ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ ದ್ವಿಗುಣ: ಶರಣಪ್ರಕಾಶ ಪಾಟೀಲ್

3 Min Read

ಕಲಬುರಗಿ: ಕಳೆದ‌ ಡಿಸೆಂಬರ್ 2024ರಲ್ಲಿ 371 ಹಾಸಿಗೆಯೊಂದಿಗೆ ಹೊಸದಾಗಿ ನಿರ್ಮಿಸಲಾದ ಜಯದೇವ ಆಸ್ಪತ್ರೆಯ ನೂತನ ಕಟ್ಟಡದಲ್ಲಿ ಕಳೆದ ಒಂದು ವರ್ಷದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ ದ್ವಿಗುಣಗೊಂಡಿದ್ದು, ಇದು ಹೃದ್ರೋಗಿಗಳಿಗೆ ಮತ್ತು ಬಡವರಿಗೆ ವರದಾನವಾಗಿದೆ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ್ ತಿಳಿಸಿದರು.

ಶುಕ್ರವಾರ ನಗರದಲ್ಲಿ ಜಯದೇವ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಯೋಗಕ್ಷೇಮ ವಿಚಾರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿರುವುದರಿಂದ ಕಲಬುರಗಿ ಜಿಲ್ಲೆಯಷ್ಟೇ ಅಲ್ಲದೆ, ಪಕ್ಕದ ವಿಜಯಪುರ ಸೇರಿದಂತೆ ಪ್ರದೇಶದ ವಿವಿಧ ಜಿಲ್ಲೆಗಳಿಂದಲೂ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯಲು ಬರುತ್ತಿದ್ದಾರೆ ಎಂದರು.

ಕಳೆದ 2025ನೇ ಸಾಲಿನಲ್ಲಿ ಆಸ್ಪತ್ರೆಯಲ್ಲಿ ಓಪಿಡಿ ತೋರಿಸಿಕೊಂಡವರು 1,27,656. 2024ರಲ್ಲಿ ಇದರ‌ ಸಂಖ್ಯೆ 66,761 ಇತ್ತು. ಅಸ್ಪತ್ರೆಯಲ್ಲಿ ಗಣನೀಯವಾಗಿ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದು ಈ ಸಂಖ್ಯೆಯೆ ಕಾರಣವಾಗಿದೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಇಸಿಜಿ 4,71,676 ಪರೀಕ್ಷೆಗಳನ್ನು ನಡೆಸಲಾಗಿದೆ. 2D-ಎಕೋ ಪರೀಕ್ಷೆಗಳ ಸಂಖ್ಯೆ ಕೂಡ 3 ಲಕ್ಷದ ಗಡಿಯನ್ನು ತಲುಪಿದೆ. ಆಸ್ಪತ್ರೆ ಆರಂಭವಾಗಿನಿಂದ ಇಲ್ಲಿಯವರೆಗೆ (2016-2025 ) 10 ವರ್ಷಗಳ ಅವಧಿಯಲ್ಲಿ ಓಪಿಡಿ ಚಿಕಿತ್ಸೆ ಪಡೆದವರು 6,68,865. 4,71,676‌ ಜನ ಇ.ಸಿ.ಜಿ ಪರೀಕ್ಷೆಗಳನ್ನು ಮಾಡಿಸಿಕೊಂಡಿದ್ದಾರೆ. 2ಡಿ-ಎಕೋ ಮಾಡಿಕೊಂಡವರು 3,09,950, ಟಿ.ಎಂ.ಟಿ ಮಾಡಿಕೊಂಡವರು 22,890, ಎಕ್ಸ್ರೇ ಮಾಡಿಕೊಂಡವರು 61,907, 44,649 ಜನ ಕ್ಯಾತಲಾಬ್ ಹಾಗೂ 1,782 ಜನರು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. 2020ರಲ್ಲಿ ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದ ರೋಗಿಗಳ ಸಂಖ್ಯೆಯಲ್ಲಿ ತಾತ್ಕಾಲಿಕ ಕುಸಿತ ಕಂಡುಬಂದರೂ 2021 ರಿಂದ ಚೇತರಿಕೆ ಕಂಡುಬಂದಿದೆ. ಪ್ರತಿ ವರ್ಷ ರೋಗಿಗಳ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗುತ್ತಿದೆ ಎಂದು ಆಸ್ಪತ್ರೆಯ ಸೇವೆ ಕುರಿತು ಅಂಕಿಸಂಖ್ಯೆಯೊಂದಿಗೆ ಡಾ.ಶರಣಪ್ರಕಾಶ ಪಾಟೀಲ್ ತಿಳಿಸಿದರು.

ಕಲಬುರಗಿ ನಗರದಲ್ಲಿ ಅರೋಗ್ಯ ವ್ಯವಸ್ಥೆ ಸುಧಾರಣೆಗೆ ನಮ್ಮ ಸರ್ಕಾರ ಹೆಚ್ಚಿನ ಒತ್ತು ನೀಡಿದೆ. ಕ್ಯಾನ್ಸರ್ ಆಸ್ಪತ್ರೆ, ತೀವ್ರ‌ ನಿಗಾ ಘಟಕ, ಸುಟ್ಟು ಗಾಯಗಳ ಘಟಕ, ತಾಯಿ-ಮಕ್ಕಳ ಆಸ್ಪತ್ರೆ ಕಾಮಗಾರಿ ಭರದಿಂದ ಸಾಗಿವೆ. ಇದಲ್ಲದೆ ನಿಮ್ಹಾನ್ಸ್ ಶಾಖೆ, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ಡಯಾಬಿಟಾಲಜಿ ಇನ್‌ಸ್ಟಿಟ್ಯೂಟ್ ಸೇರಿದಂತೆ ಹಲವು ಆರೋಗ್ಯ ಕೇಂದ್ರಗಳನ್ನು ಸಹ ಸ್ಥಾಪಿಸಲಾಗುತ್ತಿದೆ ಎಂದರು.

ಇದಲ್ಲದೆ ರಾಯಚೂರಿನಲ್ಲಿ ಕ್ಯಾನ್ಸರ್ ಆಸ್ಪತ್ರೆ ಮತ್ತು ಟ್ರಾಮಾ ಸೆಂಟರ್ ಎರಡು ಕಾಮಗಾರಿಗಳು ಪ್ರಗತಿಯಲ್ಲಿದೆ. ಬೀದರ್‌ನಲ್ಲಿಯೂ ಡಯಾಲಿಸಿಸ್ ಘಟಕವನ್ನು ಪ್ರಾರಂಭಿಸಲಾಗಿದೆ. ಬಳ್ಳಾರಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಒಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಜನರ ಕಲ್ಯಾಣಕ್ಕಾಗಿ ಶಿಕ್ಷಣ, ಆರೋಗ್ಯ ರಂಗಗಳಲ್ಲಿ ಸುಧಾರಣೆಗೆ ಹೊಸ ಹೊಸ ಯೋಜನೆಗಳನ್ನು ತರಲಾಗುತ್ತಿದೆ ಎಂದರು.

ಬಳ್ಳಾರಿಯಲ್ಲಿ ಸ್ಕಿಲ್ ಪಾರ್ಕ್ ಯೋಜನೆಗೆ ಸಂಡೂರಿನಲ್ಲಿ 50 ಎಕರೆ ಜಾಗವನ್ನು ಗುರುತಿಸಲಾಗಿದ್ದು, ಈ ಯೋಜನೆಗೆ ಕೆಎಂಆರ್‌ಸಿಯಲ್ಲಿ ಅನುಮೋದನೆ ದೊರೆತಿದೆ. ಕಲಬುರ್ಗಿ ವಿಶ್ವವಿದ್ಯಾಲಯದಲ್ಲಿ ಮಲ್ಟಿ ಸ್ಕಿಲ್ ಡೆವಲಪ್‌ಮೆಂಟ್‌ ಸೆಂಟರ್ ತಾತ್ಕಾಲಿಕ ತೆರೆದು ತರಬೇತಿ ನೀಡುತ್ತಿದ್ದು, 120 ಕೋಟಿ ರೂ. ವೆಚ್ಚದಲ್ಲಿ 25 ಎಕರೆ ಪ್ರದೇಶದಲ್ಲಿ ಹೊಸದಾಗಿ ಕಟ್ಟಡ ನಿರ್ಮಾಣ ಕಾರ್ಯವು ಪ್ರಗತಿಯಲ್ಲಿದೆ. ಈ ಕೇಂದ್ರದ ಸ್ಥಾಪನೆಯಿಂದ ಭವಿಷ್ಯದಲ್ಲಿ ಪ್ರತಿ ವರ್ಷ 2,000 ವಿದ್ಯಾರ್ಥಿಗಳಿಗೆ ಉದ್ಯೋಗ ಆಧಾರಿತ ಮತ್ತು ಕೈಗಾರಿಕೆ ಬೇಡಿಕೆ ಅನುಗುಣವಾಗಿ ಕೌಶಲ್ಯ ತರಬೇತಿ ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಕೇಂದ್ರದ ತಾರತಮ್ಯ, ಕಲಬುರಗಿ ವಿಮಾನ ನಿಲ್ದಾಣ ಕಾರ್ಯಾಚರಣೆ ಸ್ಥಗಿತ:
ಕಲಬುರಗಿ ವಿಮಾನ ನಿಲ್ದಾಣ ಕಾರ್ಯಾಚರಣೆ ಸ್ಥಗಿತ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಸರ್ಕಾರದ ತಾರತಮ್ಯ ಧೋರಣೆಯಿಂದ ವಿಮಾನಗಳ ಸಂಚಾರ ಸ್ಥಗಿತಗೊಂಡಿದೆ. ಮಲ್ಲಿಕಾರ್ಜುನ ಖರ್ಗೆ ಅವರ‌ ವಿಶೇಷ ಆಸಕ್ತಿಯಿಂದ ರಾಜ್ಯ ಸರ್ಕಾರವೇ ಸಂಪೂರ್ಣ ಅನುದಾನ ಭರಿಸಿ 700 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಸೌಲಭ್ಯದೊಂದಿಗೆ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಕೇಂದ್ರ ಸರ್ಕಾರವು ತಾರತಮ್ಯ ಧೋರಣೆ ಬಿಟ್ಟು ವಿಮಾನ ಸಂಚಾರ ಆರಂಭಿಸಬೇಕು ಎಂದು ಹೇಳಿದರು.

53,000 ಹುದ್ದೆಗಳ ಭರ್ತಿಗೆ ನಿರ್ಧಾರ:
ಇತ್ತೀಚೆಗೆ ಜರುಗಿದ ಕ್ಯಾಬಿನೆಟ್‌ನಲ್ಲಿ 53,000 ಹುದ್ದೆ ಭರ್ತಿಗೆ ಒಪ್ಪಿಗೆ ಸಿಕ್ಕಿದೆ. ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲು ಸರ್ಕಾರ ಬದ್ಧವಾಗಿದೆ. ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದ ನೇಮಕಾತಿಗಳಿಗೆ ಸಂಬಂಧಿಸಿದಂತೆ ಇಲಾಖೆಗಳು ನೇರವಾಗಿ ಕ್ರಮ ಕೈಗೊಳ್ಳಲು ಅಧಿಕಾರ ನೀಡಲಾಗಿದೆ. ಇದಕ್ಕಾಗಿ ಹಣಕಾಸು ಇಲಾಖೆಯ ವಿಶೇಷ ಅನುಮೋದನೆಯ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಪ್ರಭಾರಿ ವೈದ್ಯಕೀಯ ಅಧೀಕ್ಷಕ ಡಾ. ವೀರೇಶ್ ಪಾಟೀಲ್, ಆಡಳಿತಾಧಿಕಾರಿ ಡಾ.ರುದ್ರಪ್ಪ‌ ಗುಗ್ವಾಡ್, ವೈದ್ಯ ಡಾ.ಅರುಣ್ ಕುಮಾರ್ ಹರಿದಾಸ್, ಲೈಸನ್ ಅಧಿಕಾರಿ ಸಂತೋಷ್ ಉಪಸ್ಥಿತರಿದ್ದರು.

Share This Article