋ ಶಾಲೆ’ ಯಲ್ಲಿ ಒಂದರ ಹಿಂದೆ ಒಂದರಂತೆ ಜಾನುವಾರುಗಳು ಸಾಯುತ್ತಿವೆ. ಮೂಕಪ್ರಾಣಿಗಳಿಗೆ ಸರಿಯಾದ ಚಿಕಿತ್ಸೆ ನೀಡದೇ ಸಾಯುತ್ತಿವೆ. ಸತ್ತ ದೇಹವನ್ನೂ ಕೂಡಾ ಕ್ರಮಬದ್ಧವಾಗಿ ಮಣ್ಣು ಮಾಡದೇ ಜಾನುವಾರುಗಳ ಮೃತದೇಹವನ್ನು ಒಂದರ ಮೇಲೆ ಒಂದು ರಾಶಿ ಹಾಕಿದ್ದನ್ನು ಕಂಡರೆ ನಿಜಕ್ಕೂ ಕರುಳು ಕಿತ್ತು ಬರುತ್ತದೆ.

ಇನ್ನೊಂದೆಡೆ ಶುಕ್ರವಾರದಂದು ತುಮಕೂರು ಜಿಲ್ಲೆ ಗುಬ್ಬಿಯಲ್ಲಿದ್ದ ಧ್ಯಾನ್ ಗೋರಕ್ಷಣಾ ಟ್ರಸ್ಟ್ ನ ಗೋಶಾಲೆಯಲ್ಲಿ ರೈತರ ಹಸುಗಳನ್ನು ಬಿಡಿಸಿಕೊಡಲು ಹೋದಾಗ ಟ್ರಸ್ಟಿ ನಂಸಿನಿ ಮಟಾನಿ ಪೊಲೀಸರಿಗೇ ಆವಾಜ್ ಹಾಕಿದ್ದಾರೆ. ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತಿದ್ದಾರೆ ಎಂಬ ಆರೋಪದ ಮೇಲೆ 40 ಜಾನುವಾರುಗಳನ್ನು ವಶಕ್ಕೆ ಪಡೆದು ಈ ಗೋಶಾಲೆಗೆ ನೀಡಲಾಗಿತ್ತು. ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಪೊಲೀಸರು ಗೋವುಗಳನ್ನು ಬಿಡಿಸಬೇಕಿತ್ತು. ಆದ್ರೆ ಗೋರಕ್ಷಕಿ ನಂದಿನಿ ಮಟಾನಿ ದುಡ್ಡು ಕೊಡದೇ ಇದ್ರೆ ಹಸುಗಳನ್ನು ಬಿಡಲ್ಲ ಎಂದು ಪೊಲೀಸರಿಗೇ ಆವಾಜ್ ಹಾಕಿದ್ದಾರೆ. ನಂತರ ಪೊಲೀಸರು ಬಂದ ದಾರಿಗೆ ಸುಂಕ ಇಲ್ಲದೆ ವಾಪಸ್ಸಾಗಿದ್ದಾರೆ.

ಬೆಂಗಳೂರು ಮತ್ತು ಗುಬ್ಬಿಯಲ್ಲಿರುವ ಗೋಶಾಲೆ ಒಬ್ಬರೇ ವ್ಯಕ್ತಿಗೆ ಸೇರಿದ್ದು ಎನ್ನಲಾಗಿದೆ. ಕೇಂದ್ರ ಸಚಿವರೊಬ್ಬರ ಬೆಂಬಲ ಇವರಿಗೆ ಇದೆ ಎಂದು ಹೇಳಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *