ವಿಶ್ವಕಪ್ ಸೂಪರ್ 8ರಲ್ಲಿ ಇಂದಿನಿಂದ ಮಹಾಕದನ – ಸೂಪರ್ ಸಂಡೇಯಂದೇ ದಕ್ಷಿಣ ಆಫ್ರಿಕಾ v/s ಭಾರತ

2 Min Read

– ಅಹಮದಬಾದ್ ಸ್ಟೇಡಿಯಂನಲ್ಲಿ ಸಿದ್ಧವಾಗಿದೆ ರಣಾಂಗಣ

ಮುಂಬೈ: ಟಿ20 ವಿಶ್ವಕಪ್‌ನಲ್ಲಿ ಲೀಗ್ ಮ್ಯಾಚ್‌ಗಳು ಮುಗಿದಿದ್ದು, ಬಲಿಷ್ಠ 8 ತಂಡಗಳು ಸೂಪರ್ 8 ಪ್ರವೇಶಿಸಿವೆ. ಅಖಾಡದಲ್ಲಿ ಮಾಡು ಇಲ್ಲವೇ ಮಡಿ ಅಗ್ನಿಪರೀಕ್ಷೆ ಶುರುವಾಗಿದೆ. ಅಹಮದಬಾದ್ ಸ್ಟೇಡಿಯಂನಲ್ಲಿ ಭಾರತ-ದಕ್ಷಿಣ ಆಫ್ರಿಕಾ ಪಂದ್ಯಕ್ಕೆ ರಣಾಂಗಣ ಸಿದ್ಧವಾಗಿದೆ.

ಭಾರತ-ದಕ್ಷಿಣ ಆಫ್ರಿಕಾ ನಡುವೆ ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಎರಡು ತಂಡಗಳು ಲೀಗ್ ಮ್ಯಾಚ್‌ಗಳಲ್ಲಿ ಆಡಿರುವ ಎಲ್ಲಾ ಪಂದ್ಯಗಳನ್ನು ಗೆದ್ದು ಸೂಪರ್ 8ಕ್ಕೆ ಲಗ್ಗೆ ಹಾಕಿವೆ. ಹಾಗಾಗಿ, ಇಂದಿನ ಕದನ ಕುತೂಹಲ ಕೆರಳಿಸಿದೆ.

ಟೀಂ ಇಂಡಿಯಾ ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿದೆ. ಆದರೆ, ಆರಂಭಿಕ ಸ್ಫೋಟಕ ಬ್ಯಾಟ್ಸ್ಮನ್ ಫಾರ್ಮ್ನಲ್ಲಿ ಇಲ್ಲದೇ ಇರೋದು ಟೀಂ ಇಂಡಿಯಾವನ್ನ ಚಿಂತಿಗೀಡು ಮಾಡಿದೆ. ಆಡಿದ 3 ಪಂದ್ಯಗಳಲ್ಲೂ ಅಭಿಷೇಕ ಶರ್ಮಾ ಶೂನ್ಯಕ್ಕೆ ನಿರ್ಗಮಿಸಿದ್ದಾರೆ. ಹಾಗಾಗಿ, ಇಂದಿನ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಬ್ಯಾಟ್ ಅಬ್ಬರಿಸಬೇಕಿದೆ. ಇನ್ನುಳಿದಂತೆ ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ತಿಲಕ್‌ವರ್ಮಾ, ದುಬೆ, ರಿಂಕು ಸಿಂಗ್ ಎದುರಾಳಿಗಳ ನಿದ್ದೆಗೆಡಿಸಿದ್ದಾರೆ. ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಸಖತ್ ಫಾರ್ಮ್ನಲ್ಲಿದ್ದಾರೆ. ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ಬೂಮ್ರಾ ತಂಡದ ಟ್ರಂಪ್‌ಕಾರ್ಡ್ ಆಗಿದ್ದಾರೆ.

2024ರ ವಿಶ್ವಕಪ್ ಫೈನಲ್ ಪಂದ್ಯದ ಸೋಲಿನ ಸೇಡು ತೀರಿಸಿಕೊಳ್ಳಲು ಹರಿಣಗಳು ಹಪಹಪಿಸುತ್ತಿವೆ. ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ವಿಶ್ವಕಪ್ ಎತ್ತಿಹಿಡಿದಿತ್ತು. ಈ ಸೋಲಿಗೆ ಸೇಡು ತೀರಿಸಿಕೊಳ್ಳಲು ದಕ್ಷಿಣ ಆಫ್ರಿಕಾ ರಣತಂತ್ರ ರೂಪಿಸಿದೆ. ಆದರೆ, ಅಷ್ಟು ಸುಲಭ ಅಲ್ಲ ಅನ್ನೋದು ಹರಿಣಗಳಿಗೂ ಗೊತ್ತಿದೆ. ಬ್ಯಾಟಿಂಗ್, ಬೌಲಿಂಗ್ ಎರಡು ವಿಭಾಗದಲ್ಲೂ ದಕ್ಷಿಣ ಆಫ್ರಿಕಾ ಬಲಿಷ್ಠವಾಗಿದೆ. ಆಡಮ್ ಮರ್ಕರಾಮ್, ಡಿ ಕಾಕ್, ಮಿಲ್ಲರ್, ಬ್ರೇವಿಸ್ ಬೆಟ್ಟಿಂಗ್ ಬೆನ್ನೆಲುಬಾಗಿದ್ದಾರೆ. ಸ್ಟಬ್, ಜಾನ್ಸನ್ ಬ್ಯಾಟಿಂಗ್ ಅಲ್ಲದೇ ಬೌಲಿಂಗ್‌ನಲ್ಲೂ ಕೈಚಳ ತೋರುತ್ತಿರುವುದು ತಂಡದ ಪ್ಲಸ್ ಪಾಯಿಂಟ್. ರಬಡ, ಎನ್‌ಗಿಡಿ, ಕೇಶವ ಮಹರಾಜ್ ಬೌಲಿಂಗ್ ನೊಗ ಹೊತ್ತಿದ್ದಾರೆ. ಭಾರತವನ್ನ ಕಟ್ಟಿಹಾಕಲು ರಣಾಭ್ಯಾಸ ನಡೆಸಿದ್ದಾರೆ.

ಟಿ-20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದೇ ಮೇಲುಗೈ
ವಿಶ್ವಕಪ್‌ನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು 7 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಟೀಂ ಇಂಡಿಯಾ 5 ಬಾರಿ ಗೆದ್ದಿದ್ದರೆ, ಸೌಥ್ ಆಫ್ರಿಕಾ ಕೇವಲ 2 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿದೆ.

Share This Article