ಚಿಕ್ಕಮಗಳೂರು: ರಸ್ತೆ ದಾಟುತ್ತಿದ್ದ ಕಾಡಾನೆಗೆ (Elephant) ಕಾರು ಡಿಕ್ಕಿಯಾಗಿ (Accident) ಕಾರಿನ ಮೇಲೆ ಬಿದ್ದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿರುವ ಘಟನೆ ಎನ್.ಆರ್.ಪುರ (NR Pura) ತಾಲೂಕಿನ 9ನೇ ಮೈಲಿಗಲ್ಲಿನ ಸಮೀಪದ ಬುಡಗಮನೆ ಗ್ರಾಮದ ಬಳಿ ನಡೆದಿದೆ.
9ನೇ ಮೈಲಿಗಲ್ಲು ಸಮೀಪದ ಚಿಕ್ಕ ಅಗ್ರಹಾರ ಅರಣ್ಯ ವ್ಯಾಪ್ತಿಯಲ್ಲಿ ಎರಡು ಕಾಡಾನೆಗಳು ರಸ್ತೆ ದಾಟುತ್ತಿದ್ದವು. ಒಂದು ಕಾಡಾನೆ ರಸ್ತೆ ದಾಟಿದ್ದು ಮತ್ತೊಂದು ರಸ್ತೆ ದಾಟುವಾಗ ತಿರುವಿನಲ್ಲಿ ಬಂದಂತಹ ಕಾರು ಆನೆಗೆ ಡಿಕ್ಕಿ ಹೊಡೆದಿದೆ. ಕಾರು ಆನೆಗೆ ಡಿಕ್ಕಿ ಹೊಡೆದ ಪರಿಣಾಮ ಆನೆ ಕಾರಿನ ಮೇಲೆಯೇ ಬಿದ್ದಿದೆ. ಇದರಿಂದ ಕಾರಿನ ಮುಂಭಾಗ ಬಹುತೇಕ ಜಖಂಗೊಂಡಿದೆ. ಕೂಡಲೇ ಎದ್ದು ನಿಂತ ಕಾಡಾನೆ ಕಾರಿನ ಮೇಲೆ ಯಾವುದೇ ಪ್ರತಿರೋಧ ತೋರದೆ ಕಾಡಿನೊಳಗಡೆ ಓಡಿ ಹೋಗಿದೆ. ಇದನ್ನೂ ಓದಿ: ಬುರುಡೆ ಕೇಸ್| ವಿಚಾರಣೆ ವೇಳೆ ಹಲ್ಲೆ – ಎಸ್ಐಟಿ ಅಧಿಕಾರಿಗಳ ವಿರುದ್ಧವೇ ಜಯಂತ್ ದೂರು
ಕಾರಿನಲ್ಲಿ ಮೂವರು ಯುವಕರು ಪ್ರಯಾಣಿಸುತ್ತಿದ್ದು ತಿರುವಿನಲ್ಲಿ ಆನೆಯನ್ನ ನೋಡಿದ ಕೂಡಲೇ ಹುಡುಗರು ಗಾಬರಿಗೊಂಡು ಆನೆಗೆ ಡಿಕ್ಕಿ ಹೊಡೆಸಿದ್ದಾರೆ. ಅದೃಷ್ಟವಶಾತ್ ಆನೆಯೂ ಗಾಬರಿಯಾಗಿ ಪ್ರತಿರೋಧ ತೋರದ ಕಾರಣ ಯುವಕರು ಅನಾಹುತದಿಂದ ಪಾರಾಗಿದ್ದಾರೆ. ಎನ್.ಆರ್.ಪುರದಿಂದ ಬಾಳೆಹೊನ್ನೂರು ರಾಜ್ಯ ಹೆದ್ದಾರಿಯಲ್ಲಿ ಈ ಅವಘಡ ಸಂಭವಿಸಿದೆ.
ಸಂಜೆ ಬಳಿಕ ಈ ರಸ್ತೆಯಲ್ಲಿ ವಾಹನಗಳ ಸಂಖ್ಯೆ ತೀರಾ ಕಡಿಮೆ ಇರುತ್ತದೆ. ಹೆಚ್ಚಿನ ಅರಣ್ಯ ಪ್ರದೇಶದ ಈ ಮಾರ್ಗದಲ್ಲಿ ಆಗಾಗ ಆನೆಗಳು ರೋಡ್ ಕ್ರಾಸ್ ಮಾಡುತ್ತವೆ. ಸಾಮಾನ್ಯವಾಗಿ ಆನೆಗಳು ರೋಡ್ ಕ್ರಾಸ್ ಮಾಡುವಾಗ ವೇಗವಾಗಿರುತ್ತವೆ. ಆದರೆ, ಇಲ್ಲಿ ಆನೆಗಳು ಕೂಡ ನಿಧಾನವಾಗಿದ್ದವು. ಅದರಿಂದಲೇ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: Nelamangala | ರಿವರ್ಸ್ ತೆಗೆಯುವಾಗ ಕಾರು ಹರಿದು ಮಗು ದುರ್ಮರಣ
