ಚಿಕ್ಕಬಳ್ಳಾಪುರ: ಹೈವೇಯಲ್ಲಿ ಮಹಿಳಾ ಟೆಕ್ಕಿಯೊಬ್ಬಳು ಅಡ್ಡಾದಿಡ್ಡಿ ಸ್ಕೂಟಿ ಚಾಲನೆ ಮಾಡುತ್ತಿದ್ದಿದ್ದನ್ನು ಪ್ರಶ್ನಿಸಿದ್ದಕ್ಕೆ ಬೈಕ್ ಸವಾರರಿಗೆ ಚಾಕು ಇರಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಬೈಕ್ ಸವಾರರಿಗೆ ಚಾಕು ಇರಿದ ಮಹಿಳಾ ಟೆಕ್ಕಿಯನ್ನು ಬಿಹಾರ ಮೂಲದ ರಿಂಬಿಕಾ ಕುಮಾರಿ ಎಂದು ಗುರುತಿಸಲಾಗಿದೆ. ಈಕೆ ತನ್ನ ತಮಿಳುನಾಡು ನೋಂದಣಿಯ ಸ್ಕೂಟಿ ಏರಿ ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಕಡೆಗೆ ಬಂದು ವಾಪಾಸ್ ಬೆಂಗಳೂರಿನತ್ತ ತೆರಳುತ್ತಿದ್ದಳು. ಈ ವೇಳೆ ಬೆಂಗಳೂರು ಹೈದರಾಬಾದ್ ಹೈವೆಯಲ್ಲಿ ಅಡ್ಡಾ ದಿಡ್ಡಿಯಾಗಿ ಸ್ಕೂಟಿ ಒಡಿಸ್ತಾ ಹಿಂದೆ ಬರ್ತಿದ್ದ ಸವಾರರಿಗೆ ಇರುಸು ಮುರುಸು ಉಂಟು ಮಾಡಿದ್ದಳು. ಹೀಗಾಗಿ ವಾಪಸಂದ್ರೆ ಸೇತುವೆ ಕೆಳಗಡೆ ಸ್ಕೂಟಿ ನಿಲ್ಲಿಸಿ ನಿಂತಿದ್ದ ಈಕೆಯನ್ನ ಹಿಂಬದಿ ಬರುತ್ತಿದ್ದ ಬೈಕ್ ಸವಾರರಾದ ನಿಖಿಲ್ ಹಾಗೂ ನರಸಿಂಹಮೂರ್ತಿ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಕಾಲೇಜಲ್ಲಿ ಶೋಕಿಗಾಗಿ ಮನೆಗಳ್ಳತನಕ್ಕಿಳಿದಿದ್ದ ಏರೋಸ್ಪೇಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಬಂಧನ!
ಯಾಕಮ್ಮ ಗಾಡಿ ಅಡ್ಡಾದಿಡ್ಡಿ ಒಡಿಸ್ತಿದ್ದೀಯಾ? ಅಂದಿದ್ದೇ ತಡ ಆಕೆ ಬಳಿ ಇದ್ದ ಫೋಲ್ಡೆಡ್ ಚಾಕುವಿನಿಂದ ಆಟ್ಯಾಕ್ ಮಾಡಿದ್ದಾಳೆ. ಇದ್ರಿಂದ ಬೈಕ್ ಸವಾರ ನಿಖಿಲ್ ಕೈಗೆ ಗಂಭೀರ ಗಾಯವಾಗಿ ತೀವ್ರ ರಕ್ತಸ್ರಾವವಾಗಿದೆ, ಹಿಂಬದಿ ಸವಾರ ನರಸಿಂಹಮೂರ್ತಿಗೆ ಸಣ್ಣಪುಟ್ಟ ಗಾಯವಾಗಿದೆ. ಆಕೆ ಚಾಕುವಿನಿಂದ ಆಟ್ಯಾಕ್ ಮಾಡ್ತಿದ್ದಂತೆ ಯುವಕ ನಿಖಿಲ್ ಸಹ ತಿರುಗಿ ಆಕೆ ಮೇಲೆ ಹಲ್ಲೆ ಮಾಡಿದ್ದಾನೆ. ಈ ಎಲ್ಲಾ ದೃಶ್ಯಗಳು ಸ್ಥಳೀಯ ಹೋಟೆಲ್ವೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಆಗ್ತಿದ್ದಂತೆ ಇತರೆ ವಾಹನ ಸವಾರರು, ಸ್ಥಳೀಯರು ಜಮಾಯಿಸಿ ಯುವತಿಯನ್ನ ರೆಡ್ ಹ್ಯಾಂಡಾಗಿ ಹಿಡಿದುಕೊಂಡಿದ್ದಾರೆ. ಪೊಲೀಸರನ್ನ ಕರೆಸಿ ಆಕೆಯನ್ನ ಒಪ್ಪಿಸಿದ್ದಾರೆ.
ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಯುವಕ ನಿಖಿಲ್ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡು ರಿಂಬಿಕಾಳನ್ನ ವಿಚಾರಣೆ ನಡೆಸುತ್ತಿದ್ದಾರೆ. ಯುವಕರು ನನ್ನನ್ನ ಫಾಲೋ ಮಾಡಿ ಅನುಚಿತವಾಗಿ ವರ್ತನೆ ಮಾಡಿದ್ರು ಅದಕ್ಕೆ ನಾನು ಚಾಕುವಿನಿಂದ ಆಟ್ಯಾಕ್ ಮಾಡಿದೆ ಎಂದು ಆಕೆ ಆರೋಪಿಸಿದ್ದಾಳೆ. ಆಕೆ ಪೊಲೀಸ್ ಠಾಣೆಯಲ್ಲೂ ಪೊಲೀಸರಿಗೆ ಸಹಕರಿಸದೆ ಚಿತ್ರ ವಿಚಿತ್ರವಾಗಿ ವರ್ತಿಸುತ್ತಿದ್ದಾಳೆ.
ಚೆನ್ನೈನಲ್ಲಿ ವಿದ್ಯಾಬ್ಯಾಸ ಮುಗಿಸಿದ್ದ ರಿಂಬಿಕಾ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು, ಕಾಡುಗೋಡಿಯಲ್ಲಿ ವಾಸವಾಗಿದ್ದಳು ಎಂದು ತನಿಖೆ ವೇಳೆ ತಿಳಿದು ಬಂದಿದೆ. ಇದನ್ನೂ ಓದಿ: ಗಣಿಗಾರಿಕೆ ಸಚಿವಾಲಯದ ನಿಯೋಗ ಹೊತ್ತ ವಿಮಾನ ಅಪಘಾತ – ಎಲ್ಲರೂ ಪಾರು
