ತಂದೆಗೆ ಕ್ಯಾನ್ಸರ್, ತಾಯಿ ಜೊತೆಗೂಡಿ ರೊಟ್ಟಿ ಮಾರಿ ಓದಿನಲ್ಲೂ ಮುಂದಿರೋ ಈ ಸಹೋದರಿಯರ ಶಿಕ್ಷಣಕ್ಕೆ ಬೇಕಿದೆ ನೆರವು

Public TV
2 Min Read

ದಾವಣಗೆರೆ: ಇವರು ಓದಿ, ಓಳ್ಳೆಯ ಕೆಲಸಕ್ಕೆ ಸೇರಿಕೊಂಡು ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುವ ಕನಸನ್ನು ಇಟ್ಟುಕೊಂಡಿದ್ದರು. ಆದ್ರೆ ವಿಧಿ ಆಟವೇ ಬೇರೆಯಾಗಿತ್ತು. ಚೆನ್ನಾಗಿ ಓದುವ ವಯಸ್ಸಿನಲ್ಲಿ ರೊಟ್ಟಿ ಸುಟ್ಟು ಅದನ್ನು ಮಾರಿ ಜೀವನ ಸಾಗಿಸಬೇಕಾಯಿತು. ಆದರೂ ತಮ್ಮ ಕನಸನ್ನು ಬಿಡದ ಸಹೋದರಿಯರು ಕೆಲಸ ಮಾಡುತ್ತಲೇ ಶಾಲೆಯ ಮೆಟ್ಟಿಲನ್ನು ಏರಿದ್ದಾರೆ.

ಹೌದು. ಇಂಥದೊಂದು ಮನಕಲುಕುವ ಸನ್ನಿವೇಶ ಕಂಡು ಬಂದಿದ್ದು ದಾವಣಗೆರೆಯ ಎಸ್‍ಒಜಿ ಕಾಲೋನಿಯಲ್ಲಿ. ಕಳೆದ ಹಲವು ವರ್ಷಗಳಿಂದ ಇದೇ ಕಾಲೋನಿಯಲ್ಲಿ ವಾಸವಾಗಿದ್ದ ಅಂಜಿನಪ್ಪ ಹಾಗೂ ಮಂಜುಳ ದಂಪತಿ ತಳ್ಳುವ ಗಾಡಿಯಲ್ಲಿ ಹೋಟೆಲ್ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇಬ್ಬರು ಮಕ್ಕಳಾದ ರಂಜಿತ ಹಾಗೂ ರಕ್ಷಿತಾ ನಗರದ ಪ್ರತಿಷ್ಠಿತ ಶಾಲೆಯಲ್ಲಿ ಚೆನ್ನಾಗಿ ಓದುತ್ತಿದ್ದರು.

ಮಕ್ಕಳು ಓದಿ ಒಳ್ಳೆಯ ಮಟ್ಟಕ್ಕೆ ಬೆಳೆದ್ರೆ ಅದಕ್ಕಿಂತ ಸಂಪತ್ತು ಯಾವುದಿದೆ ಎನ್ನುವ ದೃಷ್ಟಿಯಿಂದ ಅಂಜಿನಪ್ಪ ಹಾಗೂ ಮಂಜುಳ ಕಷ್ಟಪಟ್ಟು ಹಗಲು ರಾತ್ರಿಯೆನ್ನದೆ ದುಡಿಯುತ್ತಿದ್ದರು. ಆದ್ರೆ ವಿಧಿ ಆಟವೇ ಬೇರೆಯಾಗಿತ್ತು. ಮನೆಯ ಆಧಾರ ಸ್ತಂಭವಾಗಿದ್ದ ಅಂಜಿನಪ್ಪನಿಗೆ ಕ್ಯಾನ್ಸರ್ ಎನ್ನುವ ಮಹಾಮಾರಿಯಿಂದ ಮೂಲೆ ಸೇರುವಂತಾಯಿತು.

ಇತ್ತ ಕುಟುಂಬ ನಿರ್ವಹಣೆಗೆ ಮಕ್ಕಳು ತಾಯಿಯ ಜೊತೆ ಸೇರಿ ರೊಟ್ಟಿ ಮಾಡಿ ಹೋಟೆಲ್ ಗಳಿಗೆ ಕೊಟ್ಟು ಅದರಿಂದ ಬಂದಂತಹ ಹಣದಿಂದ ಜೀವನ ನಡೆಸುತ್ತಿದ್ದಾರೆ. ಈ ಕಷ್ಟದ ಪರಿಸ್ಥಿತಿಯಲ್ಲಿ ಕೂಡ ಓದುವ ಛಲ ಮಾತ್ರ ಇಬ್ಬರು ಅಕ್ಕ ತಂಗಿಯರು ಬಿಟ್ಟಿಲ್ಲ. ಎಲ್ಲಾ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಓದಬೇಕು ಎನ್ನುವ ಛಲದಿಂದ ಮುನ್ನುಗ್ಗುತ್ತಿದ್ದಾರೆ. ಆದ್ರೆ ಮನೆಯ ಪರಿಸ್ಥಿತಿ ಮಾತ್ರ ಚಿಂತಾಜನಕವಾಗಿದೆ.

ಬಾಲಕಿಯರಿಬ್ಬರು ಬೆಳಿಗ್ಗೆ ಬೇಗ ಎದ್ದು ರೊಟ್ಟಿ ಮಾಡಿ, ತಂದೆಯ ಯೋಗಕ್ಷೇಮ ವಿಚಾರಿಸಿಕೊಂಡು ಶಾಲೆಗೆ ಹೋಗುವುದೇ ಪ್ರತಿನಿತ್ಯದ ಕೆಲಸವಾಗಿದೆ. ಮನೆಯ ಪರಿಸ್ಥಿತಿಯನ್ನು ನಿಭಾಯಿಸಿಕೊಂಡು ತಾಯಿಗೆ ಆಸರೆಯಾಗಿ ನಂತರ ಶಾಲೆಗೆ ಹೋಗುತ್ತಿದ್ದಾರೆ. ಓದಿನಲ್ಲಿ ಎಲ್ಲರಿಗಿಂತ ಮುಂದಿರುವ ಈ ಸಹೋದರಿಯರು ಭವಿಷ್ಯದಲ್ಲೂ ಒಳ್ಳೆಯ ಕೆಲಸ ಮಾಡಿ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವುದು ಇವರ ಕನಸಾಗಿದೆ.

ಒಟ್ಟಾರೆಯಾಗಿ ಛಲದಿಂದ ಓದಿನ ಕಡೆ ಆಸಕ್ತಿ ತೋರುತ್ತಿರುವ ಈ ಸಹೋದರಿಯರಿಗೆ ಆಸರೆಯ ಕೈಗಳು ಬೇಕಾಗಿವೆ. ಓದಿ ಒಳ್ಳೆಯ ಉದ್ಯೋಗ ಪಡೆದು ತಂದೆ ತಾಯಿಯನ್ನು ನೋಡಿಕೊಳ್ಳಬೇಕು ಎನುಯಿವರ ಕನಸು ನನಸಾಗಲಿ ಎನ್ನುವುದು ನಮ್ಮ ಅಶಯವಾಗಿದೆ

 

Share This Article
Leave a Comment

Leave a Reply

Your email address will not be published. Required fields are marked *