ಡಿಕೆಶಿ, ನನ್ನದು ಹಾಲು-ಜೇನಿನ ಸಂಬಂಧ, ಹುಳಿ ಹಿಂಡೋಕಾಗಲ್ಲ – ಕಾಂಗ್ರೆಸ್ ಪಕ್ಷದವ್ರೇ ಸಿಎಂ ಆಗಿರ್ತಾರೆ: ಸಿದ್ದರಾಮಯ್ಯ ತಿರುಗೇಟು

2 Min Read

ಬೆಂಗಳೂರು: ಡಿಕೆಶಿ ಹಾಗೂ ನನ್ನದು ಹಾಲು-ಜೇನಿನಂತಹ ಸಂಬಂಧ. ಯಾರಿಗೂ ಹುಳಿ ಹಿಂಡೋಕಾಗಲ್ಲ. ಕಾಂಗ್ರೆಸ್ (Congress) ಪಕ್ಷದದವರೇ ಸಿಎಂ ಆಗಿರುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ತಿರುಗೇಟು ನೀಡಿದ್ದಾರೆ.

ಡಿಕೆಶಿ ಮೇಲೆ ಕಣ್ಣಿಡಲು ಫೋನ್ ಕದ್ದಾಲಿಕೆ ಆರೋಪ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಅವರು ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದು, ಅಶೋಕ್, ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ. ತಾ ಕಳ್ಳ ಇತರರ ನಂಬ ಎಂಬ ಗಾದೆಯಂತೆ, ಇದೊಂದು ಅತೃಪ್ತ ಆತ್ಮಗಳ ಹತಾಶ ಹೇಳಿಕೆ. ನಿರುದ್ಯೋಗಿ ವಿರೋಧ ಪಕ್ಷದ ನಾಯಕರು ಇವರು. ನನ್ನ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಸಂಬಂಧಕ್ಕೆ ಹುಳಿ ಹಿಂಡಲು ಪ್ರಯತ್ನಿಸುತ್ತಿದ್ದಾರೆ. ಅದರೊಳಗೆ ತುಂಬಿಕೊಂಡಿರುವ ಹುಳಿ ಖಾಲಿಯಾಗಬಹುದೇ ಹೊರತು, ನಮ್ಮ ಹಾಲು-ಜೇನಿನಂತಹ ಸಂಬಂಧದ ಮೇಲೆ ಯಾವ ಪರಿಣಾಮವೂ ಆಗಲ್ಲ, ಇದು ನಿಮ್ಮಿಬ್ಬರಿಗೂ ತಿಳಿದಿರಲಿ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಹೆಚ್‌ಡಿಕೆಗೆ ಗೂಢಚರ್ಯೆಯ ಪಾಠ ಅವರ ತಂದೆಯೇ ಹೇಳಿಕೊಟ್ಟಿರಬಹುದು: ಸಿಎಂ ಕಿಡಿ

ಸುಳ್ಳು ಸುದ್ದಿಗಳನ್ನು ಹರಡಿ ನಮ್ಮಿಬ್ಬರ ಸಂಬಂಧವನ್ನು ಕೆಡಿಸಲು ಆಗಲ್ಲ. ಡಿಕೆಶಿ ಒಲಿಸಿಕೊಳ್ಳುವ ದುರಾಲೋಚನೆ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಇದ್ರೆ, ಅದು ಹಗಲು ಕನಸು. ಶಿವಕುಮಾರ್ ಒಬ್ಬ ಕಟ್ಟಾ ಕಾಂಗ್ರೆಸಿಗ. ಸುಳ್ಳು ಕೇಸ್‌ಗಳನ್ನು ಹಾಕಿ, ಜೈಲಿಗೆ ಕಳಿಸಿ ಅವರನ್ನು ಮಣಿಸುವ ಎಲ್ಲ ಪ್ರಯತ್ನಗಳನ್ನು ಬಿಜೆಪಿ ಮಾಡಿಯಾಗಿದೆ. ಇದಕ್ಕೆಲ್ಲ ಮಣಿಯದೆ ಅವರು ಪಕ್ಷಕ್ಕೆ ನಿಷ್ಠರಾಗಿ ಉಳಿದವರು. ಈ ಕುತಂತ್ರಿ ನಾಯಕರಿಗೆ ತಿಳಿದಿರಲಿ ಎಂದು ಕಿಡಿಕಾರಿದ್ದಾರೆ.

ಮಾಧ್ಯಮ ಹೇಳಿಕೆಯಲ್ಲಿ ಸಿದ್ದರಾಮಯ್ಯ ಖಡಕ್ ಸಂದೇಶ ರವಾನಿಸಿದ್ದು, ನಮ್ಮದು ಆಂತರಿಕ ಪ್ರಜಾಪ್ರಭುತ್ವ ಇರುವ ಪಕ್ಷ. ನಮ್ಮ ಶಾಸಕರಲ್ಲಿ ಯಾರೂ ಕೂಡಾ ನನ್ನ ಇಲ್ಲವೇ ಡಿ.ಕೆ.ಶಿವಕುಮಾರ್ ಬೆಂಬಲಿಗರಲ್ಲ. ಎಲ್ಲರೂ ಕಾಂಗ್ರೆಸ್ ಪಕ್ಷದ ಬೆಂಬಲಿಗರು. ಪಕ್ಷದ ಶಿಸ್ತಿನ ಚೌಕಟ್ಟಿನೊಳಗೆ ವೈಯಕ್ತಿಕವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸ್ತಾರೆ. ಜೊತೆಯಲ್ಲಿ ಊಟ-ತಿಂಡಿ ಮಾಡುವ ಎಲ್ಲ ಸ್ವಾತಂತ್ರ‍್ಯಗಳು ಅವರಿಗೆ ಇದೆ. ಆದರೆ ಯಾವ ಶಾಸಕರು ಏನನ್ನೇ ಹೇಳಿದರೂ ಅಂತಿಮವಾಗಿ ಹೈಕಮಾಂಡ್ ಆದೇಶಕ್ಕೆ ಬದ್ಧವಾಗಿರಬೇಕು. ಶಾಸಕರು ಸೇರಿದಂತೆ ನಾನು ಮತ್ತು ಶಿವಕುಮಾರ್ ನಮ್ಮ ಪಕ್ಷದ ಹೈಕಮಾಂಡ್ ಆದೇಶಕ್ಕೆ ತಲೆಬಾಗುವವರು ಇದನ್ನು ನಾವಿಬ್ಬರೂ ಒಂದಲ್ಲ ನೂರು ಬಾರಿ ಹೇಳಿದ್ದೇವೆ. ಇದೇ ಅಂತಿಮ ಸತ್ಯ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜಕೀಯ ವಿರೋಧಿಗಳಿಗೆ ಸಿಎಂ ಸಿದ್ದರಾಮಯ್ಯ ಚೌಕ್ ಕೊಟ್ಟಿದ್ದು, ಈ ಅವಧಿಯನ್ನ ಕಾಂಗ್ರೆಸ್ ಪಕ್ಷ ಪೂರ್ಣಗೊಳಿಸಲಿದೆ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯೇ ಇರುತ್ತಾರೆ ಎನ್ನುವ ಮೂಲಕ ಕುತೂಹಲ ಹುಟ್ಟುಹಾಕಿದ್ದಾರೆ. ನಾನೇ ಸಿಎಂ ಆಗಿ ಮುಂದುವರಿಯುತ್ತೇನೆ ಎಂದು ಹೇಳದ ಸಿಎಂ ಸಿದ್ದರಾಮಯ್ಯ ನಡೆ ವಿರೋಧಿಗಳನ್ನ ಚಿತ್ ಮಾಡುವ ತಂತ್ರವೋ? ಹೈಕಮಾಂಡ್ ತೀರ್ಮಾನದ ಆತಂಕವೋ? ಅಡ್ಡೇಟಿನ ಗೂಗ್ಲಿಯೋ? ಎಂಬ ಚರ್ಚೆ ಜೋರಾಗಿದೆ.ಇದನ್ನೂ ಓದಿ: ಬಲಿಷ್ಠ ಆರ್ಥಿಕತೆ ಹೊಂದಿದ ಭಾರತ ಜಗತ್ತಿಗೆ ದಾರಿದೀಪವಾಗಿ ಹೊರಹೊಮ್ಮಿದೆ: ಮೋದಿ

Share This Article