ಬೆಂಗಳೂರು: ಬಳ್ಳಾರಿ ವಿಷಯ ರಾಜ್ಯದಲ್ಲಿ ದೊಡ್ಡ ಸದ್ದು ಮಾಡುವ ಸಂದರ್ಭದಲ್ಲೇ ಶಿಡ್ಲಘಟ್ಟದಲ್ಲೂ (Sidlaghatta) ಬ್ಯಾನರ್ ಹಾಕಿದ್ದಾರೆ. ಬ್ಯಾನರ್ ಹಾಕಲು ಅನುಮತಿ ಪಡೆದಿದ್ದೀರಾ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಪ್ರಶ್ನಿಸಿದ್ದಾರೆ. ಪತ್ರವನ್ನೂ ನೀಡಿಲ್ಲ, ಹಣ ಕಟ್ಟಿಲ್ಲ, ಅನುಮತಿ ಪಡೆದಿಲ್ಲ ಎಂದು ಕಮಿಷನರ್ ಹೇಳಿದ್ದಾಗಿ ಗಮನ ಸೆಳೆದರು.
ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ಅಟ್ಟಹಾಸ ರಾಜ್ಯದಲ್ಲಿ ಹೆಚ್ಚಾಗಿದೆ. ದರ್ಪ ಹೆಚ್ಚಾಗಿದೆ. ಮುಖ್ಯಮಂತ್ರಿಗಳು ರಾಜೀವ್ ಗೌಡರನ್ನು ಬಂಧಿಸಬೇಕು. ಕಾನೂನು ಕೈಗೆತ್ತಿಕೊಳ್ಳುವ ಮಾತನಾಡಿದ ಇವರನ್ನು ಗೂಂಡಾ ಕಾಯ್ದೆ ಅಡಿಯಲ್ಲಿ ತಕ್ಷಣ ಬಂಧಿಸಬೇಕು. ಇಲ್ಲವಾದರೆ, ಇದನ್ನು ನಾವು ರಾಜ್ಯಮಟ್ಟದ ವರೆಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಶಿಡ್ಲಘಟ್ಟದ ಪೌರಾಯುಕ್ತೆಗೆ ಅಶ್ಲೀಲ ನಿಂದನೆ – ʻಕೈʼ ಮುಖಂಡನ ಬಂಧಿಸುವಂತೆ ಸಿಎಸ್ಗೆ ಹೆಚ್ಡಿಕೆ ಆಗ್ರಹ
ಕಾಂಗ್ರೆಸ್ ನಾಯಕರು ಇಂಥ ದುಂಡಾವರ್ತಿ ಮಾಡುವುದು ಸರಿಯೇ ಎಂದು ಕೇಳಿದರು. ನಿಂದನೆಯ ಹಿನ್ನೆಲೆಯಲ್ಲಿ ಪೌರಕಾರ್ಮಿಕರೂ ಅಲ್ಲಿ ಧರಣಿ ಕುಳಿತಿದ್ದಾರೆ. ಇದನ್ನು ಬಿಜೆಪಿ ವಿಶೇಷ ಆದ್ಯತೆ ಮೇಲೆ ತೆಗೆದುಕೊಳ್ಳಲಿದೆ. ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಇವತ್ತು ಬೆಳಗ್ಗೆಯಿಂದ ಮಾಧ್ಯಮಗಳಲ್ಲಿ ಶಿಡ್ಲಘಟ್ಟದಲ್ಲಿ ನಡೆದ ಬ್ಯಾನರ್ ವಿಚಾರಕ್ಕೆ ಕಾಂಗ್ರೆಸ್ಸಿನ ಮುಖಂಡ ರಾಜೀವ್ ಗೌಡ ಎಂಬ ವ್ಯಕ್ತಿ ಅಲ್ಲಿನ ಮುನ್ಸಿಪಲ್ ಕಮಿಷನರ್ರನ್ನು ವಾಚಾಮಗೋಚರವಾಗಿ ನಿಂದಿಸಿದ್ದಲ್ಲದೇ, ಬೆಂಕಿ ಹಚ್ಚಿ ಸುಟ್ಟು ಬಿಡುವ ಬೆದರಿಕೆ ಹಾಕಿದ್ದು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಪರಿಶಿಷ್ಟ ಜಾತಿ ವರ್ಗಗಳಿಗೆ ಸೇರಿದ ಪೌರ ಕಾರ್ಮಿಕರನ್ನೂ ಕೆಟ್ಟ ಭಾಷೆಯಲ್ಲಿ ನಿಂದಿಸಿ, ಎಲ್ಲರನ್ನೂ ಶಿಡ್ಲಘಟ್ಟ ಬಿಡಿಸಿ ಓಡಿಸುವೆ ಅಂತ ಬ್ಯಾನರ್ ಕಿತ್ತು ಹಾಕಿದವರ ವಿರುದ್ಧ ಕೆಟ್ಟ ಪದ ಬಳಸಿದ್ದಾಗಿ ಆಕ್ಷೇಪಿಸಿದರು.
ಅಧಿಕಾರಿಯನ್ನು ಹೀಗೆ ನಿಂದಿಸಲು ಇವರಿಗೆ ಅಧಿಕಾರ ಕೊಟ್ಟವರು ಯಾರು? ಕಾಂಗ್ರೆಸ್ ಅಧಿಕಾರದಲ್ಲಿ ಇದ್ದ ತಕ್ಷಣ ಈ ರೀತಿ ನಾಲಿಗೆ ಹರಿಬಿಡುವುದು ಸರಿಯೇ ಎಂದು ಕೇಳಿದರು. ಈಚೆಗೆ ಬ್ಯಾನರ್ ವಿಚಾರದಲ್ಲಿ ರಾಜ್ಯದ ಬಳ್ಳಾರಿಯಲ್ಲಿ ಕೊಲೆಯೂ ಆಗಿದೆ ಎಂದು ಗಮನ ಸೆಳೆದರು. ಅಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್, ಗುಂಡಿಗೆ ಸಿಕ್ಕಿ ಕೊಲೆಯಾದುದನ್ನು ಗಮನಿಸಿದ್ದೇವೆ. ಅಲ್ಲಿ ಕಾಂಗ್ರೆಸ್ಸಿನವರೇ ಕೊಲೆ ಮಾಡಿ ಬಿಜೆಪಿ ಮುಖಂಡರ ಮೇಲೆ ಅದನ್ನು ಹಾಕಲು ಪ್ರಯತ್ನ ಮಾಡಿದ್ದರು ಎಂದು ಟೀಕಿಸಿದರು.
ಹೆಣ್ಮಕ್ಕಳನ್ನು ಅಶ್ಲೀಲ ಪದ ಬಳಸಿ ನಿಂದಿಸಿದ್ದಾರೆ. ಜೊತೆಗೆ ದಂಗೆ ಎಬ್ಬಿಸುವುದಾಗಿ ಹೇಳಿದ್ದಾರೆ. ಆ ಪದ ಬಳಸುವಂತಿಲ್ಲ. ದಂಗೆ ಎಬ್ಬಿಸುವ ಪದ ಬಳಸಿದ್ದಕ್ಕೆ ಪೊಲೀಸ್ ಮಹಾ ಸಂಘದ ಅಧ್ಯಕ್ಷ ಶಶಿಧರ್ರನ್ನೇ ಕಾಂಗ್ರೆಸ್ ಸರ್ಕಾರ 6 ತಿಂಗಳು ಜೈಲಿನಲ್ಲಿ ಇಟ್ಟಿತ್ತು. ಈಗ ನೀವು ಇವರನ್ನು ಜೈಲಿನಲ್ಲಿ ಇಡಬೇಕೇ ಬೇಡವೇ ಎಂದು ಕೇಳಿದರು. ಭದ್ರಾವತಿಯ ಶಾಸಕರ ಮಗನೂ ಇದೇ ರೀತಿ ಹೆಣ್ಮಗಳನ್ನು ಇಂಥ ಪದ ಬಳಸಿ ನಿಂದಿಸಿದ್ದರು ಎಂದು ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಮುಖಂಡನಿಂದ ಮಹಿಳಾ ಅಧಿಕಾರಿಗೆ ಧಮ್ಕಿ- ಕ್ರಮಕ್ಕೆ ಜೆಡಿಎಸ್ ಒತ್ತಾಯ
ಬಳ್ಳಾರಿಯಲ್ಲಿ ಅವರದೇ ಗನ್, ಅವರದೇ ಗನ್ಮ್ಯಾನ್, ಅವರದೇ ಗುಂಡು. ಅವರೇ ಕೊಲೆ ಮಾಡಿ ನಮ್ಮ ಮೇಲೆ ಅದನ್ನು ಹಾಕಲು ಪ್ರಯತ್ನಿಸಲಿಲ್ಲವೇ? ಆ ಕಾರಣದಿಂದ ರಾಜ್ಯದ ಹಿತ ಕಾಪಾಡಬೇಕಾದ ವಿಪಕ್ಷಗಳು ಸುಮ್ಮನೆ ಕುಳಿತಿರಲು ಸಾಧ್ಯವಿಲ್ಲ. ಕಾಂಗ್ರೆಸ್ ಬೆದರಿಕೆಗಳಿಗೆ ಯಾರೂ ಜಗ್ಗಬೇಕಿಲ್ಲ ಎಂದರು.
ಮುಖ್ಯ ಕಾರ್ಯದರ್ಶಿಗಳು ತಕ್ಷಣ ಕಾರ್ಯೋನ್ಮುಖರಾಗಬೇಕು:
ಮುಖ್ಯ ಕಾರ್ಯದರ್ಶಿಗಳು ತಕ್ಷಣ ಕಾರ್ಯೋನ್ಮುಖರಾಗಬೇಕು. ನೀವು ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯಬಾರದು. ನಿಮಗೆ ನಿಮ್ಮದೇ ಆದ ಅಧಿಕಾರ ಇದೆ. ಸರ್ಕಾರ ತಪ್ಪು ಮಾಡಿದಾಗ ಅದನ್ನು ತಿದ್ದಿ ಬುದ್ಧ್ಧಿ ಹೇಳುವ ಕೆಲಸವನ್ನು ತಾವು ಮಾಡಬೇಕು ಎಂದು ಆಗ್ರಹಿಸಿದರು. ಇದನ್ನು ಮಾಡದೇ ಇದ್ದರೆ ನಾವು ತಮ್ಮ ವಿರುದ್ಧವೂ ಹೋರಾಟ ಮಾಡುವ ಸಂದರ್ಭ ಬರಬಹುದು ಎಂದು ತಿಳಿಸಿದರು.
ಬೇರೆಯವರನ್ನು ಟಾರ್ಗೆಟ್ ಮಾಡಲು ಸರ್ಕಾರ ಮಾಡುತ್ತೀರಾ?
ನೀವು ಇಂಥವರ ಮೇಲೆ ಕ್ರಮ ಕೈಗೊಳ್ಳುವುದಿಲ್ಲ. ಯಾದಗಿರಿಯಲ್ಲಿ ರಾಷ್ಟ್ರೀಯ ಆಟಗಾರ ಸ್ಟೇಡಿಯಂ ಸಂಬಂಧ ಧರಣಿ ಮಾಡಿದ್ದರು. ಅವರ ವಿರುದ್ಧ ಪಕ್ಕದ ಗುಲ್ಬರ್ಗ ಜಿಲ್ಲೆಯ ಸಚಿವ ಪ್ರಿಯಾಂಕ್ ಖರ್ಗೆಯವರು ಎಫ್ಐಆರ್ ಮಾಡಿಸಿದ್ದರು. ಆತ ಕೂಡ ದಲಿತ. ನಾನು ನ್ಯಾಯಬದ್ಧವಾಗಿಯೇ ಇದನ್ನು ಮಾಡಿದ್ದಾಗಿ ಹೇಳಿದ್ದು, ಇದು ಸೋಷಿಯಲ್ ಮೀಡಿಯದಲ್ಲಿ ಬಂದಿದೆ. ನಮ್ಮಂಥವರ ಮೇಲೆ ಹೀಗೆ ಮಾಡುವುದು ತಪ್ಪೆಂದು ಅವರು ಎಚ್ಚರಿಸಿದ್ದಾರೆ. ನಮ್ಮ ಪಕ್ಷದ ಶಕುಂತಲಾ ನಟರಾಜ್ ಎಂಬ ಮಹಿಳೆಯ ಸೋಷಿಯಲ್ ಮೀಡಿಯದಲ್ಲಿ ಬಂದುದನ್ನು ಮರು ಪೋಸ್ಟ್ ಮಾಡಿದ್ದಾರೆ. ಇದೀಗ ಶಕುಂತಲಾ ವಿರುದ್ಧ ಗುಲ್ಬರ್ಗದಲ್ಲಿ ದೂರು ಕೊಟ್ಟಿದ್ದಾರೆ. ಎಷ್ಟನೇ ಸಲ ಹೀಗೆ ಮಾಡುತ್ತಿದ್ದೀರಿ ಎಂದು ಕೇಳಿದರು. ನಮ್ಮ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತೀರಿ. ಆದರೆ, ಈ ರೀತಿ ಬೀದಿಯಲ್ಲಿ ನಿಂತು ವಾಚಾಮಗೋಚರವಾಗಿ ನಿಂದಿಸುವವರನ್ನು ನೀವು ಸುಮ್ಮನೇ ಬಿಡುವುದಾದರೆ, ನಿಮ್ಮ ಸರ್ಕಾರ ಯಾಕೆ ಮಾಡುತ್ತೀರಿ? ಬೇರೆಯವರನ್ನು ಟಾರ್ಗೆಟ್ ಮಾಡಲು ಮಾಡುತ್ತೀರಾ ಎಂದು ಕೇಳಿದರು.


