ಅಳತೆಗೆ ಸಿಗದ ಮಳೆ ಮಾಪನ ಕೇಂದ್ರಗಳು; ರೈತರ ಖಾತೆಗೆ ಇನ್ನೂ ಜಮೆಯಾಗಿಲ್ಲ 74 ಕೋಟಿ ಬೆಳೆ ವಿಮೆ

2 Min Read

ಕಾರವಾರ: ಅಬ್ಬರದ ಮಳೆ ಹೆಚ್ಚಿರುವ ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಮಳೆ ಮಾಪನಾ ಕೇಂದ್ರಗಳು (Rain Gauge Stations) ಕಳೆದ ಮೂರು ವರ್ಷದಿಂದ ಕಾರ್ಯನಿರ್ವಹಿಸದೇ ರೈತರಿಗೆ ಬರಬೇಕಾದ 74 ಕೋಟಿಗೂ ಹೆಚ್ಚು ವಿಮಾ ಹಣ ಬಾಕಿ ಉಳಿದಿದ್ದು, ರೈತರು ಹಾನಿಯಾದ ಬೆಳೆಗೆ ಪರಿಹಾರ ಸಿಗದೆ ಕಂಗೆಟ್ಟಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಅಕಾಲಿಕ ಮಳೆ, ಅತಿವೃಷ್ಟಿ-ಅನಾವೃಷ್ಟಿಗಳು ಬೆಳೆದ ಬೆಳೆ ರೈತನ ಕೈ ಸೇರುತ್ತಿಲ್ಲ. ಹಾಕಿದ ಅಸಲಾದರೂ ಬರಲಿ ಎಂದು ಬೆಳೆ ವಿಮೆ ಮಾಡಿಸಿದ ರೈತನಿಗೆ ಬೆಳೆ ವಿಮೆ ಸಹ ದಕ್ಕದಂತಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ರೈತನಿಗೆ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಆದ ಬೆಳೆ ನಷ್ಟಕ್ಕೆ ಇನ್ಸುರೆನ್ಸ್ ಕಂಪನಿಗಳು ಪರಿಹಾರ ಪಾವತಿ ಮಾಡುತ್ತಿಲ್ಲ. ಇದಕ್ಕೆ ಕಾರಣ ಜಿಲ್ಲೆಯಲ್ಲಿರುವ ಮಳೆ ಮಾಪನ ಕೇಂದ್ರಗಳು. ಉತ್ತರ ಕನ್ನಡ ಜಿಲ್ಲೆಯಲ್ಲಿ 253 ಮಳೆ ಮಾಪನ ಕೇಂದ್ರಗಳಿವೆ. ಇವುಗಳಲ್ಲಿ 103 ಕೇಂದ್ರದ ಯಂತ್ರಗಳು ಹಾಳಾಗಿದ್ದರೆ, ಉಳಿದ ಕೇಂದ್ರಗಳಲ್ಲಿ ನಿರ್ವಹಣೆ ಇಲ್ಲದೇ ಸಮರ್ಪಕ ಕೆಲಸ ಮಾಡುತ್ತಿಲ್ಲ. ಪ್ರತಿ ವರ್ಷ ಗ್ರಾಮಪಂಚಾಯ್ತಿ ವ್ಯಾಪ್ತಿಯ ಮಳೆ ಮಾಪನ ಕೇಂದ್ರದ ಮಾಹಿತಿ ಆಧರಿಸಿ ಬೆಳೆ ನಷ್ಟದ ವರದಿ ಆಧಾರದಲ್ಲಿ ಹಣ ಬಿಡುಗಡೆಯಾಗುತ್ತದೆ. ಆದರೆ, ಕಳೆದ ಮೂರು ವರ್ಷದಿಂದ ಆದ ನಷ್ಟಕ್ಕೆ ಈವರೆಗೂ ರೈತರಿಗೆ ಬೆಳೆ ನಷ್ಟದ ಪರಿಹಾರ ಬಂದಿಲ್ಲ. 2024 ರಲ್ಲಿನ ಒಂದು ಅವಧಿಯದ್ದೇ 74 ಕೋಟಿ ಬಾಕಿ ಇದೆ ಎನ್ನುತ್ತಾರೆ ಕೃಷಿ ಇಲಾಖೆ ನಿರ್ದೇಶಕ ಬಿ.ಪಿ ಸತೀಶ್. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಮನಸ್ಸು ಮಾಡಿದ್ರೆ ಕಲಬುರಿಯಲ್ಲಿ ಏರ್‌ಪೋರ್ಟ್ ಆರಂಭವಾಗುತ್ತೆ: ವಿಜಯೇಂದ್ರ ಲೇವಡಿ

ಸದ್ಯ ಈವರೆಗೆ 237.26 ಹೆಕ್ಟೇರ್ ಪ್ರದೇಶದ 357 ಮಾವು ಬೆಳೆದ ರೈತರಿಗೆ 2024-25 ರ ಹಂಗಾಮಿ ಹವಾಮಾನ ಆಧಾರಿತ ಬೆಳೆ ವಿಮೆ 1.22 ಕೋಟಿ ಖಾತೆಗೆ ಜಮೆಯಾಗಿದ್ದರೆ ಕಾಳುಮೆಣಸು ಹಾಗೂ ಅಡಿಕೆ ಬೆಳೆದ ರೈತರಿಗೆ 14 ಕೋಟಿ ಹಣ ಜಮೆಯಾಗುತ್ತಿದೆ. ಉಳಿದಂತೆ ಹಣ ಜಮೆ ಆಗಿಲ್ಲ.

ಮಳೆ ಮಾಪನ ಕೇಂದ್ರಗಳನ್ನು ಸರಿಪಡಿಸಬೇಕು ಎಂದು ರೈತರು ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಕೊನೆಪಕ್ಷ ಈಗಿರುವ ಕೇಂದ್ರದ ನಿರ್ವಹಣೆಯಾದರೂ ಮಾಡಿ ಎಂದರೆ ಅದು ಸಾಧ್ಯವಾಗಿಲ್ಲ. ರಾಜ್ಯದಲ್ಲಿ 1500 ಕ್ಕೂ ಹೆಚ್ಚು ಮಳೆ ಮಾಪನ ಕೇಂದ್ರಗಳಿವೆ. 20 ಕೋಟಿ ವೆಚ್ಚದಲ್ಲಿ ಹೊಸ ಯಂತ್ರ ಅಳವಡಿಕೆ ಮಾಡಲಾಗುತ್ತಿದೆ ಎನ್ನುತ್ತಾರೆ ಕಂದಾಯ ಸಚಿವರು. ಆದರೆ, ಬಜೆಟ್ ಮುಗಿದು ಬೇಸಿಗೆ ಪ್ರಾರಂಭವಾಗಿದೆ. ಮುಂದಿನ ಮಳೆಗಾಲದ ಒಳಗೆ ಮಳೆ ಮಾಪನ ಕೇಂದ್ರವನ್ನ ಸರಿಪಡಿಸುತ್ತೇವೆ ಎನ್ನುತ್ತಾರೆ ಸಚಿವ ಕೃಷ್ಣಬೈರೇಗೌಡ. ಇದನ್ನೂ ಓದಿ: ಟಿಕೆಟ್‌ ಘೋಷಣೆಗೂ ಮುನ್ನವೇ ಸಮರ್ಥ್‌ ಶಾಮನೂರು ನಾಮಪತ್ರ ಸಲ್ಲಿಕೆ

ಸದ್ಯ ಜಿಲ್ಲೆಯಲ್ಲಿ ಮಳೆ ಮಾಪನ ಕೇಂದ್ರಗಳು ಹಾಳು ಬಿದ್ದಿವೆ. ಮತ್ತೊಂದೆಡೆ ಅತಿವೃಷ್ಟಿಯಿಂದ ಸಾವಿರಾರು ಹೆಕ್ಟೇರ್ ಕೃಷಿ ಉತ್ಪನ್ನ ನಷ್ಟವಾಗಿದೆ. ಬೇಸಿಗೆಯಲ್ಲಿ ಬೆಳೆದ ಫಸಲು ಸಹ ನಷ್ಟವಾಗಿದೆ. ಹೀಗಿದ್ದರೂ ಮಳೆ ಮಾಪನ ಕೇಂದ್ರದ ಅವ್ಯವಸ್ಥೆಯಿಂದ ಇನ್ಸುರೆನ್ಸ್ ಕಂಪನಿಗಳು ಬೆಳೆ ನಷ್ಟದ ಹಣ ಬಿಡುಗಡೆಗೆ ಮಾಡಲು ಹಿಂಜರಿದಿದ್ದು, ಇದೀಗ ರೈತ ಕೃಷಿ ಚಟುವಟಿಕೆಯಿಂದ ವಿಮುಖವಾಗುವಂತೆ ಮಾಡಿದೆ. ಇನ್ನಾದರೂ ಸರ್ಕಾರ ಇತ್ತ ಗಮನಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.

Share This Article