ಚುನಾವಣೆ ಆರಂಭದಿಂದಲೇ ನ್ಯಾಯಯುತವಾಗಿ ನಡೆದಿಲ್ಲ – ಬಿಹಾರ ಸೋಲಿನ ಬಗ್ಗೆ ರಾಹುಲ್ ಫಸ್ಟ್‌ ರಿಯಾಕ್ಷನ್‌

Public TV
2 Min Read

– ಬಿಹಾರ ಫಲಿತಾಂಶ ಅಚ್ಚರಿ ತಂದಿದೆ
– ಪ್ರಜಾಪ್ರಭುತ್ವ ದುರ್ಬಲಗೊಳಿಸುವವರ ವಿರುದ್ಧ ಹೋರಾಟ: ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್‌ ಭಾರೀ ಮುಖಭಂಗ ಅನುಭವಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಬಿಹಾರ ವಿಧಾನಸಭಾ ಚುನಾವಣೆ (Bihar Assembly Election) ಆರಂಭದಿಂದಲೂ ನ್ಯಾಯಯುತವಾಗಿ ನಡೆದಿಲ್ಲ ಎಂದು ಆರೋಪಿಸಿದ್ದಾರೆ.

243 ವಿಧಾನಸಭಾ ಕ್ಷೇತ್ರದಲ್ಲಿ ಎನ್‌ಡಿಎ 200ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತಿದ್ದಂತೆ ಎಕ್ಸ್‌ನಲ್ಲಿ ಈ ಬಗ್ಗೆ ರಾಹುಲ್‌ ಗಾಂಧಿ ಪೋಸ್ಟ್‌ ಮಾಡಿದ್ದಾರೆ. ಫಲಿತಾಂಶವು ಆಶ್ಚರ್ಯಕರವಾಗಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದಿದ್ದಾರೆ. ಇದನ್ನೂ ಓದಿ: ಬಿಹಾರದ ಗೆಲುವು ಹೊಸ ʻMYʼ ಸೂತ್ರ ಕೊಟ್ಟಿದೆ – ಸುಳ್ಳು ಸೋಲುತ್ತದೆ, ಜನರ ನಂಬಿಕೆ ಗೆಲ್ಲುತ್ತದೆ ಅನ್ನೋದನ್ನ ಮತ್ತೊಮ್ಮೆ ತೋರಿಸಿದೆ: ಮೋದಿ

ಮಹಾಘಟಬಂಧನ್‌ಗೆ ಬೆಂಬಲಿಸಿದ ಬಿಹಾರದ ಲಕ್ಷಾಂತರ ಮತದಾರರಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಬಿಹಾರದಲ್ಲಿ ಈ ಫಲಿತಾಂಶ ನಿಜಕ್ಕೂ ಆಶ್ಚರ್ಯ ತಂದಿದೆ. ಆರಂಭದಿಂದಲೂ ನ್ಯಾಯಯುತವಾಗಿ ನಡೆಯದ ಈ ಚುನಾವಣೆಯಲ್ಲಿ ನಾವು ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ.

ಬಿಹಾರ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ (Congress) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ನಾವು ಬಿಹಾರದ ಜನರ ನಿರ್ಧಾರವನ್ನು ಗೌರವಿಸುತ್ತೇವೆ. ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವಲ್ಲಿ ತೊಡಗಿರುವ ಶಕ್ತಿಗಳ ವಿರುದ್ಧ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ. ನಾವು ಚುನಾವಣಾ ಫಲಿತಾಂಶಗಳ ಕೂಲಂಕಷ ಅಧ್ಯಯನ ಮಾಡುತ್ತೇವೆ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಯಾವ ಕಾಂಗ್ರೆಸ್‌ ಕಾರ್ಯಕರ್ತರು ನಿರುತ್ಸಾಹಗೊಳ್ಳುವ ಅಗತ್ಯವಿಲ್ಲ. ನಿಮ್ಮ ಕಠಿಣ ಪರಿಶ್ರಮವೇ ನಮ್ಮ ಶಕ್ತಿ. ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ನಾವು ಯಾವುದೇ ಅವಕಾಶವನ್ನು ಬಿಡುವುದಿಲ್ಲ. ಜನರ ನಡುವೆ ಉಳಿಯುವ ಮೂಲಕ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ಹೋರಾಟವನ್ನು ನಾವು ಮುಂದುವರಿಸುತ್ತೇವೆ. ನಾವು ಸಂಪೂರ್ಣ ಸಮರ್ಪಣೆ, ಧೈರ್ಯ ಮತ್ತು ಸತ್ಯದಿಂದ ಹೋರಾಡುತ್ತೇವೆ ಎಂದು ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ: Bihar Election Result | ಮಹಾಘಟಬಂಧನ್ ನುಚ್ಚು ನೂರಾಗಿದ್ದು ಹೇಗೆ..?

Share This Article