ಕ್ಯಾಲೆಂಡರ್ ಹೆಸರಿನಲ್ಲಿ ಬಂತು ಸಿನಿಮಾ: ಆದರ್ಶ್ ನಾಯಕ

2 Min Read

ಹಿಂದೆ ಸ್ವಾರ್ಥ ರತ್ನ ಸೇರಿದಂತೆ ಎರಡು ಚಿತ್ರಗಳಲ್ಲಿ ನಟಿಸಿದ್ದ ಆದರ್ಶ ಗುಂಡುರಾಜ್ ಸದ್ಯ ಕ್ಯಾಲೆಂಡರ್ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರದ ನಾನ್ಯಾರು ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಹಾಡಿಗೆ ಮೆಚ್ಚುಗೆ ವ್ಯಕ್ತವಾಗಿ, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಇತ್ತೀಚೆಗೆ ಹಾಡು ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಸ್ವಾರ್ಥ ರತ್ನ ನಂತರ ಈ ಚಿತ್ರದ ನಾಯಕನಾಗಿ ಅಭಿನಯಿಸಿದ್ದೇನೆ. ಇದು ನಾನು ನಾಯಕನಾಗಿ ನಟಿಸಿರುವ ಮೂರನೇ ಚಿತ್ರ. ವರ್ಷಗಳು ಕಳೆಯುತ್ತಿರುತ್ತದೆ. ಆದರೆ ದಿನವನ್ನು ಗುರುತಿಸಲು ನಮಗೆ ಕ್ಯಾಲೆಂಡರ್ ಬಹಳ ಸಹಾಯಕಾರಿ. ಶೀರ್ಷಿಕೆಗೂ ಹಾಗೂ ಚಿತ್ರಕ್ಕೂ ಸಂಬಂಧವಿದೆ. ನಾನೇ ಚಿತ್ರಕ್ಕೆ ಕಥೆ ಬರೆದು ನಿರ್ಮಾಣ ಮಾಡಿದ್ದೇನೆ. ಹೆಣ್ಣುಮಕ್ಕಳಿಗಂತೂ ಈ ಕಥೆ ಬಹಳ ಹತ್ತಿರವಾಗುತ್ತದೆ. ಈಗಾಗಲೇ ಚಿತ್ರಕ್ಕೆ ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿದೆ. ಇಂದು ನಾನ್ಯಾರೊ ಎಂಬ ಮೊದಲ ಹಾಡಿನ ಅನಾವರಣವಾಗಿದೆ. ಸಂಜಯ್ ವೈ ಬಿ ಹೆಚ್ ಹಾಗೂ ನವೀನ್ ಶಕ್ತಿ ಈ ಹಾಡನ್ನು ಬರೆದಿದ್ದು, ನನ್ನ ಮಗಳು ಅನುಷ್ಕಾ ಕಾಗಿನೆರೆ ಈ ಹಾಡನ್ನು ಹಾಡಿದ್ದಾರೆ. ಹೃತಿಕ್ ಪೂಜಾರಿ ಹಾಗೂ ಸಂಜಯ್ ಕೂಡ ಗಾಯನಕ್ಕೆ ಜೊತೆಯಾಗಿದ್ದಾರೆ. ಸುನಾದ್ ಗೌತಮ್ ಸಂಗೀತ ನೀಡಿದ್ದಾರೆ ಎಂದು ನಾಯಕ ಹಾಗೂ ನಿರ್ಮಾಪಕ ಆದರ್ಶ ಗುಂಡುರಾಜ್ ತಿಳಿಸಿದರು.

ನಾನು ಮೂಲತಃ ರಂಗಭೂಮಿಯವವನು. 5000ಕ್ಕೂ ಅಧಿಕ ಬೀದಿ ನಾಟಕಗಳನ್ನು ಮಾಡಿದ್ದೇನೆ. ನಿರ್ದೇಶಕನಾಗಿ ಇದು ಮೊದಲ ಚಿತ್ರ. ‘ಕ್ಯಾಲೆಂಡರ್’ನಲ್ಲಿ ಎಲ್ಲರ ಮನಸ್ಸಿಗೂ ಹತ್ತಿರವಾಗುವ ಕಥೆಯನ್ನು ಆದರ್ಶ ಗುಂಡುರಾಜ್ ಬರೆದಿದ್ದಾರೆ. ರಮೇಶ್ ಕೊಯಿರಾ ಅವರ ಛಾಯಾಗ್ರಹಣ ಹಾಗೂ ಸುನಾದ್ ಗೌತಮ್ ಸಂಗೀತ ನಿರ್ದೇಶನವಿರುವ ಈ ಚಿತ್ರದ ನಾಯಕನಾಗಿ ಆದರ್ಶ ಗುಂಡುರಾಜ್ ಅಭಿನಯಿಸಿದ್ದಾರೆ. ಸುಶ್ಮಿತಾ ಹಾಗೂ ನಿವಿಷ್ಕ ಪಾಟೀಲ್ ನಾಯಕಿಯರು. ವಿಶೇಷ ಪಾತ್ರದಲ್ಲಿ ಕನಸಿನ ರಾಣಿ ಮಾಲಾಶ್ರೀ ಕಾಣಿಸಿಕೊಂಡಿದ್ದಾರೆ. ರಮೇಶ್ ಇಂದಿರಾ, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡು, ಸುಚೇಂದ್ರ ಪ್ರಸಾದ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಇಂದು ಮೊದಲ ಹಾಡು ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ ಎಂದರು ನಿರ್ದೇಶಕ ನವೀನ್ ಶಕ್ತಿ. ಹಾಡಿನ ಬಗ್ಗೆ ಸಂಗೀತ ನಿರ್ದೇಶಕ ಸುನಾದ್ ಗೌತಮ್ ಹಾಗೂ ಗಾಯಕಿ ಅನುಷ್ಕಾ ಮಾತನಾಡಿದರು. ನಾಯಕಿಯರಾದ ಸುಶ್ಮಿತ ಹಾಗೂ ನಿವಿಷ್ಕಾ ಪಾಟೀಲ್ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು.

Share This Article