ಬೆಂಗಳೂರು: ರಾಜ್ಯದ ಹಲವೆಡೆ ಇಂದೂ ಕೂಡ ಆಲಿಕಲ್ಲು ಮಳೆಯಾಗಿದೆ. ಹುಬ್ಬಳ್ಳಿಯಲ್ಲಿ ಒಂದು ಗಂಟೆಗೂ ಅಧಿಕ ಹೊತ್ತು ಸುರಿದ ಅಕಾಲಿಕ ಭಾರಿ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಅಲ್ಲಲ್ಲಿ ಕಾಶ್ಮೀರದಂತ ದೃಶ್ಯ ಕಂಡಿದೆ.
ಕಲಘಟಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಅಪಾರ ಮಳೆಯಾಗಿದ್ದು, ಕಾಶ್ಮೀರದಂತ ದೃಶ್ಯ ಕಂಡಿದೆ. ಹುಬ್ಬಳ್ಳಿ ನಗರ ಗೋಕುಲ ರಸ್ತೆಯಲ್ಲಿರುವ ಅರ್ಬನ್ ಓಯಸಿಸ್ ಮಾಲ್ನ ಮೇಲ್ಛಾವಣಿ ಕುಸಿದು ಬಿದ್ದಿದೆ. ಭಯದಿಂದ ಗ್ರಾಹಕರು ಮತ್ತು ಮಳಿಗೆಗಳ ವ್ಯಾಪಾರಿ, ಸಿಬ್ಬಂದಿ ಹೊರಬಂದು ಜೀವ ಉಳಿಸಿಕೊಂಡಿದ್ದಾರೆ. ಚೆನ್ನಮ್ಮ, ರಾಯಣ್ಣ ವೃತ್ತದ ರಸ್ತೆಗಳು ಜಲಾವೃತಗೊಂಡಿವೆ. ಇದನ್ನೂ ಓದಿ: ಹಾಸನದ ಮಿಡಿ ಸೌತೆ ಉದ್ಯಮಕ್ಕೆ ತಟ್ಟಿದ ಇರಾನ್ – ಇಸ್ರೇಲ್ ಯುದ್ಧದ ಬಿಸಿ
ಚಾಮರಾಜನಗರದ ಮರಿಯಾಲ, ಉಡೀಗಾಲ ಸೇರಿದಂತೆ ಹಲವು ಗ್ರಾಮದಲ್ಲಿ ಆಲಿಕಲ್ಲು ಮಳೆಯಾಗಿದೆ. ರಸ್ತೆಗಳ ಮೇಲೆ ಮಂಜಿನಗಡ್ಡೆಯಂತೆ ಆಲಿಕಲ್ಲು ರಾಶಿ ಸಂಗ್ರಹವಾಗಿದೆ. ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲೂ ಆಲಿಕಲ್ಲು ಸಹಿತ ಧಾರಾಕಾರ ಮಳೆಯಾಗಿದೆ. ಹುಬ್ಬಳ್ಳಿಯಲ್ಲೂ ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗಿದೆ.
ಇನ್ನು, ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನಲ್ಲೂ ಆಲಿಕಲ್ಲು ಮಳೆಯಾಗಿದೆ. ಕುಷ್ಟಗಿ ತಾಲೂಕಿನ ವಕ್ಕನದುರ್ಗಾ, ನಿಲೋಗಲ್, ರಾಂಪೂರ ಭಾಗದಲ್ಲಿ ಮಳೆಯಾಗಿದೆ. ನಿನ್ನೆಯಿಂದ ಕೊಪ್ಪಳ ಜಿಲ್ಲೆ ಸೇರಿ ಕೆಲವು ಕಡೆ ಮಳೆಯಾಗ್ತಿದೆ. ಚಿಕ್ಕಬಳ್ಳಾಪುರದಲ್ಲಿ ಮಳೆಯಾಗಿದೆ. ರಾತ್ರಿ ಕೂಡ ಹಾಸನದಲ್ಲಿ ಭಾರಿ ಆಲಿಕಲ್ಲು ಮಳೆ ಬಿದ್ದಿದೆ. ವಿಜಯಪುರ ಜಿಲ್ಲೆಯಾದ್ಯಂತ ಗುಡುಗು, ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಮುದ್ದೇಬಿಹಾಳ ಪಟ್ಟಣ ಹಾಗೂ ಸುತ್ತಮುತ್ತಲು ಆಲಿಕಲ್ಲು ಮಳೆ ಸುರಿದಿದೆ. ಬೇಸಿಗೆ ಬಿಸಿಲಿನಿಂದ ಕಂಗೆಟ್ಟಿದ್ದ ಜಿಲ್ಲೆಯ ಜನರು ರಿಲ್ಯಾಕ್ಸ್ ಆಗಿದ್ದಾರೆ.
ಬೆಂಗಳೂರಿನ ದಕ್ಷಿಣ ಭಾಗದ ಜಯನಗರ, ಗಿರಿನಗರ, ಬನಶಂಕರಿ ಪ್ರದೇಶದಲ್ಲಿ ಮಳೆಯಾಗಿದೆ. ಗಿರಿನಗರ ಸುತ್ತಮುತ್ತ 15 ನಿಮಿಷ ಆಲಿಕಲ್ಲು ಮಳೆಬಿದ್ದಿದೆ. ಪ್ರಬಲ ಗಾಳಿಯ ಒತ್ತಡದಿಂದ ಈ ರೀತಿ ಆಲಿಕಲ್ಲು ಮಳೆಯಾಗುತ್ತಿದ್ದು, ಇನ್ನು 4 ದಿನ ಇದೇ ಪರಿಸ್ಥಿತಿ ಇರಲಿದೆ ಅಂತ ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ:ಹೈವೇಯಲ್ಲಿ ಎರಡು ಥಾರ್ ಕಾರುಗಳ ಮಧ್ಯೆ ಅಪಘಾತ

