ತಿರುವನಂತಪುರಂ: ವೈದ್ಯೆಯನ್ನು 27 ಬಾರಿ ಇರಿದು ಬರ್ಬರವಾಗಿ ಕೊಲೆ ಮಾಡಿದ್ದ ಅಪರಾಧಿಗೆ ಕೊಲ್ಲಂ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ (Kollam Court) ಜೀವಾವಧಿ ಶಿಕ್ಷೆ ವಿಧಿಸಿದೆ.
ಪ್ರಕರಣ ಸಂಬಂಧ ಇಂದು (ಮಾ.21)ವಿಚಾರಣೆ ನಡೆಸಿದ ಕೊಲ್ಲಂ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು (Kollam Additional District and Sessions Court) ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಅಪರಾಧಿ ಜಿ. ಸಂದೀಪ್ಗೆ 30 ವರ್ಷಗಳ ಜೈಲು ಶಿಕ್ಷೆ ನೀಡಿದೆ. ಈ ಅವಧಿ ಮುಗಿದ ಬಳಿಕ ಜೀವಾವಧಿ ಶಿಕ್ಷೆ ಆರಂಭವಾಗುತ್ತದೆ ಎಂದು ತಿಳಿಸಿದೆ. ಇದನ್ನೂ ಓದಿ: PublicTV Explainer: ಅತ್ಯಾಧುನಿಕ ರೆಡಾರ್ಗಳನ್ನೇ ಕಣ್ತಪ್ಪಿಸೋ ಡ್ಯಾನ್ಸಿಂಗ್ ಮಿಸೈಲ್ – ಏನಿದರ ವಿಶೇಷ?
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರತಾಪ್ ಜಿ ಪಡಿಕ್ಕಲ್ ಅವರು ಅಪರಾಧಿಗೆ ಗರಿಷ್ಠ ಶಿಕ್ಷೆಯನ್ನು ವಿಧಿಸುವಂತೆ ಕೋರಿದ್ದರು. ಆದರೆ ನ್ಯಾಯಾಲಯ ಈ ಪ್ರಕರಣವನ್ನು ಅಪರೂಪವೆಂದು ಪರಿಗಣಿಸದೇ ಮರಣದಂಡನೆ ವಿಧಿಸಿಲ್ಲ. ಹೀಗಾಗಿ ಸದ್ಯ ಪ್ರತಾಪ್ ಜಿ ಅವರು ಅಪರಾಧಿಗೆ ಜೀವಾವಧಿ ಶಿಕ್ಷೆಯನ್ನು ಮರಣದಂಡನೆಗೆ ಹೆಚ್ಚಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಸಂತ್ರಸ್ತೆಯ ಕುಟುಂಬಸ್ಥರು ಮಾತನಾಡಿ, ಹೆಚ್ಚಿನ ಶಿಕ್ಷೆ ವಿಧಿಸಬಹುದಿತ್ತು, ಅಪರಾಧಿ ನನ್ನ ಮಗಳಿಗೆ 27 ಬಾರಿ ಚಾಕುವಿನಿಂದ ಇರಿದು ಕೊಂದಿದ್ದಾನೆ. ಅದೇ ನೋವನ್ನು ಈತ ಅನುಭವಿಸಬೇಕು ಎಂದು ಕಣ್ಣೀರುಹಾಕಿದ್ದಾರೆ.
ಆಗಿದ್ದೇನು?
ವೃತ್ತಿಯಲ್ಲಿ ಶಾಲಾ ಶಿಕ್ಷಕನಾಗಿದ್ದ ಸಂದೀಪ್ನನ್ನು 2023ರ ಮೇ 10ರಂದು ಪೊಲೀಸರು ವೈದ್ಯಕೀಯ ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ಕರೆ ತಂದಿದ್ದರು. ಈ ವೇಳೆ ಗಾಯವಾಗಿದ್ದ ಕಾಲಿಗೆ ವೈದ್ಯೆ ವಂದನಾ ಬ್ಯಾಂಡೇಜ್ ಹಾಕುತ್ತಿದ್ದರು. ಇದೇ ಸಮಯಕ್ಕೆ ಅಲ್ಲೇ ಇದ್ದ ಶಸ್ತ್ರಚಿಕಿತ್ಸಾ ಕತ್ತರಿಯಿಂದ ಸಂದೀಪ್ ಏಕಾಏಕಿ ಅಲ್ಲಿದ್ದ ಕೆಲವರ ಮೇಲೆ ಹಲ್ಲೆ ಮಾಡಿ, ಬಳಿಕ ವಂದನಾ ಮೇಲೆ 27 ಬಾರಿ ಇರಿದು, ಹಲ್ಲೆ ನಡೆಸಿದ್ದ.
ಕೂಡಲೇ ವೈದ್ಯೆ ವಂದನಾರನ್ನು ತಿರುವನಂತಪುರಂನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರು. ವಂದನಾ ಮೂಲತಃ ಕೊಟ್ಟಾಯಂ ಜಿಲ್ಲೆಯ ಕಾಡುತುರುತಿಯವರಾಗಿದ್ದು, ಅಜೀಜಿಯಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕಿಯಾಗಿದ್ದರು ಮತ್ತು ತರಬೇತಿಯ ಭಾಗವಾಗಿ ಕೊಟ್ಟಾರಕ್ಕರ ತಾಲ್ಲೂಕು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ಅಧಿಕಾರಿ ಆತ್ಮಹತ್ಯೆ ವಿವಾದ – ಪಂಜಾಬ್ ಸಚಿವ ಲಾಲ್ಜಿತ್ ಸಿಂಗ್ ರಾಜೀನಾಮೆ

