ಅಪರೂಪದಲ್ಲಿ ಅಪರೂಪ| ಸಚಿವರು, ಅಧಿಕಾರಿಗಳ ವಿರುದ್ಧ ಗರಂ – ಸಭಾತ್ಯಾಗ ನಡೆಸಿ ಹೊರನಡೆದ ಸ್ಪೀಕರ್‌ ಖಾದರ್‌

2 Min Read

ಬೆಂಗಳೂರು: ಸರ್ಕಾರದ ವಿರುದ್ಧ ಸಿಟ್ಟಾಗಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿ ಸಭಾತ್ಯಾಗ ಮಾಡುವುದು ಹೊಸದೆನಲ್ಲ. ಆದರೆ ಈ ಬಾರಿ ಅಪರೂಪದಲ್ಲಿ ಅಪರೂಪ ಎಂಬಂತೆ ವಿಧಾನಸಭಾ ಸ್ಪೀಕರ್‌(Vidhan Sabha Speaker) ಯುಟಿ ಖಾದರ್‌(U. T. Khader) ಅವರು ಸಭಾತ್ಯಾಗ ಮಾಡಿದ ಅಚ್ಚರಿಯ ಪ್ರಸಂಗ ನಡೆದಿದೆ.

ಸರ್ಕಾರದ ಸಚಿವರುಗಳು ಸಮರ್ಪಕ ಉತ್ತರ ನೀಡದೇ ಇರುವುದು, ಪದೇ ಪದೇ ಕಲಾಪಕ್ಕೆ ಗೈರಾಗುತ್ತಿರುವುದಕ್ಕೆ ಸಿಟ್ಟಾದ ಸ್ಪೀಕರ್‌ ಸಿಟ್ಟಾಗಿ ಅರ್ಧದಿಂದಲೇ ಕಲಾಪದಿಂದ ಹೊರ ನಡೆದರು.

ಗೃಹ ಸಚಿವ ಪರಮೇಶ್ವರ್‌ ಅವರು ಲಿಖಿತ ರೂಪದ 230 ಪ್ರಶ್ನೆಗಳ ಪೈಕಿ ಪೈಕಿ 84 ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದರು. ಇದಕ್ಕೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿ ಸದನ ಆರಂಭವಾದಾಗಿನಿಂದಲೂ ಸಚಿವರಿಂದ ಸರಿಯಾದ ಉತ್ತರ ಬರುತ್ತಿಲ್ಲ. ಸರ್ಕಾರ ಸತ್ತು ಹೋಗಿದೆ, ತಿಥಿ ಮಾಡಬೇಕು, ತಿಥಿ ಊಟಕ್ಕೆ ಹೋಗಬೇಕು ಅಂತ ಅಶೋಕ್ ಆಕ್ರೋಶ ಹೊರ ಹಾಕಿದರು.  ಇದನ್ನೂ ಓದಿ:  ದುಬೈನಲ್ಲಿ ಲ್ಯಾಂಡಿಂಗ್‌ಗೆ ಸಿಗದ ಅನುಮತಿ – ಬೆಂಗಳೂರಿಗೆ ಎಮಿರೇಟ್ಸ್ ವಿಮಾನ ವಾಪಸ್‌

 

ಸಚಿವರು ಗೈರಾಗಿದ್ದಕ್ಕೆ ಮೊದಲೇ ಸಿಟ್ಟಾಗಿದ್ದ ಸ್ಪೀಕರ್‌, ಸದನದಲ್ಲಿ ಶಾಸಕರು ಪ್ರಶ್ನೆ ಕೇಳುತ್ತಾರೆ. ಎಲ್ಲವೂ ಚುಕ್ಕೆ ಗುರುತಿನ ಪ್ರಶ್ನೆ ಆಗುವುದಿಲ್ಲ. ಚುಕ್ಕೆ ಗುರುತಿಲ್ಲದ ಪ್ರಶ್ನೆಯೇ ಜಾಸ್ತಿ ಬದಲಾಯಿಸುತ್ತಾರೆ. ಗಮನ ಸೆಳೆಯುವ ಸೂಚನೆಗೂ ಸಚಿವರು ಉತ್ತರ ನೀಡುವುದಿಲ್ಲ. ಸಚಿವರು ಹೀಗೆ ಮಾಡಿದರೆ ಹೇಗೆ? ಮೂರು ಸಲ ನಾನು ಸಚಿವರಿಗೆ ಹೇಳಿದರೂ ಸುಧಾರಣೆ ಕಂಡು ಬರುತ್ತಿಲ್ಲ. ಸಂಬಂಧಿಸಿದ ಸಚಿವರು ಬಂದು ಸ್ಪಷ್ಟತೆ, ಕಾರಣ ಕೊಡಬೇಕು. ಅಲ್ಲಿಯವರೆಗೂ ನಾನು ಸದನ ನಡೆಸುವುದಿಲ್ಲ ಎಂದು ಗರಂ ಆಗಿ ಹೇಳಿ ಸದನದಿಂದ ಎದ್ದು ಹೋದರು.

ಸ್ಪೀಕರ್‌ ಕೊಠಡಿಯಲ್ಲಿ ಚರ್ಚೆ
ಅರ್ಧದಿಂದ ಎದ್ದು ಹೋದ ಬೆನ್ನಲ್ಲೇ ಸ್ಪೀಕರ್ ಕೊಠಡಿಯಲ್ಲಿ ಸಿಎಂ, ಸಚಿವರು, ವಿಪಕ್ಷ ನಾಯಕರು ಯುಟಿ ಖಾದರ್‌ ಬಳಿ ಸಭೆ ನಡೆಸಿದರು. ಸ್ಪೀಕರ್ ಜೊತೆ ಖುದ್ದು ಸಿಎಂ ಸಿದ್ದರಾಮಯ್ಯ ಸಂಧಾನ ಮಾಡಿದರು. ಸ್ಪೀಕರ್ ಜೊತೆ ಕುಳಿತ ಸಚಿವರು ಸದನ ಸೂಕ್ತ ರೀತಿಯಲ್ಲಿ ನಡೆಸಲು ತಮ್ಮಿಂದ ಸಂಪೂರ್ಣ ಸಹಕಾರ ನಿಡುವ ಭರವಸೆ ನೀಡಿದರು. ಅಷ್ಟೇ ಅಲ್ಲದೇ ಶಾಸಕರ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುವ ಸ್ಪಷ್ಟನೆ ನೀಡಿದರು.

ಮೂವರು ಅಧಿಕಾರಿಗಳು ಸಸ್ಪೆಂಡ್‌
ಸಮರ್ಪಕ ಉತ್ತರ ಕೊಡದ ಸಚಿವರು, ಅಧಿಕಾರಿಗಳ ತಲೆದಂಡ ಮಾಡುವುದಾಗಿ ಎಚ್ಚರಿಕೆ ನೀಡಿದ ಸಿಎಂ ಮೂವರು ಅಧಿಕಾರಿಗಳ ಸಸ್ಪೆಂಡ್‌ಗೆ ಸೂಚಿಸಿದರು. ಅಷ್ಟೇ ಅಲ್ಲದೇ ಅತಿ ಹೆಚ್ಚು ಉತ್ತರ ಬಾಕಿ ಉಳಿಸಿಕೊಂಡಿರುವ ಇಲಾಖೆ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಹೇಳಿದರು. ಸಿಎಂ ಸೂಚನೆ ಬಳಿಕ ಖಾದರ್ ಸದನ ನಡೆಸಲು ಒಪ್ಪಿಕೊಂಡರು.

Share This Article