ಡಿಸ್ಕೌಂಟ್‌ ಆಫರ್ ಹೆಸರಿನಲ್ಲಿ 300 ಜನರಿಗೆ ಹಣ ವಂಚನೆ – ತಮಿಳುನಾಡಿನ ಮೂವರ ಬಂಧನ

1 Min Read

ಕಾರವಾರ: ಡಿಸ್ಕೌಂಟ್ ಆಫರ್ ನೀಡುವ ಆಮಿಷವೊಡ್ಡಿ 300 ಜನರಿಗೆ ಹಣ ವಂಚನೆ ಮಾಡಿದ ಪ್ರಕರಣದಲ್ಲಿ ತಮಿಳುನಾಡು ಮೂಲದ ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ಭಟ್ಕಳದಲ್ಲಿ ನಡೆದಿದೆ.

ತಮಿಳುನಾಡು ಮೂಲದ ತಾಂಜಾವೂರು ಜಿಲ್ಲೆಯ ತಿರಿಚಿಂತ್ರಂಬಳಂನ ಎಂ.ಗಣೇಶನ್ (52), ಸೌತ್ ಸ್ಟ್ರೀಟ್ ರಾಜಾಮಡಂನ ತ್ಯಾಗರಾಜನ್ (65), ಅನಸಾಲ ಸ್ಟ್ರೀಟ್‌ನ ಮೈಯನಾದನ್ (42) ಬಂಧಿತ ಆರೋಪಿಗಳಾಗಿದ್ದಾರೆ.

ಭಟ್ಕಳದ ಮಹ್ಮದ್ ಸವೂದ್ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡ ಭಟ್ಕಳ ಶಹರ ಠಾಣೆ ಪೊಲೀಸರು‌ ತನಿಖೆ ನಡೆಸಿದ್ದರು. ಭಟ್ಕಳ ನಗರದಲ್ಲಿ ಗ್ಲೋಬಲ್ ಎಂಟರ್ ಪ್ರೈಸಸ್ ಎಂಬ ಹೆಸರಿನ ಮಳಿಗೆ ತೆರೆದು 10% ರಿಂದ 40% ಡಿಸ್ಕೌಂಟ್ ನೀಡುವುದಾಗಿ ಹೇಳಿ, 300 ಜನರಿಂದ 20 ಲಕ್ಷಕ್ಕೂ ಹೆಚ್ಚು ಮುಂಗಡ ಹಣ ಪಡೆದು ಪರಾರಿಯಾಗಿದ್ದ ಆರೋಪಿಗಳನ್ನ ಬಂಧಿಸಿದ್ದಾರೆ.

ಭಟ್ಕಳ ಸಿಪಿಐ ದಿವಾಕರ್ ಪಿ.ಎನ್ ನೇತ್ರತ್ವದಲ್ಲಿ ಪಿಎಸ್‌ಐ ನವೀನ್ ನಾಯ್ಕ ತಂಡದಿಂದ ಈ ಕಾರ್ಯಾಚರಣೆ ನಡೆದಿದ್ದು, ಘಟನೆ ನಡೆದು ಒಂದು ವಾರದೊಳೆಗೆ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.

Share This Article