ಆನೇಕಲ್: ಇಲ್ಲಿನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಾಲೇಜು ಪ್ರಾಂಶುಪಾಲ ಸೇರಿ 7 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮೃತಳನ್ನು ಪರಿಮಳ-ಭೋದೆವಯ್ಯ ದಂಪತಿಯ ಮಗಳು ಯಶಸ್ವಿನಿ(23) ಎಂದು ಗುರುತಿಸಲಾಗಿದ್ದು, ಬೊಮ್ಮನಹಳ್ಳಿ ಖಾಸಗಿ ಕಾಲೇಜಿನ ಓರಲ್ ಮೆಡಿಸಿನ್ ಮತ್ತು ರೆಡಿಯಾಲಜಿ ವಿಭಾಗದಲ್ಲಿ 3ನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್ – ಡೆತ್ನೋಟ್ ಪತ್ತೆ, ನನ್ನ ಸಾವಿಗೆ ಯಾರು ಕಾರಣರಲ್ಲ ಎಂದು ಬರೆದಿಟ್ಟಿದ್ದ ಯಶಸ್ವಿನಿ
ಜ.9ರಂದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಸಂಬಂಧ ಮೃತಳ ತಾಯಿ ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನನ್ವಯ ಎಫ್ಐಆರ್ ದಾಖಲಾಗಿದೆ. ಯಶಸ್ವಿನಿ ಸಾವಿಗೆ ಕಾಲೇಜು ಉಪನ್ಯಾಸಕರ ನೀಡುತ್ತಿದ್ದ ಕಾರಣ, ಅಲ್ಲದೇ ಕ್ಲಾಸಿನಲ್ಲಿ ಯಶಸ್ವಿನಿ ಬಣ್ಣದ ಬಗ್ಗೆ ಮಾತನಾಡಿ ಟೀಕಿಸಿದ್ದಾರೆ. ಸೆಮಿನಾರ್ ಅಟೆಂಡ್ ಮಾಡಲು ಸಹ ಅವಕಾಶ ನೀಡಿಲ್ಲ, ಕಣ್ಣು ನೋವು ಎಂದಾಗ ಅವಮಾನಿಸಿ ಕಿರುಕುಳ ನೀಡಿದ್ದಾರೆ. ಹೀಗಾಗಿ ಉಪನ್ಯಾಸಕರ ವಿರುದ್ಧ ಆದಷ್ಟು ಬೇಗ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆರೋಪಿಸಿದ್ದಾರೆ.
ಏನಿದು ಪ್ರಕರಣ?
ಮೃತ ವಿದ್ಯಾರ್ಥಿನಿ ಬುಧವಾರ (ಜ.7) ಕಣ್ಣು ನೋವಿನಿಂದಾಗಿ ಕಾಲೇಜಿಗೆ ರಜೆ ಹಾಕಿದ್ದರು. ಮಾರನೇ ದಿನ ಕಾಲೇಜಿಗೆ ಹೋದಾಗ ಕಣ್ಣಿಗೆ ಯಾವ ಕಣ್ಣಿನ ಡ್ರಾಪ್ಸ್ ಬಳಸಿದೆ? ಎಷ್ಟು ಹನಿ ಡ್ರಾಪ್ಸ್ ಹಾಕಿಕೊಂಡೆ? ಇಡೀ ಬಾಟಲ್ ಸುರಿದುಕೊಂಡ್ಯಾ ಎಂದು ವಿದ್ಯಾರ್ಥಿಗಳ ಮುಂದೆ ಉಪನ್ಯಾಸಕರು ಅವಮಾನಿಸಿದ್ದರು. ಅದಾದ ಬಳಿಕ ಸೆಮಿನಾರ್ಗೆ ಅವಕಾಶ ನೀಡಿರಲಿಲ್ಲ. ಜೊತೆಗೆ ರೆಡಿಯಾಲಜಿ ಕೇಸ್ ಕೂಡ ನೀಡದೇ ಕಿರುಕುಳ ನೀಡಿದ್ದರು ಎಂದು ಆರೋಪ ಕೇಳಿಬಂದಿದೆ.
ಈ ಕುರಿತು ಮೃತಳ ತಾಯಿ ಕಾಲೇಜು ಆಡಳಿತ ಮಂಡಳಿ ವಿರುದ್ಧ ಆರೋಪಿಸಿ, ಕಾಲೇಜಿಗೆ ರಜೆ ಹಾಕಿದ್ದಕ್ಕೆ ನನ್ನ ಮಗಳಿಗೆ ಅವಮಾನಿಸಿದ್ದಾರೆ. ಅವಳ ಕಣ್ಣಿಗೆ ಗಾಯ ಆಗಿತ್ತು. ಹೀಗಾಗಿ ನನಗೆ ಹೇಳಿಯೇ ರಜೆ ತೆಗೆದುಕೊಂಡಿದ್ದಾಳೆ. ಯಾವ ಡ್ರಾಪ್ಸ್ ಹಾಕಿದೆ ಅಂತೆಲ್ಲ ವಿದ್ಯಾರ್ಥಿಗಳ ಮುಂದೆ ಕೇಳಿ, ಅವಮಾನಿಸಿದ್ದಾರೆ. ಯಾಕೆ ಅವರಿಗೆ ಮಕ್ಕಳು ಇಲ್ವಾ? ಅವಳು ಇದನ್ನೆಲ್ಲ ನನಗೆ ಹೇಳಿದ್ದಾಳೆ. ಉಪನ್ಯಾಸಕರು ಮಾತ್ರವಲ್ಲದೇ ಕಾಲೇಜು ಆಡಳಿತ ಮಂಡಳಿ ಕೂಡ ಕಿರುಕುಳ ನೀಡಿದ್ದಾರೆ. ಹೀಗಾಗಿ ಅವರ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದರು. ಅದಾದ ಬಳಿಕ ಸಿಕ್ಕಿದ್ದ ಡೆತ್ನೋಟ್ನಲ್ಲಿ, ಮೃತ ಯಶಸ್ವಿನಿ ನಾನು ಬದುಕಕ್ಕೆ ಯೋಗ್ಯಳಲ್ಲ, ಕ್ಷಮಿಸಿಬಿಡಿ. ನನ್ನ ಸಾವಿಗೆ ಯಾರು ಕಾರಣರಲ್ಲ. ನಾನು ಒಳ್ಳೆಯ ಮಗಳಲ್ಲ. ಅಮ್ಮ ಥ್ಯಾಂಕ್ಯೂ ಸೋ ಮಚ್ ಎಂದು ಬರೆದುಕೊಂಡಿದ್ದರು.
ಇನ್ನೂ ಕಾಲೇಜಿನಲ್ಲಿ ಮೃತ ಯಶಸ್ವಿನಿ ಅಳುತ್ತಾ ಕುಳಿತಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಾಲೇಜು ಸಿಬ್ಬಂದಿ ಹಾಗೂ ಸೀನಿಯರ್ ಯಶಸ್ವಿನಿಗೆ ಕಿರುಕುಳ ನೀಡುತ್ತಿದ್ದರು. ಅಲ್ಲದೇ ಬರೋದು ಸ್ಲಂನಿಂದ ಕೋತಿಯ ಹಾಗೆ ಇದ್ದೀಯಾ ಎಂದು ಅವಮಾನಿಸಿದ್ದರು. ಈ ಬಗ್ಗೆ ಪೋಷಕರು ಆಡಳಿತ ಮಂಡಳಿಗೆ ದೂರು ನೀಡಿದ್ದರು ಎಂದು ತಿಳಿದುಬಂದಿದೆ.ಇದನ್ನೂ ಓದಿ: ರಜೆ ಹಾಕಿದ್ದಕ್ಕೆ ಕಾಲೇಜಿನಲ್ಲಿ ಅವಮಾನ – ಕಿರುಕುಳ ತಾಳಲಾರದೇ ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ

